ಪ್ರಕೃತಿ ನಾಶದಿಂದ ಜೀವ ಸಂಕುಲಕ್ಕೆ ಕುತ್ತುಃ ನ್ಯಾ.ಬಡಿಗೇರ
ವಿಶ್ವ ಪರಿಸರ ಜಾಗೃತಿ, ಕಾನೂನು ಅರಿವು-ನೆರವು
ಯಾದಗಿರಿಃ ಅಖಂಡ ಭೂಮಂಡಲದಲ್ಲಿ ಬದುಕುವ ಪ್ರತಿ ಜೀವಿಗೂ ಉಸಿರಾಡಲು ಉತ್ತಮ ಗಾಳಿ, ಕುಡಿಯಲು ಶುದ್ಧ ನೀರು ಅಗತ್ಯವೆಂದಾದ ಮೇಲೆ ಜೀವಿಸಲು ಉತ್ತಮ ಪರಿಸರ ಇರಲೇಬೇಕು. ಉತ್ತಮ ಪರಿಸರ ನಿರ್ಮಾಣಕ್ಕೆ ನಮ್ಮೆಲ್ಲರ ಸೇವೆ, ಶ್ರಮ ಅಗತ್ಯವಾಗಿ ಬೇಕು ಎಂದು ನಗರ ನ್ಯಾಯಾಲಯದ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಪ್ರಭು ಎನ್.ಬಡಿಗೇರ ಹೇಳಿದರು.
ಜಿಲ್ಲೆಯ ಶಹಾಪುರ ನಗರದ ಕಸಾಪ ಭವನದಲ್ಲಿ ಕಾನೂನು ಸೇವಾ ಪ್ರಾಧಿಕಾರ ಹಾಗೂ ಕಸಾಪ ಮತ್ತು ವಕೀಲರ ಸಂಘದ ಆಶ್ರಯದಲ್ಲಿ ನಡೆದ ವಿಶ್ವ ಪರಿಸರ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಗಿಡ ಮರಗಳಿಂದ ಆರೋಗ್ಯಕರ ವಾತಾವರಣ ನಿರ್ಮಾಣ ಸಾಧ್ಯ. ಅದರಿಂದ ಸೋಸುವ ಶುದ್ಧ ಗಾಳಿ ಸೇವನೆಯಿಂದ ಮನುಷ್ಯ ಆರೋಗ್ಯವಾಗಿರಲು ಸಾಧ್ಯ. ಹೀಗಾಗಿ ಪ್ರತಿಯೊಬ್ಬರು ಗಿಡ ಮರಗಳ ಪೋಷಣೆ ಮಾಡಬೇಕು. ಅತಿ ಹೆಚ್ಚು ಹಸಿರು ವನ ಅರಣ್ಯ ನಿರ್ಮಿಸಿದ್ದಲ್ಲಿ, ಆ ಪ್ರದೇಶ ಉತ್ತಮ ಗಾಳಿ ಸೇವನೆ ಮಾಡಬಹುದು. ಅದರಿಂದ ಉತ್ತಮ ಮಳೆ ಬೆಳೆಯು ಚನ್ನಾಗಿ ಬರಲಿದೆ.
ಪ್ರಕೃತಿ ನಾಶ ಪಡಿಸಿದಲ್ಲಿ ಜೀವ ಸಂಕುಲಕ್ಕೆ ಕುತ್ತು ಬರುವುದದಲ್ಲಿ ಅನುಮಾನ ಬೇಡ. ಆ ಕಾರಣಕ್ಕೆ ಎಲ್ಲರೂ ಜವಬ್ದಾರಿ ಅರಿತು ನಡೆದುಕೊಳ್ಳಬೇಕು. ಹಸಿರು ನಾಶವಾಗುವಂತ ಕೆಲಸಕ್ಕೆ ಕೈಹಾಕಬೇಡ. ಪ್ಲಾಸ್ಟಿಕ್ ಬ್ಯಾಗ್ ವಸ್ತುಗಳ ಬಳಕೆ ನಿಲ್ಲಿಸಬೇಕು ಎಂದರು.
ಹೆಚ್ಚುವರಿ ಸಿವಿಲ್ ನ್ಯಾಯಧೀಶ ಹಣಮಂತರಾವ್ ಕುಲಕರ್ಣಿ ಮಾತನಾಡಿ, ಆಧುನಿಕ ತಂತ್ರಜ್ಞಾನದಲ್ಲಿ ಹಸಿರು ಉಸಿರಾಗಿಕೊಂಡು ಮನೆಯಂಗಳದಲ್ಲಿ ಮರಗಳನ್ನು ಬೆಳೆಸಿ ಪರಿಸರ ಜಾಗೃತಿಗೆ ಮಾದರಿಯಾಗಬೇಕು ಎಂದರು.
ವಕೀಲರಾದ ಆರ್.ಎಮ್.ಹೊನ್ನಾರಡ್ಡಿ ಪರಿಸರ ಮತ್ತು ಸಮಾಜ ಕುರಿತು ಉಪನ್ಯಾಸ ನೀಡಿದರು.
ಕಸಾಪ ಅಧ್ಯಕ್ಷ ಸಿದ್ದಲಿಂಗಣ್ಣ ಆನೇಗುಂದಿ, ತಾಲೂಕು ವಕೀಲರ ಸಂಘದ ಅಧ್ಯಕ್ಷ ಸಾಲೋಮನ್ ಆಲ್ಪ್ರೈಡ್, ಕಾರ್ಯದರ್ಶಿ ಸಂತೋಷ ಸತ್ಯಂಪೇಟೆ, ಸಹಾಯಕ ಅಭಿಯೋಜಕ, ಗುರುಲಿಂಗಪ್ಪ ತೇಲಿ, ಅರಣ್ಯ ಅಧಿಕಾರಿಗಳಾದ ಐ.ಬಿ.ಹೂಗಾರ, ಶ್ರೀಧರ ಯಕ್ಷಿಂತಿ ಸೇರಿದಂತೆ ಇತರರು ಉಪಸ್ಥಿತರಿದ್ದರು. ಗೌಡಪ್ಪಗೌಡ ಹುಲಕಲ್ ಪ್ರಾರ್ಥಿಸಿದರು. ಚಂದ್ರಕಲಾ ಗೂಗಲ್ ಸ್ವಾಗತಿಸಿದರು. ಬಸವರಾಜ ಸಿನ್ನೂರ ನಿರೂಪಿಸಿದರು.