ಪ್ರಮುಖ ಸುದ್ದಿ

ಕೃಷಿಕರು ನಿಜವಾದ ಕಾಯಕಯೋಗಿಗಳು – ಉಪ ಲೋಕಾಯುಕ್ತ ಪಾಟೀಲ್

ದಿ.ಬಸನಗೌಡ ಪಾಟೀಲ್ ಉಕ್ಕಿನಾಳ ಪುಣ್ಯಸ್ಮರಣೆ

ಯಾದಗಿರಿ,ಶಹಾಪುರಃ ಕೃಷಿಕರ ಜೀವನಮಟ್ಟ ಸುಧಾರಿಸದ ಹೊರತು ಅಭಿವೃದ್ಧಿಗೆ ಅರ್ಥವಿಲ್ಲ. ಕೃಷಿಕರ ಶ್ರಮವಿದ್ದಲ್ಲಿ ಮಾತ್ರ ನಮ್ಮೆಲ್ಲರ ಹೊಟ್ಟೆ ತುಂಬಲು ಸಾಧ್ಯವಿದೆ. ದೇಶದ ನಿಜವಾದ ಕಾಯಕಯೋಗಿಗಳು ಅಂದರೆ ಕೃಷಿಕರು ಎಂದು ಉಪ ಲೋಕಾಯುಕ್ತ ಬಿ.ಎಸ್.ಪಾಟೀಲ್ ತಿಳಿಸಿದರು.

ಸಮೀಪದ ಭೀಮರಾಯನ ಗುಡಿಯ ಕೃಷಿ ಮಹಾವಿದ್ಯಾಲಯದ ಅಡಿಟೋರಿಯಂನಲ್ಲಿ ದಿ.ಬಸನಗೌಡ ಮಾಲಿ ಪಾಟೀಲ್ ಉಕ್ಕಿನಾಳ ಅವರ ದ್ವಿತೀಯ ಪುಣ್ಯ ಸ್ಮರಣೆ ಅಂಗವಾಗಿ ಆಯೋಜಿಸಿದ್ದ ರೈತ ಚಿಂತನ ಮತ್ತು ಯುವಕರ ನಡೆ ಕೃಷಿಯಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕೃಷಿಕರು ಸುಳ್ಳು ಹೇಳಿ ಮೋಸ ಮಾಡುವವರಲ್ಲ. ಅಲ್ಲದೆ ಅಂತಹ ಪ್ರಮೇಯವು ಅವರಿಗಿಲ್ಲ. ಮತ್ತೊಬ್ಬರಿಗೆ ಸುಳ್ಳು ಹೇಳಿ ತಮ್ಮ ಬೇಳೆ ಬೇಯಿಸಿಕೊಳ್ಳುವಂತ ಲಾಭ ಕಂಡುಕೊಳ್ಳುವಂತ ಅಥವಾ ಮತ್ತೊಬ್ಬರ ಹಂಗಿನಲ್ಲಿ ಕುಳಿತು ತಿನ್ನುವಂತವರು ಅವರಲ್ಲ. ದುಡಿಯದೇ ದೇಣಿಗೆ ಮೂಲಕ ಊಟ ಮಾಡುವವರು ಅವರಲ್ಲ. ಕೆಲ ಅಕ್ಷರಸ್ಥರಂತೆ ಮಾತಿನ ಮೂಲಕ ಮೋಡಿ ಮಾಡಿ ದುಡ್ಡು ಗಳಿಸುವ ಪ್ರಮೇಯವು ಅವರಿಗಿಲ್ಲ.

ರೈತರು ಶ್ರಮದಿಂದ ನಂಬಿಕೆಯೊಂದಿಗೆ ಕೃಷಿ ಕಾಯಕ ನಡೆಸುವವರಾಗಿದ್ದಾರೆ. ಪ್ರಸ್ತುತ ಕೃಷಿ ಕಾಯಕದಿಂದ ಯುವಕರು ಹಿಂದೆ ಸರಿಯುತ್ತಿರುವದು ವಿಷಾಧನೀಯವಾಗಿದೆ. ಆ ನಿಟ್ಟಿನಲ್ಲಿ ಕೃಷಿ ಉಳಿದರೆ ದೇಶ ಉಳಿಯಲಿದೆ. ಕೃಷಿ ಅಳಿದರೆ ಮುಂದಿನ ಅಪಾಯ ಊಹಿಸಲು ಕಷ್ಟಸಾಧ್ಯವಿದೆ. ಹೀಗಾಗಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಯುವಕರನ್ನು ಕೃಷಿಯತ್ತ ಸೆಳೆಯುವ ಕೆಲಸವಾಗಬೇಕಿದೆ ಎಂದರು.

