ಕಥೆ

ಸತ್ಯ ಮತ್ತು ಅಂತರಂಗದ ದೈವಿಕತೆ ನೆಚ್ಚಿ ಬಾಳಿ

ಲೋಕದ ಮಾತು ಮತ್ತು ಶರಣನ ಪಥ

ದಿನಕ್ಕೊಂದು ಕಥೆ

ಲೋಕದ ಮಾತು ಮತ್ತು ಶರಣನ ಪಥ

ರ್ವಸಂಗಪರಿತ್ಯಾಗ ಮಾಡಿದ ಶಿವಶರಣನ
ಲೋಕದ ಸಂಸಾರಿಗಳೆಂತು ಮೆಚ್ಚುವರಯ್ಯಾ ?
ಊರೊಳಗಿರ್ದಡೆ [ಸಂಸಾರಿ] ಎಂಬರು,
ಅಡವಿಯೊಳಗಿರ್ದಡೆ ಮೃಗನೆಂಬರು
ಹೊನ್ನ ಬಿಟ್ಟಡೆ ದರಿದ್ರನೆಂಬರು, ಹೆಣ್ಣ ಬಿಟ್ಟಡೆ ನಪುಂಸಕನೆಂಬರು,
ಮಣ್ಣ ಬಿಟ್ಟಡೆ ಪೂರ್ವಕರ್ಮಿ ಎಂಬರು, ಮಾತನಾಡದಿರ್ದಡೆ ಮೂಗನೆಂಬರು
ಮಾತನಾಡಿದಡೆ ಜ್ಞಾನಿಗೇಕಯ್ಯಾ ಮಾತೆಂಬರು
ನಿಜವನಾಡಿದಡೆ ನಿಷ್ಠುರಿಯೆಂಬರು, ಸಮತೆಯನಾಡಿದಡೆ ಅಂಜುವನೆಂಬರು.
ಇದು ಕಾರಣ ಕೂಡಲಚೆನ್ನಸಂಗಯ್ಯಾ
ನಿಮ್ಮ ಶರಣ ಲೋಕದಿಚ್ಛೆಯ ನುಡಿಯ
ಲೋಕದಿಚ್ಛೆಯ ನಡೆಯ!

ಈ ವಚನವು ಚೆನ್ನಬಸವಣ್ಣನವರ ಪ್ರಸಿದ್ಧ ವಚನಗಳಲ್ಲೊಂದು. ಲೋಕದ ಜನರ ವಿಚಿತ್ರ ಮನೋಭಾವವನ್ನು ಮತ್ತು ಸತ್ಯದ ಹಾದಿಯಲ್ಲಿ ನಡೆಯುವ ಶರಣನು ಅನುಭವಿಸುವ ಸಾಮಾಜಿಕ ಸವಾಲುಗಳನ್ನು ಇದು ಮಾರ್ಮಿಕವಾಗಿ ಚಿತ್ರಿಸುತ್ತದೆ.

ಭೌತಿಕ ಜಗತ್ತನ್ನು, ಅಹಂಕಾರವನ್ನು ತೊರೆದ ‘ಸರ್ವಸಂಗಪರಿತ್ಯಾಗಿ’ಯನ್ನು ಈ ಲೌಕಿಕ ಜಗತ್ತು ಎಂದಿಗೂ ಅರ್ಥಮಾಡಿಕೊಳ್ಳಲಾರದು.

