ಅಂಕಣಪ್ರಮುಖ ಸುದ್ದಿ

ದುರ್ಗದ ‘ಅಜ್ಜ’ ಅಜರಾಮರ..! ಮುದನೂರ ಬರಹ

ಜಿ.ಎಸ್.ಉಜ್ಜಿನಪ್ಪ ಅಜ್ಜ ಇನ್ನಿಲ್ಲ..!

ದುರ್ಗದ ‘ಅಜ್ಜ’ ಅಜರಾಮರ!

ನೆಯ ಗೇಟಿನ ಬಳಿಯೇ ತೊಯ್ದು ಬಿದ್ದ ಆಂಗ್ಲ ಪತ್ರಿಕೆಗಳು. ಅಗಲಿಕೆಯ ನೋವಿಂದ ಸಾಕು ನಾಯಿ ಕಂಬನಿ. ಸೆಲ್ಯೂಟ್ ನೀಡಿದ ಭಂಗಿಯಲ್ಲಿ ನಿಂತ ಗಿಡಮರಗಳು. ವನದಿ ನೆಲೆಸಿದ ಪಕ್ಷಿಸಂಕುಲ ಮೌನಕ್ಕೆ ಶರಣು. ನಮ್ಮ ಪ್ರೀತಿಯ ಅಜ್ಜ ಜಿ ಎಸ್ ಉಜ್ಜಿನಪ್ಪ ಅವರು ದೈವಸೃಷ್ಟಿಯೊಳು ಲೀನವಾದ ಮುಂಜಾವು ಅವರ ‘ಕಲಶ’ ನಿವಾಸ ಬಳಿ ಕಣ್ಣಿಗೆ ಕಂಡ ದೃಶ್ಯಾವಳಿಗಳಿವು.

ಗೇಟು ದಾಟುತ್ತಿದ್ದಂತೆ ‘ಪ್ಲೀಸ್ ಕಮ್ ಬಸಣ್ಣ, ಬನ್ನಿ ಬನ್ನಿ..’ ಎಂದು ಕರೆಯುವ ಅಜ್ಜನ ದನಿಯಿನ್ನು ನೆನಪು ಮಾತ್ರ ಎಂದು ನೆನೆದು ಭಾವುಕನಾದೆನು. ಅಜ್ಜ ಮನೆ ಅಂಗಳದಲ್ಲಿ ಚಿರನಿದಿರೆಗೆ ಜಾರಿದ್ದರು. ಅದೇ ಅಂಗಳದಲ್ಲಿ ಅದೆಷ್ಟೋ ಸಲ ನಿಮಿಷವೂ ಸುಮ್ಮನಿರದೆ ಅಜ್ಜನ ಜತೆ ಮಾತಿನ ಮಂಟಪ ಕಟ್ಟಿದ್ದ ಹೆಚ್ ಹಂನುಮಂತಪ್ಪನವರು ಆಪ್ತ ಗೆಳೆಯನ ಅಗಲಿಕೆಯ ದುಃಖದಲ್ಲಿ ಮುಳುಗಿದ್ದರು. ಕುಟುಂಬಸ್ಥರು ಮನೆಯ ಆಧಾರಸ್ತಂಭವೇ ಕುಸಿದಂತೆ ಕಂಗಾಲಾಗಿದ್ದರು. ಕಣ್ಣೀರು ತಡೆಯಲಾಗಲಿಲ್ಲ…

ಎರಡು ದಶಕದ ಹಿಂದೆ ದಿ ಹಿಂದೂ ಪತ್ರಿಕೆಯ ವರದಿಗಾರ ಫಿರೋಜ್ ನನ್ನನ್ನು ಉಜ್ಜಿನಪ್ಪ ಅವರಿಗೆ ಪರಿಚಯಿಸಿದ್ದನು. ಕಲಬುರಗಿಯವನೆಂದು ತಿಳಿದಾಕ್ಷ ನನ್ನ ಮೇಲೆ‌ ವಿಶೇಷ ಪ್ರೀತಿ ತೋರಿದ್ದರು. ‘ನಾನು ಕಲಬುರಗಿಯ MSK ಮಿಲ್ ನಲ್ಲೇ ಮೊದಲ ನೌಕರಿ ಮಾಡಿದ್ದೆನು’ ಎಂದು ಹೇಳಿ ನಮ್ಮ ಭಾಗದ ಹೋರಾಟಗಾರ ಎಸ್ ಕೆ‌ ಕಾಂತಾ ಅವರನ್ನು ನೆನೆದಿದ್ದರು.

