ಪ್ರಮುಖ ಸುದ್ದಿ

ಪ್ರವಾಹ ಪೀಡಿತ ಪ್ರದೇಶಕ್ಕೆ ಎಸ್.ಆರ್.ಪಾಟೀಲ್ ಭೇಟಿ

ಕೊಳ್ಳೂರ(ಎಂ): ಸೇತುವೆ ಎತ್ತರಿಸಲು ಒತ್ತಾಯಿಸುವೆ- ಪಾಟೀಲ್ ಭರವಸೆ

yadgiri, ಶಹಾಪುರಃ ಪ್ರತಿ ವರ್ಷ ಪ್ರವಾಹ ಉಂಟಾದರೆ ತಾಲ್ಲೂಕಿನ ಕೊಳ್ಳೂರ(ಎಂ) ಸೇತುವೆ ಮುಳಗುಡೆಯಾಗುವುದು ಸಾಮಾನ್ಯವಾಗಿದೆ. ಇದರಿಂದ ಸೇತುವೆ ಸಂಪರ್ಕ ಸ್ಥಗಿತಗೊಂಡು ಪ್ರಯಾಣಿಕರು ಪರದಾಡುವಂತೆ ಆಗಿದೆ. ಅಲ್ಲದೆ ಪ್ರವಾಹದಿಂದ ನದಿ ದಂಡೆಯ ಜಮೀನುಗಳು ಮುಳುಗಡೆಯಾಗಿ ಸಂಕಷ್ಟ ಎದುರಿಸುತ್ತಿದ್ದಾರೆ. ಇದಕ್ಕೆಲ್ಲ ಶಾಶ್ವತ ಪರಿಹಾರ ಎಂದರೆ ಸೇತುವೆ ಎತ್ತರಿಸುವುದೊಂದೆ ಆಗಿದೆ. ಈ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ವಿಧಾನ ಪರಿಷತ್ತಿನ ಪ್ರತಿಪಕ್ಷದ ನಾಯಕ ಎಸ್.ಆರ್.ಪಾಟೀಲ್ ತಿಳಿಸಿದರು.

ತಾಲ್ಲೂಕಿನ ಕೊಳ್ಳೂರ(ಎಂ) ಗ್ರಾಮದ ಪ್ರವಾಹ ಪ್ರದೇಶಕ್ಕೆ ಶುಕ್ರವಾರ ಭೇಟಿ ನೀಡಿ ರೈತರ ಜೊತೆ ಸಮಾಲೋಚನೆ ನಡೆಸಿ ಸಮಗ್ರ ಮಾಹಿತಿ ಪಡೆದುಕೊಂಡು ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಕೃಷ್ಣಾ ಪ್ರವಾಹದಿಂದ ನದಿ ತೀರದ ಜಮೀನುಗಳು ತೀರ ಆಹದಗೆಟ್ಟು ಹೋಗಿವೆ. ಫಲವತ್ತಾದ ಮಣ್ಣು ನೀರು ಪಾಳಾಗಿದೆ. ಪ್ರತಿ ಬಾರಿ ಪ್ರವಾಹ ಬಂದೆರಗುವದರಿಂದ ಈ ಭಾಗದ ಭೂಮಿ ಫಲವತ್ತತೆ ಹಾಳಾಗಿದೆ. ಈ ಕುರಿತು ಸಂಬಂಧಿಸಿದ ಅಧಿಕಾರಿ ವರ್ಗ ಹಾಗೂ ಸರ್ಕಾರಕ್ಕೆ ತಿಳಿಸುವ ಕೆಲಸ ಮಾಡುತ್ತೇನೆ ಎಂದರು.

ಇದೇ ಸಂದರ್ಭದಲ್ಲಿ ನೆರೆದ ರೈತರು, ನದಿ ತೀರದ ಗ್ರಾಮದ ಪ್ರದೇಶದಲ್ಲಿ ವಿದ್ಯುತ್ ಸಮರ್ಪಕವಾಗಿ ಪೂರೈಕೆ ಮಾಡುವಂತೆ ಮನವಿ ಮಾಡಿದರು. ಪ್ರವಾಹದಿಂದಾಗಿ ವಿದ್ಯುತ್ ಪೂರೈಕೆಯಲ್ಲಿ ವ್ಯಥೆಯಾಗಿದೆ. ದುರಸ್ತಿ ಕಾರ್ಯ ಶೀಘ್ರದಲ್ಲಿ ಮುಗಿಸುವ ಮೂಲಕ ತ್ವರಿತವಾಗಿ ವಿದ್ಯುತ್ ಪೂರೈಕೆಯಾಗುವಂತೆ ಮಾಡಿ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮರಿಗೌಡ ಪಾಟೀಲ್ ಹುಲಕಲ್, ಮಾಜಿ ಎಂಎಲ್ಸಿ ಚೆನ್ನಾರಡ್ಡಿ ತುನ್ನೂರ, ಮುಖಂಡರಾದ ಶ್ರೀನಿವಾಸರಡ್ಡಿ ಕಂದಕೂರ, ಡಾ.ಭೀಮಣ್ಣ ಮೇಟಿ, ಮರೆಪ್ಪ ಬಿಳ್ಹಾರ, ಮಾಣಿಕರಡ್ಡಿ ಕುರಕುಂದಿ, ಶಿವರಡ್ಡಿ ಪಾಟೀಲ್, ಸುರೇಶ ಜೈನ್ ಇದ್ದರು.

 

ಬೆಳೆ ವಿಮೆ ಪರಿಹಾರ ನೀಡದ ಬಗ್ಗೆ ಸಚಿವರನ್ನು ಪ್ರಶ್ನೆ ಮಾಡಿದ ಕಾರಣ ರೈತರ ಮೇಲೆ ದೂರು ದಾಖಲಿಸಿದ್ದಾರೆ ಎಂದು ಗೊತ್ತಾಗಿದೆ. ಅಧಿಕಾರಿ ವರ್ಗ ಈ ರೀತಿ ಅನುಸರಿಸುವದು ಸರಿಯಲ್ಲ. ಬೆಳೆ ವಿಮೆ ಪರಿಹಾರ ಕೇಳುವದು ತಪ್ಪಾ.? ಇದು ಹಿಟ್ಲರ್ ಆಡಳಿತಕ್ಕೆ ಸಾಕ್ಷಿಯಾಗುತ್ತದೆ. ಈ ಕುರಿತು ಜಿಲ್ಲಾಧಿಕಾರಿ ಜೊತೆ ಮಾತನಾಡುವೆ. ನಿಮ್ಮ ಜೊತೆ ನಾವಿದ್ದೇವೆ ಎಂದು ಎಸ್.ಆರ್.ಪಾಟೀಲ್ ರೈತರಿಗೆ ತಿಳಿಸಿದರು. ಅಲ್ಲದೆ ಪ್ರವಾಹದಿಂದ ಹಾನಿಯಾದ ಪ್ರದೇಶಗಳನ್ನು ಸಮರ್ಪಖವಾಗಿ ಸರ್ವೇ ನಡೆಸುವ ಮೂಲಕ ತ್ವರಿತವಾಗಿ ಪರಿಹಾರ ಕಲ್ಪಿಸುವ ಕಾರ್ಯಕ್ಕೆ ಒತ್ತಾಯಿಸಲಾಗುವದು ಎಂದರು.

 

Related Articles

Leave a Reply

Your email address will not be published. Required fields are marked *

Back to top button