ಊರಲ್ಲಿದ್ದರೆ ‘ಸಂಸಾರಿ’ ಎನ್ನುತ್ತಾರೆ, ಕಾಡಿಗೆ ಹೋದರೆ ‘ಕಾಡುಮೃಗ’ ಎನ್ನುತ್ತಾರೆ. ಸಂಪತ್ತನ್ನು ತೊರೆದರೆ ‘ದರಿದ್ರ’ ಎಂದೂ, ಸ್ತ್ರೀಯ ವ್ಯಾಮೋಹ ತೊರೆದರೆ ‘ನಪುಂಸಕ’ ಎಂದೂ, ಆಸ್ತಿ-ಪಾಸ್ತಿ (ಮಣ್ಣು) ಬಿಟ್ಟರೆ ‘ಪೂರ್ವಕರ್ಮಿ’ ಎಂದೂ ಹಾರಾಯಿಸುತ್ತಾರೆ. ಮೌನವಾಗಿದ್ದರೆ ‘ಮೂಕ’ನೆಂದೂ, ಮಾತನಾಡಿದರೆ ‘ಜ್ಞಾನಿಗೆ ಈ ಮಾತೇಕೆ?’ ಎಂದೂ ಚುಚ್ಚುತ್ತಾರೆ. ಸತ್ಯ ಹೇಳಿದರೆ ‘ನಿಷ್ಠುರ’ನೆಂದೂ, ಎಲ್ಲರನ್ನೂ ಸಮಾನವಾಗಿ ಕಂಡರೆ ‘ಅಂಜುಬುಕುಳಿ’ (ಹದರಿ ಬದುಕುವವನು) ಎಂದೂ ವ್ಯಂಗ್ಯವಾಡುತ್ತಾರೆ.

ಒಟ್ಟಿನಲ್ಲಿ, ಲೋಕದ ಮೆಚ್ಚುಗೆಗಾಗಿ ಬದುಕುವವನು ಎಂದಿಗೂ ಆತ್ಮಕಲ್ಯಾಣ ಸಾಧಿಸಲಾರ. ಶರಣನಾದವನು ಲೋಕಾಪವಾದಕ್ಕೆ ಹೆದರದೆ, ಜನರ ಇಷ್ಟದಂತೆ ನಡೆಯದೆ, ‘ಕೂಡಲಚೆನ್ನಸಂಗಮ’ನ ಅಂದರೆ ಸತ್ಯ ಮತ್ತು ಆಂತರಿಕ ದೈವಿಕತೆಯನ್ನು ಮಾತ್ರ ನೆಚ್ಚಿ ಬಾಳಬೇಕು ಎಂಬುದೇ ಈ ವಚನದ ತತ್ತ್ವ.

ಒಮ್ಮೆ ಒಬ್ಬ ತಂದೆ ಮತ್ತು ಮಗ ತಮ್ಮಲ್ಲಿದ್ದ ಕತ್ತೆಯೊಂದಿಗೆ ನೆರೆಯ ಊರಿಗೆ ಪಯಣ ಬೆಳೆಸಿದ್ದರು.

ಅವರು ಕಾಲ್ನಡಿಗೆಯಲ್ಲಿ ಸಾಗುತ್ತಿರುವುದನ್ನು ಕಂಡ ಹಾದಿಪೋಕನೊಬ್ಬ, “ಎಂತಹ ದಡ್ಡರು! ಸಾಕ್ಷಾತ್ ಕತ್ತೆಯಿದ್ದರೂ ಇಬ್ಬರೂ ನಡೆದುಕೊಂಡು ಹೋಗುತ್ತಿದ್ದಾರಲ್ಲ!” ಎಂದು ನಕ್ಕನು. ಅದನ್ನು ಕೇಳಿದ ತಂದೆ ಮಗನನ್ನು ಕತ್ತೆಯ ಮೇಲೆ ಕುಳ್ಳಿರಿಸಿ ತಾನು ನಡೆದು ಸಾಗಿದನು.

ಮತ್ತಷ್ಟು ಮುಂದೆ ಹೋದಾಗ ಮತ್ತೊಬ್ಬ ವೃದ್ಧ, “ಛೇ! ಇಂದಿನ ಕಾಲವೇ ಕೆಟ್ಟೋಗಿದೆ! ವಯಸ್ಸಾದ ತಂದೆಯನ್ನು ನಡೆಸಿಕೊಂಡು ಹೋಗಿ, ಯುವಕ ಮಗ ಜಾರಿಯಲ್ಲಿ ಕುಳಿತಿದ್ದಾನಲ್ಲ!” ಎಂದು ಗದರಿದನು. ಕೂಡಲೇ ಮಗ ಕೆಳಗಿಳಿದು, ತಂದೆಯನ್ನು ಕತ್ತೆಯ ಮೇಲೆ ಕುಳ್ಳಿರಿಸಿದನು.