‘ದುರ್ಗದಲ್ಲಿ ಜೋಳದ ರೊಟ್ಟಿ ಸಿಗಲ್ಲ’ ಎಂದು ತಿಳಿಸಿ ಮನೆಗೆ ಊಟಕ್ಕೆ ಕರೆದಿದ್ದರು. ಬಹುವರ್ಷದ ಬಳಿಕ ಮನೆಗೆ ಬಂದ ಮೊಮ್ಮಗನಿಗೆ ತೋರುವ ಅಕ್ಕರೆ ನೀಡಿ ಭೈರಮ್ಮ ಅಜ್ಜಿ ಉಣ ಬಡಿಸಿದ್ದರು. ಮರಳಿ ಅಜ್ಜ-ಅಜ್ಜಿ ಸಿಕ್ಕ ಭಾವ ನನ್ನಲಿ ಮೂಡಿತ್ತು. ಅಜ್ಜಿ ಬದುಕಿನ ಕೊನೆಕಾಲದವರೆಗೆ ಮನೆಯಲ್ಲಿ ರೊಟ್ಟಿ ಮಾಡಿದಾಗೆಲ್ಲ ಅಜ್ಜ-ಅಜ್ಜಿ ನನ್ನನ್ನು ಮರೆಯುತ್ತಿರಲಿಲ್ಲ.

ಖಾಸಾ ಮೊಮ್ಮಗನಂತೆಯೇ ಕಾಣುತ್ತಿದ್ದ ಅಜ್ಜ ನಾನೊಂಚೂರು ದಪ್ಪ ಆದರೂ ಎಚ್ಚರಿಸುತ್ತಿದ್ದರು. ಹುಡುಗರೇ ಆಗಲಿ; ಹುಡುಗಿಯರೇ ಆಗಲಿ ಸಕಾಲಕ್ಕೆ ಮದುವೆ ಆಗಬೇಕು ಎಂದು ಹೇಳುತ್ತಿದ್ದರು. ಅಪ್ಪನ ನಂಬರ್ ಪಡೆದು ‘ಮಗನಿಗೆ ನಮ್ಮ ಕಡೆಯೇ ಹೆಣ್ಣು ನೋಡೋಣವೇ’ ಎಂದು ಕೇಳಿದ್ದುಂಟು. ಅಪ್ಪ ದುರ್ಗಕ್ಕೆ ಬಂದಾಗೆಲ್ಲಾ ತಪ್ಪದೆ ಭೇಟಿಯಾಗುತ್ತಿದ್ದರು.

ನನ್ನ ಮದುವೆ ಮುಹೂರ್ತ ನಿರ್ಧಾರವಾದಾಗ ಅಜ್ಜ ಅಕ್ಷರಶಃ ಸಂಭ್ರಮಿಸಿದ್ದರು. ಒಂದು ದಿನ ಮುನ್ನವೇ ಅಜ್ಜ-ಅಜ್ಜಿ ಮನೆಗೆ ಬಂದು ಸಾಂಪ್ರದಾಯಿಕ ಆಚರಣೆಗೆ ಸಾಕ್ಷಿಯಾಗಿ ಆಶೀರ್ವದಿಸಿದ್ದು ನನ್ನ ಸುದೈವ. ಮದುವೆ ಬಳಿಕ ಯಾವ ಪ್ಲಾನ್ ಮಾಡಬೇಡಿ ಬೇಗ ಮಕ್ಕಳು ಆಗಲಿ ಎಂದು ಬೆನ್ನುಬಿದ್ದಿದ್ದು ಪ್ರೀತಿಯ ಅಜ್ಜ. ಮರಿ ಮೊಮ್ಮಗ ವಿನಯ ಜನಿಸಿದ ವೇಳೆ ಆಸ್ಪತ್ರೆಗೆ ಬಂದಿದ್ದು, ನಾಮಕರಣದಿ ಸಂಭ್ರಮಿಸಿ ಆಶೀರ್ವದಿಸಿದ್ದು ಅವಿಸ್ಮರಣೀಯ.