ಸೊನ್ನ ವಿರಕ್ತಮಠದ ಡಾ.ಶಿವಾನಂದ ಮಹಾಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಹಿರಿಯ ನ್ಯಾಯವಾದಿ ಭಾಸ್ಕರ್‍ರಾವ ಮುಡಬೂಳವಹಿಸಿದ್ದರು. ಡಾ.ಚಿದಾನಂದ ಮನಸೂರೆ, ಕೃಷಿ ಚಿಂತಕ ಮಲೆನಾಡಿನ ಟಿ.ಎನ್.ಪ್ರಕಾಶ, ಧಾರವಾಡ ಮತ್ತು ಸ್ಥಳೀಯ ಕೃಷಿ ಮಹಾವಿದ್ಯಾಲಯ ಡೀನ್ ಸೇರಿದಂತೆ ಕಾರ್ಯಕ್ರಮ ಆಯೋಜಿಸಿದ್ದ ದಿ.ಬಸನಗೌಡ ಮಾಲಿ ಪಾಟೀಲ್ ಉಕ್ಕಿನಾಳ ಚಾರಿಟೇಬಲ್ ಟ್ರಸ್ಟ್‍ನ ಡಾ.ಮಲ್ಲನಗೌಡ ಉಕ್ಕಿನಾಳ, ಬೆಂಗಳೂರಿನ ಡಾ.ಶೇಖರ ಪಾಟೀಲ್ ಉಕ್ಕಿನಾಳ, ರಾಜೂಗೌಡ ಉಕ್ಕಿನಾಳ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಉಚಿತ ಆರೋಗ್ಯ ಶಿಬಿರ ಜರುಗಿತು. ಶಿಬಿರದಲ್ಲಿ ಶುಗರ್, ಬಿಪಿ, ಕಣ್ಣಿನ ತಪಾಸಣೆ, ಮಕ್ಕಳ ವಿವಿಧ ರೋಗಗಳನ್ನು ತಪಾಸಣೆ ಸೇರಿದಂತೆ ಕ್ಯಾನ್ಸರ್ ಮತ್ತು ನರರೋಗಗಳನ್ನು ತಪಾಸಣೆ ಮಾಡಲಾಯಿತು. ಸ್ಥಳದಲ್ಲಿಯೇ ಹಲವು ರೋಗಗಳಿಗೆ ಔಷಧಿಯೂ ಸಹ ವಿತರಿಸಲಾಯಿತು. ಅಂದಾಜು 1110 ಜನ ರೋಗಿಗಳು ತಪಾಸಣೆಗೊಳಪಟ್ಟಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ.

           ಪ್ರತಿ ಕಾಯಕದಲ್ಲೂ ಶ್ರೇಷ್ಠತೆ ಅಗತ್ಯ -ಪಾಟೀಲ್

ಮನುಷ್ಯ ಯಾವುದೇ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿ ಆ ಕಾರ್ಯದಲ್ಲಿ ಶ್ರದ್ಧಾಪೂರ್ವಕ ಕೆಲಸ ಮಾಡುವ ಮೂಲಕ ಅದರ ಸಂಪೂರ್ಣ ಮಾಹಿತಿ ಅರಿತು ಅದರಲ್ಲಿ ಶ್ರೇಷ್ಠತೆಯನ್ನು ಸಾಧಿಸಬೇಕು ಎಂದು ಉಪ ಲೋಕಾಯುಕ್ತ ಬಿ.ಎಸ್.ಪಾಟೀಲ್ ತಿಳಿಸಿದರು.

ಶ್ರೇಷ್ಠತೆ ಎಂದರೆ ಆಯಾ ಕಾಯಕದಲ್ಲಿ ಪಾಂಡಿತ್ಯ, ಚಾಕಚಕ್ಯತೆ ಹೊಂದಿರಬೇಕು. ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡಿದ್ದಲ್ಲಿ, ಆ ಕಾಯಕದಲ್ಲಿ ಸಂಪೂರ್ಣ ಹಿಡಿತ ಸಾಧಿಸಬೇಕು. ಮಣ್ಣಿನ ಫಲವತ್ತತೆ, ವಾಸನೆ, ರುಚಿ, ಯಾವ ಬೆಳೆ ಹೇಗೆ ಬೆಳೆಯಲಿದೆ. ಅದಕ್ಕೆ ಬೇಕಾದ ಕಾಲಮಾನ ಸಮಯ, ಬೆಳೆಯುವ ವಿಧಾನ ಸಮೇತ ಮಾಹಿತಿ ಅರಿತು ಶ್ರೇಷ್ಠತೆಯನ್ನು ಸಂಪಾದಿಸುವದು ನಮ್ಮೆಲ್ಲರ ಕರ್ತವ್ಯವಾಗಿದೆ.

ಭಾರತೀಯ ಸಂವಿಧಾನ ಇದನ್ನೆ ಹೇಳುತ್ತದೆ. ನಮ್ಮೆಲ್ಲರ ಹಕ್ಕಿನ ಜೊತೆಗೆ ನಾವೆಲ್ಲ ಮೂಲಭೂತ ಕರ್ತವ್ಯಗಳನ್ನು ಅನುಸರಿಸಬೇಕು. ಸಮರ್ಪಕವಾಗಿ ಅವುಗಳನ್ನು ಪಾಲನೆ ಮಾಡಬೇಕು. ಅಂತಹ ಶ್ರೇಷ್ಠತೆಯ ಮಟ್ಟವನ್ನು ನಾವೆಲ್ಲ ತಲುಪಿದಲ್ಲಿ ಈ ದೇಶದ ಶೇ.70 ರೈತರು ಶ್ರೇಷ್ಠತೆ ಹೊಂದಿದ್ದಲ್ಲಿ ನಮ್ಮ ದೇಶ ಪ್ರಗತಿಶೀಲ ದೇಶವಾಗಿ ಹೊರಹೊಮ್ಮುವದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.

Related Articles

Leave a Reply

Your email address will not be published. Required fields are marked *

Back to top button