ಕಾವ್ಯ
ಹೂ..ಒಲಿದ ಜೀವಿಗಳಿಗೆ ಸಾರಥಿ ಮುನಿದ ಮನಸುಗಳಿಗೆ ಬಾ..ರತಿ
ಖುಷಿ–ದುಖಃದಲ್ಲೂ ಪರಿಮಳ ಸೂಸುವ ಹೂವುಗಳು
ಜಾಲಿಬೇಲಿಗಳಲಿ ಅರಳಿ ನಗುತ್ತೆ
ಮರಗಿಡಗಳಿಗೆ ಹಬ್ಬಿ ಪರಿಮಳ ಬೀರತ್ತೆ
ಮಾಳಿಗೆ ಗೇಟ ಕುಂಡಲಿ ಭೇಧವಿಲ್ಲ ಗಂಧ ಹರಡತ್ತೆ
ತೋಟ ಬನ ವನಗಳಲಿ ಸೌರಭ ಸೂಸತ್ತೆ
ಕಂಗೊಳಿಸುತ ಧರೆಯನ್ನೆಲ್ಲ ಸುಂದರವಾಗಿಸಿ
ನೋಡುಗರ ಕಂಗಳಿಗೆ ಹಬ್ಬವಾಗಿಸಿ
ನಾಸಿಕಕೆ ಕಂಪನು ನೀಡುತ ಪಸರಿಸಿ
ದೇವ ಪೂಜೆಗೆ ಸದಾ ವಂದ್ಯವಾಗುತ
ರಸಿಕಮನಗಳಿಗೆ ಸೇತುವೆಯಾಗಿ
ಒಲಿದ ಜೀವಗಳಿಗೆ ಸಾರಥಿಯಾಗಿ
ಮುನಿದ ಮನಕೆ ಗುಚ್ಚದಲಿ ಮುದನೀಡಿ
ಪ್ರೇಮಿಗಳ ಮಿಲನಕೆ ಹಾರೈಕೆಯಾಗಿ
ಇಳೆಗೆ ಕಳೆನೀಡಿ ಸಂಭ್ರಮಿಸುವದು
ಸುಖ-ದುಃಖಗಳಲಿ ಸಂಗಾತಿಯಹುದು
ಸೃಷ್ಟಿಯ ಚೈತನ್ಯದ ಚಿನ್ಮಯಿಯಿದು
ಕೋಮಲತೆಗೆ ಇದಕ್ಕಿಂತ ಪರ್ಯಾಯವಿಲ್ಲ
ದುಂಬಿ ಭ್ರಮರಗಳ ಹಾಡಿಗೆ ತಲೆದೂಗುತ
ತನ್ನದೆಲ್ಲವ ಬರಿದಾಗಿಸುತ ಮಧುವಾಗುತ
ಸದಾ ಪರರಿಗಾಗಿ ಬದುಕುವ ಪರಿ ಅದ್ಭುತ
ಮಾದರಿ ಜೀವನ ಮನುಜನಿಗೆ ಹೇಳುತ
ತನಗಾಗಿ ಬದುಕದೆ ನಗುವ ಕಲೆ ಕಲಾತ್ಮಕ
ಬೆಳಕಿನೊಂದಿಗೆ ಅರಳಿ ಸಂಜೆಗೆ ಬಾಡುತ
ಕೊಟ್ಟೆ ಎನದೆ ಸಾಗುವ ಸೌಗಂಧದ ರಾಣಿ
ಆಸೆಯಿಲ್ಲದ ಹೂಜೀವನ ಉತ್ತಮ ಉದಾಹರಣೆ.
-ಜಯಶ್ರೀ ಭ.ಭಂಡಾರಿ.
ಬಾದಾಮಿ.
9986837446.