
ಜನೆವರಿ 30- ರಾಷ್ಟ್ರೀಯ ಹುತಾತ್ಮ ದಿನದ ನಿಮಿತ್ತ ಲೇಖನ
ನಿಜವಾಗಿ ಇತಿಹಾಸ ನಿರ್ಮಿಸಿದವರೇ ಹುತಾತ್ಮರು ಎಂದು ಅಲಿಸ್ಟರ್ ಕ್ರೌಲಿ ಅವರ ಮಾತು ಕೆಲವು ಸಂದರ್ಭಗಳಲ್ಲಿ ಸತ್ಯ. ಈ ಮಾತು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಮಹಾತ್ಮರಿಗೆ ಮಾತ್ರ ಅನ್ವಯಿಸುತ್ತದೆ ಎಂಬುದು ಅಂತೂ ಸತ್ಯ.
ಮಹಾನ್ ವ್ಯಕ್ತಿಗಳ, ಮಹಾತ್ಮರ, ಆಧ್ಯಾತ್ಮಿಕ ಚಿಂತಕರ ಹಾಗೂ ಮಹಾಪುರುಷರಿಗೆ ಜನ್ಮ ನೀಡಿದ ದೇಶ ನಮ್ಮೀ ಭಾರತ. ದೇಶವನ್ನು ಕಟ್ಟುವ ಕೈಂಕರ್ಯದಲ್ಲಿ ಇವರ ಮಾರ್ಗೋಪದೇಶಗಳು ಪ್ರಮುಖ ಪಾತ್ರ ವಹಿಸುತ್ತಿವೆ.
ಹೀಗಾಗಿ ಅವರ ಚಿಂತನೆಗಳೇ ಅಷ್ಟು ಪರಿಣಾಮಕಾರಿ ಮತ್ತು ಪ್ರಬಲವಾಗಿರುತ್ತಿದ್ದವು ಎಂಬುದು ಗೊತ್ತಾಗುತ್ತದೆ. ಈ ಹಿನ್ನೆಲೆಯಲ್ಲಿ ನಮಗೆ ಇಂತಹ ಮಹಾನ್ ವ್ಯಕ್ತಿಗಳ ಮಾರ್ಗದರ್ಶನದ ನುಡಿಗಳು ಅತ್ಯಗತ್ಯ.
ಸರ್ವ ಧರ್ಮ ಸಮಭಾವ,ಸಾಮಾಜಿಕ ನ್ಯಾಯ ಮತ್ತು ಜಾತ್ಯಾತೀತ ಸಿದ್ಧಾಂತದ ಬದ್ಧತೆ, ಒಬ್ಬ ಪ್ರಕೃತಿ ಚಿಕಿತ್ಸೆಯ ಪ್ರಯೋಗ ಕಾರ, ಸಸ್ಯ ಆಹಾರದ ಪ್ರಯೋಗಕಾರ, ಅಸಾಧಾರಣ ಚಾಣಾಕ್ಷ ರಾಜಕಾರಣಿ, ಸತ್ಯ ಮತ್ತು ಅಹಿಂಸೆಯ ಮೇಲೆ ಜೀವನವಿಡೀ ಪ್ರಯೋಗ ಮಾಡಿದ ಆತ್ಮ ಸಾಧಕ – ಹರಿಕಾರ ಮತ್ತು ಅಪ್ಪಟ ಕರ್ಮಯೋಗಿ ನಮ್ಮ ಮಹಾತ್ಮ ಗಾಂಧೀಜಿ.ಇವರು ಅಹಿಂಸಾವಾದ ಮೇಲೆ ದೇಶ ಕಟ್ಟುವ ಕನಸನ್ನು ಕಂಡಿದ್ದರು.ಆಗಿನ ದಿನಗಳಲ್ಲಿ ದೇಶದ ಸ್ವಾತಂತ್ರ್ಯದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದವರು.
ಆದರೆ ಇಂತಹ ಸಂದರ್ಭದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಹಂತಕನ ಗುಂಡಿಗೆ 1948, ಜನವರಿ 30ರಂದು ಬಲಿಯಾದರು.ಭಾರತ ಸ್ವಾತಂತ್ರ್ಯ ಪಡೆಯುವುದಕ್ಕಾಗಿ ಹಿಂಸೆಯಿಲ್ಲದೆ ಹೋರಾಡಿದ ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರಿಗೆ *”ರಾಷ್ಟ್ರೀಯ ಹುತಾತ್ಮ” ದಿನಾಚರಣೆ ನಮನಗಳು.ರಾಷ್ಟ್ರೀಯ ಮಟ್ಟದಲ್ಲಿ ಈ ದಿನವನ್ನು “ಸರ್ವೋದಯ ದಿನ”ಎಂದೂ ಕರೆಯಲಾಗುತ್ತದೆ.
ನಾವು ಎಂದಿಗೂ ಅವರ ಕನಸಿನ ರಾಮರಾಜ್ಯವನ್ನು ಸಾಕಾರಗೊಳಿಸಲು ಬದ್ಧರಾಗಿಬೇಕು.ಈ ದಿನವನ್ನು ನಮ್ಮ ದೇಶಕ್ಕಾಗಿ ಪ್ರಾಣತೆತ್ತ ಮಹನೀಯರಿಗೆ ಗೌರವ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ‘ಹುತಾತ್ಮರ ದಿನ’ವನ್ನಾಗಿ ಆಚರಿಸಲಾಗುತ್ತಿದೆ.
