ಲಾರಿ ಮಾಲೀಕರ ಸಂಘದ ಬೇಡಿಕೆ ಈಡೇರಿಕೆಗೆ ಶ್ರಮಿಸುವೆ- ದರ್ಶನಾಪುರ
ಲಾರಿ ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ 14 ನೇ ವಾರ್ಷಿಕೋತ್ಸವ
ಲಾರಿ ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ 14 ನೇ ವಾರ್ಷಿಕೋತ್ಸವ
ಸಂಘದ ಬೇಡಿಕೆ ಈಡೇರಿಕೆಗೆ ಶ್ರಮಿಸುವೆ- ದರ್ಶನಾಪು
ಮಾಲೀಕ, ಚಾಲಕ, ಕ್ಲೀನರ್ ಮೂವರ ಒಗ್ಗಟ್ಟು ಅಗತ್ಯ – ದರ್ಶನಾಪುರ
ವಿನಯವಾಣಿ ಸಮಾಚಾರ
ಶಹಾಪುರ: ಲಾರಿ ಮಾಲೀಕರ ಕ್ಷೇಮಾಭೀವೃದ್ಧಿ ಸಂಘದ ಬೇಡಿಕೆಗಳ ಈಡೇರಿಕೆಗೆ ಪ್ರಾಮಾಣಿಕ ಪ್ರಯತ್ನ ಮಾಡುವೆ. ಸಮಸ್ಯೆಗಳ ಪರಿಹಾರಕ್ಕೆ ಸದಾ ಸ್ಪಂಧಿಸುವೆ ಎಂದು ಮಾಜಿ ಸಚಿವ, ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಭರವಸೆ ನೀಡಿದರು.
ನಗರದ ಎಪಿಎಂಸಿ ಆವರಣದಲ್ಲಿ ಸೋಮವಾರ ನಡೆದ ತಾಲ್ಲೂಕು ಲಾರಿ ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ 14 ನೇ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರಿ ಸವಲತ್ತುಗಳನ್ನು ಆಯಾ ನಿಯಮನುಸಾರ ಅರ್ಹತೆ ಹೊಂದಿರುವ ಪ್ರತಿಯೊಬ್ಬರು ಪಡೆಯಬೇಕು. ಆ ನಿಟ್ಟಿನಲ್ಲಿ ತಮ್ಮ ಬೇಡಿಕೆಗಳಿಗೆ ಸರ್ಕಾರ ಒದಗಿಸುವ ಸಕಲ ಸೌಲಭ್ಯಗಳನ್ನು ಕಲ್ಪಿಸಲು ಶತ ಪ್ರಯತ್ನ ಮಾಡುವೆ. ಸಂಘಕ್ಕೆ ಸರ್ಕಾರಿ ಜಮೀನು ನೀಡುವ ಬೇಡಿಕೆ ಬಗ್ಗೆ ಮಾತನಾಡಿದ ಅವರು, ರಾಯಚೂರಿನಲ್ಲಿ ಸರ್ಕಾರದಿಂದ ಐದು ಎಕರೆ ಜಮೀನು ಪಡೆಯಲಾಗಿದೆ ಎಂದು ಮಾಹಿತಿ ನೀಡಿದಂತೆ, ಆ ಕುರಿತು ಸರ್ಕಾರಿ ದಾಖಲೆಗಳು ತಂದುಕೊಟ್ಟಲ್ಲಿ ಅದೇ ಆಧಾರದ ಮೇಲೆ ಶಹಾಪುರದ ಸಂಘಕ್ಕೂ ಸರ್ಕಾರಿ ಜಮೀನು ಕಲ್ಪಿಸಲು ಅನುಕೂಲವಾಗಲಿದೆ ಎಂದ ಅವರು, ಇನ್ನೂ ಲಾರಿ ಮಾಲೀಕರಾದಿಯಾಗಿ ಚಾಲಕ, ಕ್ಲೀನರ್ ಎಲ್ಲರೂ ಇಲ್ಲಿ ಬಡತನ ರೇಖೆಯಡಿಯೇ ಬರುತ್ತಾರೆ. ಈ ಮೂವರು ಒಗ್ಗಟ್ಟಾಗಿ ಪ್ರಾಮಾಣಿಕವಾಗಿ ಶ್ರಮಿಸಿದ್ದಲ್ಲಿ ಒಂದಿಷ್ಟು ಲಾಭ ಕಂಡುಕೊಳ್ಳಬಹುದು ಇಲ್ಲವಾದಲ್ಲಿ ಈ ಲಾರಿ ಸಾರಿಗೆ ವ್ಯವಹಾರ ನಡೆಸುವದಯ ಕಷ್ಟಕರವಿದೆ ಎಂದು ತಾವೂ ಈ ಹಿಂದೆ ಟೆಂಪೋ, ಟಿಪ್ಪರ್ ಮಾಡಿರುವ ಕುರಿತು ನೆನಪನ್ನು ಮೆಲುಕು ಹಾಕಿದರು.
ಸಂಘದ ಗೌರವಾಧ್ಯಕ್ಷ ಗುಂಡಪ್ಪ ತುಂಬಿಗಿ ಪ್ರಾಸ್ತಾವಿಕವಾಗಿ ಮಾತನಾಡಿ, ಎಪಿಎಂಸಿ ಆವರಣದಲ್ಲಿ ಸರ್ಕಾರದಿಂದಲೇ ವೇ-ಬ್ರಿಡ್ಜ್ ವ್ಯವಸ್ಥೆ ಕಲ್ಪಿಸಬೇಕು, ಸಂಘಟನೆ ಬಲವರ್ಧನೆಗೆ ಕಚೇರಿ ನಿರ್ಮಾಣಕ್ಕೆ ನಿವೇಶನ ಸೌಲಭ್ಯ ಮತ್ತು ಹತ್ತಿ ಖರೀದಿ ಕೇಂದ್ರಗಳಲ್ಲಿ (ಸಿಸಿಐ) ಲಾರಿಗಳಿಗೂ ಅವಕಾಶ ಕಲ್ಪಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಶಾಸಕರ ಮುಂದಿಟ್ಟರು.
ಮುಖಂಡ ಮಹಾದೇವಪ್ಪ ಸಾಲಿಮನಿ, ನಗರಸಭೆ ಸದಸ್ಯ ಮಲ್ಲಿಕಾರ್ಜುನ ಗಂಗಾಧರಮಠ ಸೇರಿದಂತೆ ರಾಯಚೂರಿನ ಮಹ್ಮದ್ ಯೂನೂಸ್ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಜಾವೀದ್ ಪಾಶಾ ಖಾನಾಪುರ (ಝಬಿ) ಅಧ್ಯಕ್ಷತೆವಹಿಸಿದ್ದರು. ಉಪಾಧ್ಯಕ್ಷ ಹರೀಶ ಪಾಟೀಲ್, ಹಿರಿಯರಾದ ಮಲ್ಲಣ್ಣಗೌಡ ಪಾಟೀಲ್, ರಾಯಚೂರಿನ ಅಜೀಂ ಪಾಶಾ, ಅಬ್ದುಲ್ ಖಾದರ್ ಇತರರು ಉಪಸ್ಥಿತರಿದ್ದರು.




