ಕೋರೆಗಾಂವ್ ಘಟನೆ ಖಂಡಿಸಿ ದಲಿತಪರ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ
ಯಾದಗಿರಿಃ ಮಹಾರಾಷ್ಟ್ರದ ಕೋರೆಗಾಂವನಲ್ಲಿ ದಲಿತರ ಮೇಲೆ ನಡೆದ ಹಿಂಸಾಚಾರ ಖಂಡಿಸಿ ಆರೋಪಿತರ ಮೇಲೆ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಜಿಲ್ಲೆಯ ಶಹಾಪುರ ನಗರದಲ್ಲಿ ದಲಿತಪರ ಸಂಘಟನೆಗಳ ಒಕ್ಕೂಟದಿಂದ ಬೃಹತ್ ಪ್ರತಿಭಟನೆ ಜರುಗಿತು.
ಜನೇವರಿ ಒಂದರಂದು ಮಹಾರಾಷ್ಟ್ರದ ಕೋರೆಗಾಂವ ಗ್ರಾಮದಲ್ಲಿದ್ದ ದಲಿತ ಸೇನೆಯ ವಿಜಯಸ್ಥಂಭದ ದರ್ಶನ ಪಡೆದು ದಲಿತ ಹುತಾತ್ಮ ವೀರಯೋಧರಿಗೆ ನಮನ ಸಲ್ಲಿಸಲು ಪ್ರತಿವರ್ಷದಂತೆ ವಿವಿಧಡೆಯಿಂದ ಸೇರಿದ್ದ ಜನಸ್ತೋಮದ ಮೇಲೆ ಏಕಾಏಕಿ ಜನರು ದಾಂಧಲೆ ನಡೆಸಿದ್ದು, ಮಾರಣಾಂತಿಕ ಹಲ್ಲೆಗಳು ನಡೆದಿವೆ. ಕೋಮು ಗಲಭೆಗೆ ಒಳಗಾದ ದಲಿತರಿಗೆ ಸೂಕ್ತ ರಕ್ಷಣೆ ಒದಗಿಸಬೇಕು. ಅಲ್ಲದೆ ಗಲಭೆ ಕಾರಣರಾದವರ ಮೇಲೆ ಕಠಿಣ ಕ್ರಮ ಜರುಗಿಸಬೇಕೆಂದು ಪ್ರತಿಭಟನಾನಿರತರು ಆಗ್ರಹಿಸಿದರು.
ಸ್ವಾಭಿಮಾನಿ ದಲಿತರ ಮೇಲೆ ಹೇಯ ಕೃತ್ಯವೆಸಗಲು ಕಾರಣಿಭೂತರಾದವರನ್ನು ಕೂಡಲೇ ಬಂಧಿಸಬೇಕು. ಗಲಭೆ ಕೋರರ ವಿರುದ್ಧ ಕೂಡಲೇ ಅಲ್ಲಿನ ಸರ್ಕಾರ ಮತ್ತು ಕೇಂದ್ರ ಸರ್ಕಾರ ಕಾನೂನು ಕ್ರಮಕೈಗೊಳ್ಳಬೇಕು. ದಲಿತರ ಮೇಲೆ ಕೋಮುವಾದಿ ಸಂಘಟನೆಗಳಾದ ಆರ್ಎಸ್ಎಸ್ ಸೇರಿದಂತೆ ಹಿಂದೂಪರ ಸಂಘಟನೆಗಳು ದಾಂದಲೇ ನಡೆಸಿದ್ದು, ಸಂಘಟನೆಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕು.
ಜಾತಿಯತೇ ಧರ್ಮಗಳ ನಡುವೆ ಬೆಂಕಿ ಹಚ್ಚು ವ ಕೆಲಸವನ್ನು ಹಿಂದೂಪರ ಸಂಘಟನೆಗಳು ಮಾಡುತ್ತಾ ಬಂದಿದ್ದು, ಸಮಾಜದ ಸಾಮರಸ್ಯ ಹಾಳಗೆಡುವಿವೆ ಹೀಗಾಗಿ ಕೂಡಲೇ ಸರ್ಕಾರ ಘಟನೆಗೆ ಕಾರಣರಾದವರನ್ನು ಬಂಧಿಸುವ ಮೂಲಕ ದಲಿತರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಮನವಿ ಮಾಡಿದರು.
ಮುಂಚಿತವಾಗಿ ನಗರದ ಸಿಬಿ ಕಮಾನದಿಂದ ಬಸವೇಶ್ವರ ವೃತ್ತದವರೆಗೂ ಪ್ರತಿಭಟನಾ ಮೆರವಣಿಗೆ ಜರುಗಿತು. ಸ್ಥಳಕ್ಕೆ ಆಗಮಿಸಿದ ಕಂದಾಯ ಇಲಾಖೆಯ ಸಿಬ್ಬಂದಿ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮುಖಂಡರಾದ ಶಿವಕುಮಾರ ತಳವಾರ, ಸಯ್ಯದ್ ಖಾಲಿದ್, ಶಿವಪುತ್ರ ಜವಳಿ, ರಾಮಣ್ಣ ಸಾದ್ಯಾಪುರ, ಸಯ್ಯದ್ ಖಾದ್ರಿ, ಶರಣು ದೋರನಹಳ್ಳಿ, ಅಜಯ್ ಯಳಸಂಗಿಕರ್, ಮರೆಪ್ಪ ಕನ್ಯಾಕೋಳೂರ, ರಾಯಪ್ಪ ಸಾಲಿಮನಿ ಹಾರಣಗೇರ, ಈರಣ್ಣ ಕಸನ್ ಸೇರಿದಂತೆ ದಸಂಸ ಮತ್ತು ಎಸ್ಡಿಪಿಐ ಸಂಘಟನೆಗಳ ಕಾರ್ಯಕರ್ತರ ಭಾಗವಹಿಸಿದ್ದರು.
ಡಿಎಸ್ಪಿ ಪಾಂಡುರಂಗ, ನಗರ ಸಿಪಿಐ ನಾಗರಾಜ, ಗ್ರಾಮೀಣ ಸಿಪಿಐ ಮಹ್ಮದ್ ಸಿರಾಜ್ ಹಾಗೂ ಪಿಎಸ್ಐ ಸತೀಶ ಮೂಲಿಮನಿ, ಗೋಗಿ ಪಿಎಸ್ಐ ಕೃಷ್ಣಾ ಸುಬೇದಾರ, ಭೀ.ಗುಡಿ ಪಿಎಸ್ಐ ತಿಪ್ಪಣ್ಣ ರಾಠೋಡ ಹಾಗೂ ಪೊಲೀಸ್ ಸಿಬ್ಬಂದಿ ಸೂಕ್ತ ಭದ್ರತೆವಹಿಸಿದ್ದರು.