ಈ ಬಲಿದಾನದಿಂದ ಗಾಂಧೀಜಿಯ ಸಿದ್ಧಾಂತಕ್ಕೆ ಯಾವುದೇ ತೊಡಕಾಗಬಾರದು. ಶಕ್ತಿಗಳ ವಿಭಜನವಾದಿ, ಮಾನವ ವಿರೋಧಿ ಮನಸ್ಥಿತಿ ಸೋಲಬೇಕು. ಗಾಂಧೀಜಿಯ ಬಲಿದಾನ ವ್ಯರ್ಥವಾಗಬಾರದು.ದೇಶದ ಎಲ್ಲ ನಾಗರಿಕರು ಗಾಂಧೀಜಿ ಬಲಿದಾನ ದಿನವಾದ ಜನವರಿ 30ವನ್ನು ದೇಶದ ಜನರು ಎಂದೆಂದಿಗೂ ಮರೆಯಬಾರದು.
ಸ್ವಾತಂತ್ರ್ಯಕ್ಕಾಗಿ ಮಹಾತ್ಮಾ ಗಾಂಧೀಜಿಯವರ ತ್ಯಾಗ ಮಹತ್ತರವಾಗಿದ್ದು, ಅವರನ್ನು ನೆನೆಯುವುದು ನಮ್ಮೆಲ್ಲರ ಕರ್ತವ್ಯ.ಅವರು ಮಾಡಿದ ರೀತಿಯ ತ್ಯಾಗ ನಮ್ಮಿಂದ ಅಸಾಧ್ಯವಾದರೂ ದೇಶ ಸೇವೆಗೆ ನಮ್ಮಿಂದಾಗುವ ರೀತಿಯ ಕೊಡುಗೆ ನೀಡಲು ಮುಂದಾಗಬೇಕಾಗಿದೆ.
ಅದಕ್ಕಾಗಿ ವರ್ತಮಾನ ಮತ್ತು ಭವಿಷ್ಯ ದಿನದಲ್ಲಿ ಅಹಿಂಸೆಯಿಂದ ಇರಲು ನಾವುಮೊದಲು ದೇಹ ಮತ್ತು ಮನಸ್ಸುಗಳನ್ನು ಶುದ್ಧಗೊಳಿಸಬೇಕಾಗಿದೆ. ಆಗ ಮಾತ್ರ ನಮ್ಮಲ್ಲಿ ಕೂಡ ಶುದ್ಧವಾದ ಯೋಚನೆಗಳು ಬರಲು ಸಾಧ್ಯ.ಇದಕ್ಕೆ ವಚನಕಾರ ಬಸವಣ್ಣ ಬಹಿರಂಗ, ಅಂತರಂಗ ಶುದ್ಧಿ ಮಾಡಿಕೊಳ್ಳಲು ಕರೆ ನೀಡುತ್ತಾರೆ.
ಮನಸ್ಸಿನ ಕುರಿತು ಸ್ವಾಮಿ ವಿವೇಕಾನಂದರು ಹೇಳುವಂತೆ, ನಮ್ಮ ಮನಸ್ಸು ಪರಿಶುದ್ಧವಾದಾಗ, ಅದೇ ಗುರುವಾಗಿ ಎಲ್ಲವೂ ನಿಂತು ಬೋಧಿಸುತ್ತದೆ.ಹೀಗಾಗಿ ಮೊದಲು ಮನಸ್ಸು ಶುದ್ಧಿಗೆ ಮುಂದಾದಾಗ ಮಾತ್ರ ನಾವು ಗುರುವಾಗಲು ಸಾಧ್ಯ.
ನಮ್ಮ ನಾಳೆಯ ದಿನಗಳು ಸುಂದರವಾಗಿರಬೇಕಾದರೆ ನಮ್ಮ ಇಂದಿನ ಯೋಚನೆಗಳು ಸುಂದರವಾಗಿರಬೇಕು ಎಂಬುದು ನಮ್ಮ ಆಶಯ.ಕೊನೆಯದಾಗಿ ಹೇಳುವುದಾದರೆ ಯಾರೆ ಆಗಲಿ ಸೇವೆಗಾಗಿ ತಮ್ಮ ಬದುಕನ್ನು ತ್ಯಾಗ ಮಾಡುವ ಎಲ್ಲ ಹುತಾತ್ಮರಿಗೂ ನಾವು ತಲೆಬಾಗುಬೇಕು. ದೇಶದ ಕುರಿತು ಅವರಿಗಿರುವ ಸಮರ್ಪಣಾ ಭಾವ ಮತ್ತು ಅವರ ಧೈರ್ಯವನ್ನು ನಾವೆಂದಿಗೂ ಮರೆಯಬಾರದು ಹಾಗೂ ಅವರನ್ನು ಗೌರವದಿಂದ ಕಾಣಬೇಕು.
-ಬಸವರಾಜ ಎಮ್ ಯರಗುಪ್ಪಿ
ಬಿ ಆರ್ ಪಿ ಶಿರಹಟ್ಟಿ
ಸಾ.ಪೊ ರಾಮಗೇರಿ. ತಾಲ್ಲೂಕು ಲಕ್ಷ್ಮೇಶ್ವರ. ಜಿಲ್ಲಾ ಗದಗ
ದೂರವಾಣಿ 9742193758
ಮಿಂಚಂಚೆ :basu.ygp@gmail.com