ಕಾಡಲ್ಲಿ ಮೃಗ ಕಂಡು ಓಡಿ ದಾರಿತಪ್ಪಿದ್ದ ಡಿವೈಎಸ್ಪಿ, ಇನ್ಸ್ ಪೆಕ್ಟರ್ ಬೆಳಗ್ಗೆ ಪತ್ತೆ!
ಕಾರವಾರ: ಯಲ್ಲಾಪುರ ತಾಲೂಕಿನ ಲಕ್ಕಿಮನೆ ಗ್ರಾಮಕ್ಕೆ ಪ್ರಕರಣವೊಂದರ ವಿಚಾರಣೆಗೆ ತೆರಳಿದ್ದ ಡಿವೈಎಸ್ಪಿ ಶಂಕರ್ ಮಾರಿಯಾಳ್, ಇನ್ಸ್ ಪೆಕ್ಟರ್ ರವಿಕುಮಾರ್ ಹಿಂದಿರುಗುವ ವೇಳೆ ಕೈಗಾ ಬಳಿಯ ಅರಣ್ಯದಲ್ಲಿ ಕಾಡುಪ್ರಾಣಿಯೊಂದು ಎದುರಾಗಿದೆ. ಪರಿಣಾಮ ಹಿಂದಿರುಗಿ ಓಡಿದ ಅಧಿಕಾರಿಗಳು ಕಾಡಿನಲ್ಲಿದಾರಿ ತಪ್ಪಿಸಿಕೊಂಡಿದ್ದಾರೆ. ಮೊಬೈಲ್ ಗಳಿಗೆ ನೆಟ್ ವರ್ಕ್ ಸಿಕ್ಕಿಲ್ಲ, ಕೆಲ ಹೊತ್ತಿನ ಬಳಿಕ ಸ್ವಿಚ್ ಆಫ್ ಆಗಿವೆ. ಹೀಗಾಗಿ, ರಾತ್ರಿಯಿಡೀ ದಾರಿ ಹುಡುಕುತ್ತ ಕಾಡಿನಲ್ಲಿ ಕಾಲ ಕಳೆದ ಅಧಿಕಾರಿಗಳು ಬೆಳಗ್ಗೆ ಅಂಕೋಲಾ ತಾಲೂಕಿನ ಸುಂಕಸಾಳ ಗ್ರಾಮದ ಬಳಿಗೆ ಬಂದಿದ್ದಾರೆ.
ಸುಂಕಸಾಳ ಗ್ರಾಮ ವ್ಯಕ್ತಿಯೊಬ್ಬರ ಬಳಿ ಮೊಬೈಲ್ ಫೋನ್ ಪಡೆದು ಮನೆಯವರು ಮತ್ತು ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿ ವಿಷಯ ತಿಳಿಸಿದ್ದಾರೆ. ಇತ್ತ ನಿನ್ನೆ ರಾತ್ರಿಯಿಂದಲೇ ಪೊಲೀಸರು ಶೋಧ ಕಾರ್ಯನಡೆಸುತ್ತಿದ್ದರು. ನಾಪತ್ತೆಯಾದ ಅಧಿಕಾರಿಗಳ ಸಂಬಂಧಿಕರು ಆತಂಕಕ್ಕೀಡಾಗಿ ರಾತ್ರಿಪೂರ್ತಿ ನಿದ್ದೆಗೆಟ್ಟಿದ್ದರು. ಸದ್ಯ ಪ್ರಕರಣ ಸುಖಾಂತ್ಯವಾಗಿದ್ದು ನಾಪತ್ತೆ ಆಗಿದ್ದ ಪೊಲೀಸ್ ಅಧಿಕಾರಿಗಳ ಕುಟುಂಬದವರು ಹಾಗೂ ಪೊಲೀಸ್ ಇಲಾಖೆ ನಿಟ್ಟುಸಿರು ಬಿಟ್ಟಿದೆ.