ಸ್ವಲ್ಪ ದೂರ ಸಾಗುವಷ್ಟರಲ್ಲಿ ಒಬ್ಬ ಮಹಿಳೆ ನೋಡಿ, “ಎಂತಹ ನಿರ್ದಯಿ ತಂದೆ! ಪುಟ್ಟ ಮಗನನ್ನು ಬಿಸಿಲಿನಲ್ಲಿ ನಡೆಸಿ, ತಾನು ಹಾಯಾಗಿ ಕುಳಿತಿದ್ದಾನೆ!” ಎಂದು ಬೈದಳು. ಈಗ ತಂದೆ-ಮಗ ಇಬ್ಬರೂ ಕತ್ತೆಯನ್ನೇರಿದರು.

ಊರ ಹತ್ತಿರ ತಲುಪುತ್ತಿದ್ದಂತೆ ಜನರು, “ಅಯ್ಯೋ! ಆ ಬಡ ಪ್ರಾಣಿಯ ಮೇಲೆ ಇಬ್ಬರೂ ಕುಳಿತು ಹಿಂಸಿಸುತ್ತಿದ್ದೀರಲ್ಲ, ನಿಮಗೇನು ಕರುಣೆಯೇ ಇಲ್ಲವೇ?” ಎಂದು ಜರೆದರು.

ಕೊನೆಗೆ ತಂದೆ-ಮಗ ಜನರಿಗೆ ಹೆದರಿ, ಕತ್ತೆಯ ಕಾಲುಗಳನ್ನು ಕಟ್ಟಿ, ಅದನ್ನೊಂದು ಬಿದಿರಿನ ಕೋಲಿಗೆ ತಗಲಿಸಿ ಭುಜದ ಮೇಲೆ ಹೊತ್ತುಕೊಂಡು ಹೊರಟರು! ಅದನ್ನು ನೋಡಿದ ಇಡೀ ಊರಿನ ಜನ ಬಿದ್ದು ಬಿದ್ದು ನಕ್ಕು, “ಪ್ರಪಂಚದಲ್ಲೇ ಇಂತಹ ಹುಚ್ಚರನ್ನು ನಾವು ನೋಡಿಲ್ಲ!” ಎಂದು ತಮಾಷೆ ಮಾಡಿದರು.
ಆದ್ದರಿಂದ, ನಾವು ಲೋಕದ ಜನರ ಮಾತಿಗೆ ಅನುಗುಣವಾಗಿ ಬದುಕಲು ಹೊರಟರೆ, ಕೊನೆಗೆ ನಮ್ಮತನವನ್ನೇ ಕಳೆದುಕೊಂಡು ನಗೆಪಾಟಲಿಗೀಡಾಗಬೇಕಾಗುತ್ತದೆ.

ನೀತಿ :– ಜನರ ಮೆಚ್ಚುಗೆ ತಾತ್ಕಾಲಿಕ, ಆದರೆ ನಿಮ್ಮ ಸತ್ಯ ಹಾಗೂ ಆತ್ಮಸಾಕ್ಷಿ ಶಾಶ್ವತ. ನೀವು ಏನೇ ಮಾಡಿದರೂ, ಮಾಡದಿದ್ದರೂ ಲೋಕಕ್ಕೆ ನಿಂದೆಯನ್ನು ಹುಡುಕಲು ಸಾವಿರ ಕಾರಣಗಳು ಸಿಗುತ್ತವೆ. ಆದ್ದರಿಂದ, ಸಮಾಜದ ನಿಂದನೆ-ಪ್ರಶಂಸೆಗಳಿಗೆ ಕಿವಿಗೊಡದೆ, ಧರ್ಮ, ಸತ್ಯ ಮತ್ತು ದೈವದ ಹಾದಿಯಲ್ಲಿ ದೃಢವಾಗಿ ಮುನ್ನಡೆಯುವುದೇ ನಿಜವಾದ ಶರಣನ ಮಾರ್ಗ.

ಷ.ಬ್ರ.ಡಾ.ಅಭಿನವ ರಾಮಲಿಂಗ ಶ್ರೀ
📞 – 9341137882, 9845763534.

Related Articles

Leave a Reply

Your email address will not be published. Required fields are marked *

Back to top button