ಅಹಂಭಾವ ಅಳಿದು ಸಾಮಾನ್ಯ ನಾನೆಂದು ಬಾಳಿ – ಪ್ರವಚನಕಾರ ಅಜೇಂದ್ರ ಮಹಾಸ್ವಾಮೀಜಿ

ಅಹಂಭಾವ ಅಳಿದು ಸಾಮಾನ್ಯ ನಾನೆಂದು ಬಾಳಿ – ಅಜೇಂದ್ರ ಶ್ರೀ
ಶಹಾಪುರಃ ಮನುಷ್ಯನಿಗೆ ಅಹಂಕಾರ ಬರಬಾರದು. ಎಲ್ಲಿಂದ ಬಂದೆ ಹೇಗಿದ್ದೆ ಹೇಗಾದೆ ಎಂಬ ಅರಿವು ಇರಬೇಕೆಂದು ಪ್ರವಚನಕಾರರಾದ ಶ್ರೀಅಜೇಂದ್ರ ಮಹಾಸ್ವಾಮೀಜಿ ತಿಳಿಸಿದರು.
ನಗರದ ಬಸವೇಶ್ವರ ಬಡಾವಣೆಯ (ತಹಸೀಲ್ ಏರಿಯಾ) ದ್ವಾದಶ ಜ್ಯೋತಿರ್ಲಿಂಗ ದೇವಸ್ಥಾನದ 40 ನೇ ಮಹೋತ್ಸವ ಹಾಗೂ ಪಲ್ಲಕ್ಕಿ ಉತ್ಸವ ಅಂಗವಾಗಿ ನಡೆದ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಾನು ಎಂಬುದನ್ನು ತೊರೆದರೆ ಪ್ರಪಂಚ ನಿಮ್ಮನ್ನು ಹಿಂಬಾಲಿಸಲಿದೆ. ಭಕ್ತಿ ಮಾರ್ಗ ಅನುಸರಿಸಬೇಕು.
ಸದ್ವಿಚಾರ, ಸದ್ವಿನಯ, ಸದಾಚಾರ ಕಂಡುಕೊಂಡಲ್ಲಿ ಮಾನವ ಜೀವನ ಪಾವನವಾಗಲಿದೆ. ಮನುಷ್ಯ ಎಷ್ಟೇ ಆಸ್ತಿ ಅಂತಸ್ತು ಗಳಿಸಿದರು ಕೊನೆಗೆ ಬೇಕಾಗಿರುವದು ಆರಡಿ ಮೂರಡಿ ಜಾಗ ಮಾತ್ರ. ಇದನ್ನು ಅರ್ಥೈಸಿಕೊಂಡು ನಡೆಯಬೇಕು.
ಶರಣ ಅಲ್ಲಮಪ್ರಭು, ಕವಿ ಬೇಂದ್ರೇ ಅವರ ರಚಿಸಿದ ವಚನ, ಕಾವ್ಯಗಳ ಮೂಲಕ ಉದಾಹರಣೆ ಕೊಟ್ಟು ಎಲ್ಲರ ಮನ ಮುಟ್ಟುವಂತೆ ಹೇಳಿದರು. ಶರೀರದಲ್ಲಿ ಆತ್ಮ ಇರುವತನಕ ಮಾತ್ರ ಬೆಲೆ. ಶರೀರದಿಂದ ಆತ್ಮ ಬಿಟ್ಟು ಹೋದಾಗ ಅದನ್ಯಾರು ಕೇಳುವದಿಲ್ಲ.
ಬಸ್ಸೊಂದರಲ್ಲಿ ಪ್ರಯಾಣ ಮಾಡುವಾಗ ಆಗತಾನೇ ಪರಿಚಯ ಮಾಡಿಕೊಂಡವರು ತಮ್ಮೂರು ಬಂದ ಕೂಡಲೇ ನಾನು ಹೋಗಿ ಬರುವೆ ಎಂದು ಹೇಳುತ್ತಾರೆ. ಆದರೆ ಜನ್ಮದಿಂದಲೇ ಶರೀರದ ಜೊತೆಗೆ ಬಂದಿದ್ದ ಆತ್ಮ ತಾನು ಬಿಟ್ಟು ಹೋಗುವಾಗ ಒಂದು ಮಾತು ಹೇಳಿ ಹೋಗುವದಿಲ್ಲ ಅಲ್ಲವೇ.?ಇದು ಚಿಂತನೆ ಮಾಡಿ ಎಂದರು.
ಈ ಸಂದರ್ಭದಲ್ಲಿ ಕುಂಬಾರಗೇರಿ ಹಿರೇಮಠದ ಸೂಗುರೇಶ್ವರ ಶಿವಾಚಾರ್ಯರು, ಗುಂಬಳಾಪುರ ಮಠದ ಸಿದ್ಧೇಶ್ವರ ಶಿವಾಚಾರ್ಯರು, ದೋರನಹಳ್ಳಿ ಚಿಕ್ಕಮಠದ ಶಿವಲಿಂಗರಾಜೇಂದ್ರ ಶಿವಾಚಾರ್ಯರು ಆಶೀರ್ವಚನ ನೀಡಿದರು.
ಲೋಕಾಪುರದ ಶ್ರೀಗಳು ಮತ್ತು ಶ್ರೀಮಠದ ವಿಶ್ವರಾಧ್ಯ ದೇವರು ಉಪಸ್ಥಿತಿ ಇದ್ದರು. ಕೊಳಲುವಾದಕ ಚಂದ್ರು ಗೋಗಿ, ತಬಲಾ ಮಹಾಂತೇಶ, ಹಾಡುಗಾರ ರಾಜಕುಮಾರ ತಂಡ ಸಂಗೀತದ ಮೂಲಕ ಸಾಥ್ ನೀಡಿದರು. ಇದೇ ಸಂದರ್ಭದಲ್ಲಿ ವಕೀಲ, ಪತ್ರಕರ್ತ ಮಲ್ಲಿಕಾರ್ಜುನ ಮುದನೂರ ಅವರಿಗೆ ಶ್ರೀಗುರು ರಕ್ಷೆಯಡಿ ಸನ್ಮಾನಿಸಲಾಯಿತು.
ಯೋಗ ಗುರು, ಶಿಕ್ಷಕ ಲಕ್ಷ್ಮಣ ಲಾಳಸೇರಿ ನಿರೂಪಿಸಿ ವಂದಿಸಿದರು. ಪ್ರವಚನವನ್ನು ಆಲಿಸಲು ಮಹಿಳೆಯರು, ಹಿರಿಯರು ಮಕ್ಕಳು ಸೇರಿದ್ದರು.