83ನೇ ಕನ್ನಡ ಸಾಹಿತ್ಯ ಸಮ್ಮೇಳನ ವೇದಿಕೆ ನಿರ್ಮಾಣದಲ್ಲೂ ಗೋಲ್ ಮಾಲ್?
ಕನ್ನಡ ಸಮ್ಮೇಳನ ಅಂದರೆ ಕನ್ನಡಿಗರ ಮಾನ-ಅಪಮಾನದ ಪ್ರಶ್ನೆ ಎಚ್ಚರವಿರಲಿ
ನಾಡು-ನುಡಿ, ನೆಲ-ಜಲದ ಬಗ್ಗೆ ಅಭಿಮಾನದ ಬೀಜ ಬಿತ್ತುವ ಕನ್ನಡ ತಾಯಿ ಭುವನೇಶ್ವರಿಯ ಹಬ್ಬ. ಸಾಹಿತ್ಯ-ಸಂಸ್ಕೃತಿ ಅನಾವರಣಗೊಳಿಸುವ ಸಿರಿಗನ್ನಡ ದಿಬ್ಬ. ಕರುನಾಡಿನ ಕನ್ನಡಾಭಿಮಾನಿಗಳ ಸುಂದರ ಜಾತ್ರೆ. ಪರಭಾಷಿಗರಿಗೂ ಕನ್ನಡಮ್ಮನ ಮಡಿಲಿಗೆ ಬರ ಸೆಳೆಯುವ ಕನ್ನಡ ಯಾತ್ರೆ. ಹೌದು, ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಂಥದ್ದೊಂದು ಶಕ್ತಿ ಇದೆ.
ರಾಷ್ಟ್ರಕವಿ ಕುವೆಂಪು ಅವರಿಂದ ಹಿಡಿದು ಇಂದಿನ ಹಿರಿಯ ಸಾಹಿತಿ ಚಂದ್ರಶೇಖರ್ ಪಾಟೀಲರವರೆಗೆ ಅನೇಕ ಮಹನೀಯರು ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಕನ್ನಡ ಸಮ್ಮೇಳನ ಅದೊಂದು ಬರೀ ಕಾರ್ಯಕ್ರಮವಲ್ಲ, ಬರೀ ಭಾಷಣವಲ್ಲ. ಅಲ್ಲಿ ಕನ್ನಡ ಮನಸ್ಸುಗಳ ಸಂಗಮವಾಗುತ್ತದೆ. ನಾಡು, ನುಡಿ ಅಭಿವವೃದ್ಧಿಯ ಚಿಂತನೆಗಳು ನಡೆಯುತ್ತವೆ. ಸಾಹಿತ್ಯ, ಸಂಸ್ಕೃತಿಯ ಪರಿಚಯವಾಗುತ್ತದೆ.
ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅನೇಕ ಸಾಹಿತಿಗಳನ್ನು, ಚಿಂತಕರನ್ನು ಸೃಷ್ಠಿಸುವ ಶಕ್ತಿಯಿದೆ. ಮಕ್ಕಳಲ್ಲಿ ಪುಸ್ತಕ ಅಭ್ಯಾಸದ ದೀಪ ಬೆಳಗುವ, ಸಾಹಿತ್ಯ, ಸಂಸ್ಕೃತಿಯ ಹೆಮ್ಮೆ ಮೂಡಿಸುವ ವೇದಿಕೆಯೂ ಹೌದು. ಹೀಗಾಗಿ, ಕನ್ನಡ ಸಾಹಿತ್ಯ ಸಮ್ಮೇಳನ ಎಂದರೆ ಸರ್ಕಾರಿ ಕಾರ್ಯಕ್ರಮದಂತೆ ಆಯೋಜಿಸುವುದಲ್ಲ. ಬದಲಾಗಿ ಕನ್ನಡತನದಿಂದ ಸಾಹಿತ್ಯ ಸಮ್ಮೇಳನ ಆಯೋಜಿಸಿ ಕನ್ನಡಿಗರೆಲ್ಲಾ ಮನೆಯ ಹಬ್ಬದಂತೆ ಪಾಲ್ಗೊಳ್ಳುವಂತಾದಾಗ ಮಾತ್ರ ಸಾರ್ಥಕವಾಗುತ್ತದೆ.
