ಮಕ್ಕಳಿಬ್ಬರನ್ನು ಕಾಲುವೆಗೆ ಎಸೆದ ತಂದೆ: ಮೃತ ದೇಹ ಪತ್ತೆ, ಆರೋಪಿ ಬಂಧನ
ಗಂಡ - ಹೆಂಡತಿ ಜಗಳ : ಎರಡು ಮಕ್ಕಳನ್ನು ಕಾಲುವೆಗೆ ಎಸೆದ ತಂದೆ

ಮಕ್ಕಳಿಬ್ಬರನ್ನು ಕಾಲುವೆಗೆ ಎಸೆದ ತಂದೆ: ಮೃತ ದೇಹ ಪತ್ತೆ, ಆರೋಪಿ ಬಂಧನ
ಗಂಡ – ಹೆಂಡತಿ ಜಗಳ : ಎರಡು ಮಕ್ಕಳನ್ನು ಕಾಲುವೆಗೆ ಎಸೆದ ತಂದೆ
ವಿವಿ ಡೆಸ್ಕ್- ಶಹಾಪುರ: ತನ್ನ ಪತ್ನಿ ಜೊತೆ ಜಗಳ ಮಾಡಿಕೊಂಡ ವ್ಯಕ್ತಿಯೊಬ್ಬ ಕೋಪದಲ್ಲಿ ತನ್ನ ಇಬ್ಬರು ಮಕ್ಕಳನ್ನು ಕಾಲುವೆಗೆ ಎಸೆದಿರುವ ಆಘಾತಕಾರಿ ಘಟನೆ ತಾಲೂಕಿನ ಗಂಗನಾಳ ಗ್ರಾಮದಲ್ಲಿ ನಡೆದಿದೆ. ತಾಲೂಕಿನ ಕಕ್ಕಸಗೇರಾ ಗ್ರಾಮದ ಶಾಂತಪ್ಪ ಸಮೀಪದ ಗಂಗನಾಳ ಗ್ರಾಮದ ರೇಣುಕಾಳನ್ನು ಮದುವೆಯಾಗಿದ್ದ, ಗಂಗನಾಳ ಗ್ರಾಮದಲ್ಲಿಯೇ ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಶಾಂತಪ್ಪ ಮಂಗಳವಾರ ಪತ್ನಿ ಜೊತೆ ಅನುಮಾನಗೊಂಡು ರಾತ್ರಿ ಜಗಳವಾಡಿದ್ದಾನೆ ಎನ್ನಲಾಗಿದೆ.

ಅದೇ ಕೋಪದಲ್ಲಿ ತನ್ನ ಮೂರು ಮಕ್ಕಳನ್ನು ಬೈಕ್ ಮೇಲೆ ಕರೆದೊಯ್ದು ಬೋರುಕಾ ಸಮೀಪದ ಕೃಷ್ಣಾ ಕಾಡಾದ ಮುಖ್ಯ ಕಾಲುವೆಗೆ ಎರಡು ಮಕ್ಕಳನ್ನು ಎಸೆದು ಹಿರಿಯ ಮಗಳನ್ನು ವಾಪಸ್ ಮನೆಗೆ ಬಿಟ್ಟಿರುವ ಸಂಗತಿ ಆರೋಪಿ, ತಂದೆ ಶಾಂತಪ್ಪ ಪೊಲೀಸರ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ.

ಮೃತ ಮಕ್ಕಳ ಚಿತ್ರ
ಮೂವರು ಮಕ್ಕಳಲ್ಲಿ ಎರಡು ಹೆಣ್ಣು, ಒಂದು ಗಂಡು ಮಗುವಿದ್ದು ಎರಡು ಮಕ್ಕಳನ್ನು ಕಾಲುವೆಗೆ ಎಸಿದಿರುವ ಕುರಿತು ಆರೋಪಿ ಒಪ್ಪಿಕೊಂಡಿದ್ದು, ಓರ್ವಳನ್ನು ಮನೆಗೆ ವಾಪಸ್ ಬಿಟ್ಟಿದ್ದಾನೆ. ಆತನ ಹೇಳಿಕೆ ಮೇರೆಗೆ ಕಾಲುವೆ ಉದ್ದಕ್ಕೂ ಪರಿಶೀಲನೆ ನಡೆಸಿದ ಪೊಲೀಸರು, ಭೀಮರಾಯನ ಗುಡಿ ಬಳಿ ಮುಖ್ಯ ಕಾಲುವೆಯಲ್ಲಿ ಎರಡು ಮಕ್ಕಳ ಮೃತದೇಹ ಪತ್ತೆಯಾಗಿದ್ದು, ಸಾನ್ವಿ (9) , ಸೃಜನ್ (2) ಎಂದು ಪೊಲೀಸರು ದೃಢಪಡಿಸಿದ್ದಾರೆ. ಇನ್ನೊಂದು ಮಗುವನ್ನು ಆರೋಪಿಯೇ (ತಂದೆ) ವಾಪಸ್ ಮನೆಗೆ ಬಿಟ್ಟಿದ್ದು ಈಗಾಗಲೇ ತಾಯಿಯ ವಶದಲ್ಲಿದೆ ಎಂದು ಪಿಎಸ್ಐ ಶಿವರಾಜ ಪಾಟೀಲ್ ತಿಳಿಸಿದ್ದಾರೆ. ಘಟನೆ ಕುರಿತು ಗೋಗಿ ಠಾಣೆಯಲ್ಲಿ ಬಿಎನ್ ಎಸ್ ಸೆಕ್ಷನ್ 302 ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆಕೈಗೊಂಡಿದ್ದೇವೆ ಎಂದು ಅವರು ಸ್ಪಷ್ಟ ಪಡೆಸಿದ್ದಾರೆ.