ನನಗೆ ಓದು ಮತ್ತು ಬರವಣಿಗೆಯ ಹುಚ್ಚಿದೆ ಎಂದು ಅರಿತ ಅಜ್ಜ ಕೆಂಡಸಂಪಿಗೆ ವೆಬ್ಸೈಟ್ ಗೆ ಬರೆಯಲು ಸೂಚಿಸಿದ್ದರು. ಅಬ್ದುಲ್ ರಶೀದ್ ಅವರನ್ನು ಪರಿಚಯಿಸಿ ಲೇಖನಗಳು ಹೊರಹೊಮ್ಮಲು ಪ್ರೇರಣೆ ನೀಡಿದರು. ಬರಹಗಳಿಗೆ ಕೃತಿ ರೂಪ ನೀಡುವಂತೆ ಹೇಳುತ್ತಿದ್ದ ಮಾತು ಸಾಕಾರಗೊಳಿಸಲಾಗದೆ ಅಜ್ಜನ ಕೆಂಗಣ್ಣಿಗೆ ಗುರಿಯಾಗಿದ್ದೆನು. ಕ್ಷಮಿಸಿಬಿಡು ಅಜ್ಜ!

ಅಪ್ಪಟ ಗ್ರಾಮೀಣ ಪ್ರತಿಭೆ ಎಂದೆಣಿಸಿದರೆ ವಿದೇಶಿಗರೂ ನಾಚುವಂತೆ ಆಂಗ್ಲಭಾಷೆ ಮಾತಾಡುತ್ತಿದ್ದರು. ವೃತ್ತಿಪರ ಪತ್ರಕರ್ತ ಎಂದು ಭಾವಿಸಿದರೆ ಪ್ರಗತಿಪರ ಕೃಷಿಕರೂ ಹೌದೆನ್ನಬೇಕಿತ್ತು. ಗೌನಳ್ಳೇರು, ಹಬ್ಬಿದ ಮಲೆ ಮಧ್ಯದೊಳಗೆ ಕೃತಿಗಳು ಸ್ವಗ್ರಾಮದ ಕಥನಗಳಾಗಿದ್ದರೆ, ಹೆಜ್ಜೆಯಿಟ್ಟ ಕಡೆ, ನಿಕಷ ಕೃತಿಗಳು ಅನುಭವ ಕಥನ ತೆರೆದಿಡುತ್ತವೆ. ದಾರಿಗೆ ಜತೆಯಿಲ್ಲ, ಭಿತ್ತಗಳು, ತಣ್ಣೆಳಲು ಕೃತಿಗಳಲ್ಲಿ ಸೊಗಸಾದ ಕಥೆ ಹೇಳುವ ಅಜ್ಜ ಬದುಕೆಂಬ ಮಹಾ ಪ್ರಸಾದ ಕೃತಿಯಲ್ಲಿ ಆತ್ಮಕಥನ ಬಿಚ್ಚಿಟ್ಟಿದ್ದಾರೆ.

ಬಹುಮುಖ ಪ್ರತಿಭೆಯ ಅಜ್ಜನಿಗೆ ಸಿದ್ಧಿಸದ ವಿದ್ಯೆ ಇರಲಿಲ್ಲ. ಓದು-ಬರಹ, ಹಾಡು-ಸಾಹಿತ್ಯ, ಜನಪರ ಪತ್ರಕರ್ತ, ಕೃಷಿ-ಖುಷಿ, ಎಲ್ಲರೊಳಗೊಂದಾಗಿ ಪ್ರೀತಿ ಹಂಚುವ ಪರಿ. ಕನ್ನಡ, ಇಂಗ್ಲಿಷ್, ಹಿಂದಿ ಭಾಷೆಗಳ ಮೇಲಿನ ಹಿಡಿತ. ಕೊನೆಗಾಲದವರೆಗೆ ಕಾಯ್ದುಕೊಂಡಿದ್ದ ಅದ್ಭುತ ಜ್ಞಾಪಕ ಶಕ್ತಿಗೆ ಸಾಟಿಯಿಲ್ಲ. ಪ್ರೀತಿಯ ಅಜ್ಜ ಅಜರಾಮರ…

ಬಸವರಾಜ ಮುದನೂರ್

Related Articles

Leave a Reply

Your email address will not be published. Required fields are marked *

Back to top button