ಆದರೆ, ಕನ್ನಡ ಸಾಹಿತ್ಯ ಪರಿಷತ್ತಿನ ಅದ್ಯಕ್ಷರಾದ ಮನು ಬಳಿಗಾರ್ ಅವರು ಪಕ್ಕಾ ಸರ್ಕಾರಿ ಅಧಿಕಾರಿಯ ಸ್ಟೈಲ್ ನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲು ಹೊರಟಿದ್ದಾರೆ. ಹೀಗಾಗಿ, ಮೈಸೂರು ನಗರದಲ್ಲಿ ನಡೆಯಲಿರುವ 83ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆರಂಭದಲ್ಲೇ ವಿಘ್ನಗಳು ಎದುರಾಗಿವೆ. ಈ ಮೊದಲು ಕನ್ನಡ ರಥದಲ್ಲಿ ಗೋಲ್ ಮಾಲ್ ನಡೆದಿದ್ದ ಆರೋಪಗಳು ಕೇಳಿ ಬಂದಿದ್ದವು. ಇದೀಗ ಕನ್ನಡ ಸಮ್ಮೇಳನ ವೇದಿಕೆ ನಿರ್ಮಾಣದಲ್ಲೇ ಭಾರೀ ಗೋಲ್ ಮಾಲ್ ನಡೆದಿದೆ ಎಂಬ ಆರೋಪಗಳು ಕೇಳಿ ಬಂದಿವೆ.
ಸಮ್ಮೇಳನದ ವೇದಿಕೆ ನಿರ್ಮಾಣವನ್ನು ಕಲಾವಿದ ಶಶಿಧರ್ ಹಡಪ ಅವರಿಗೆ ನೀಡಲಾಗಿದ್ದು ಮೈಸೂರು ದರ್ಬಾರ್ ಹಾಲ್ ನ ಪರಿಕಲ್ಪನೆಯಲ್ಲೇ ವೇದಿಕೆ ನಿರ್ಮಾಣ ನಡೆಯುತ್ತಿದೆ. ಆದರೆ, 2015ರಲ್ಲಿ ನಡೆದ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲೂ ದರ್ಬಾರ್ ಹಾಲ್ ಪರಿಕಲ್ಪನೆಯನ್ನೇ ಬಳಸಲಾಗಿತ್ತು. ಹೀಗಾಗಿ, 2015ರಲ್ಲಿ ಬಳಸಿದ್ದ ಪರಿಕರಗಳನ್ನೇ ಪ್ರಧಾನ ವೇದಿಕೆಗೆ ಮರು ಬಳಕೆ ಮಾಡಲಾಗುತ್ತಿದೆ. ಮೊದಲ ಬಾರಿ 18ಲಕ್ಷ ರೂಪಾಯಿ ಖರ್ಚು ಮಾಡಿರುವುದಾಗಿ ಲೆಕ್ಕ ತೋರಿಸಲಾಗಿತ್ತು. ಇದೀಗ ಹಳೇ ಪರಿಕರಗಳನ್ನೇ ಬಳಸಿ 20ಲಕ್ಷ ರೂಪಾಯಿ ಲೆಕ್ಕ ತೋರಿಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಆರಂಭದಲ್ಲಿ ಆಹ್ವಾನ ಪತ್ರಿಕೆಯೂ ವಿವಾದ ಸೃಷ್ಟಿಸಿತ್ತು. ಹೀಗಾಗಿ, ಇನ್ನು ಸಮ್ಮೇಳನದಲ್ಲಿ ಊಟ, ವಸತಿ, ಗೋಷ್ಠಿಗಳ ಗತಿಯೇನು ಎಂಬ ಗೊಂದಲ ಮೂಡಿದೆ.
ಕನ್ನಡ ಸಾಹಿತ್ಯ ಸಮ್ಮೇಳನದ ಹೆಸರಿನಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದು ಲಕ್ಷಾಂತರ ರೂಪಾಯಿ ಲಪಟಾಯಿಸಲಾಗುತ್ತಿದೆ. ಹೀಗಾಗಿ, ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ವಿಶೇಷ ಆಡಳಿತಾಧಿಕಾರಿ ನೇಮಿಸಬೇಕೆಂದು ಕೆಲವು ಸಾಹಿತಿಗಳು, ಸಾಹಿತ್ಯಾಸಕ್ತರು ಒತ್ತಾಯಿಸಿದ್ದಾರೆ. ಹೀಗಾಗಿ, ಭ್ರಷ್ಟಾಚಾರ ಮುಕ್ತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಾಗ ಮಾತ್ರ ಕನ್ನಡ ಹಬ್ಬ ಸಾರ್ಥಕವಾದೀತು ಅಲ್ಲವೇ? ಕನ್ನಡ ಸಾಹಿತ್ಯ ಪರಿಷತ್ತಿನ ಅದ್ಯಕ್ಷರಾದ ಮನು ಬಳಿಗಾರ ಅಧಿಕಾರಿಯ ಗತ್ತು ಬಿಟ್ಟು ಉತ್ತರಿಸಬೇಕಿದೆ.
– ಮಲ್ಲಿಕಾರ್ಜುನ್ ಮುದನೂರ್
Good artical sir
thank u sir..