ಪರೀಕ್ಷಾ ಕೇಂದ್ರಗಳಲ್ಲಿ ಸರ್ಕಾರಿ ಕಾಲೇಜು ವಿದ್ಯಾರ್ಥಿಗಳ ಸೇವೆ
ಪರೀಕ್ಷಾ ಕೇಂದ್ರಗಳಲ್ಲಿ ಸರ್ಕಾರಿ ಕಾಲೇಜು ವಿದ್ಯಾರ್ಥಿಗಳ ಸೇವೆ
ಯಾದಗಿರಿ : ಕೋವಿಡ್ 19 ಸಾಂಕ್ರಾಮಿಕ ರೋಗದ ನಡುವೆಯೂ ನಡೆದ ಎಸ್ಎಸ್ಎಲ್ಸಿ ಪರೀಕ್ಷೆಗಳ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಸರ್ಕಾರಿ ಪದವಿ ಮಹಾವಿದ್ಯಾಲಯದ ಎನ್ಸಿಸಿ ವಿದ್ಯಾರ್ಥಿಗಳು ನಿಶ್ವಾರ್ಥ ಸೇವೆ ಸಲ್ಲಿಸಿದ್ದಾರೆ ಎಂದು ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಸುಭಾಶ್ಚಂದ್ರ ಕೌಲಗಿ ತಿಳಿಸಿದ್ದಾರೆ.
ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆಯ ಸರ್ಕಾರದ ಪ್ರಧಾನಕಾರ್ಯದರ್ಶಿ ಹಾಗೂ ಕರ್ನಾಟಕ ಬಟಾಲಿಯನ್ ಎನ್ಸಿಸಿ ಕಮಾಂಡಿಂಗ್ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಕಾಲೇಜಿನ ಎನ್ಸಿಸಿ ಅಧಿಕಾರಿಗಳಾದ ಮೇಜರ್ ಶರಣಬಸ್ಸಪ್ಪ ರಾಯಕೋಟಿ ಮಾರ್ಗದರ್ಶನದಲ್ಲಿ ಗಂಗಾಧರ, ವಿಕಾಸ, ಸಂತೋಷಕುಮಾರ, ಸುನೀಲ್, ಅಯ್ಯಪ್ಪ, ಅರುಣಾದೇವಿ, ಅಶ್ವಿನಿ, ಕೀರ್ತನಾ ಸೇರಿದಂತೆ 40 ವಿದ್ಯಾರ್ಥಿಗಳು, 12 ವಿದ್ಯಾರ್ಥಿನಿಯರು ಸೇವೆ ಸಲ್ಲಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಕಳೆದ ತಿಂಗಳು ಜೂನ್ 24ರಿಂದ ಜು.4ರವರೆಗೆ ನಡೆದ ಎಸ್ಎಸ್ಎಲ್ಸಿ ಪರೀಕ್ಷೆಗಳ ಯಾದಗಿರಿ ನಗರದ ಸರ್ಕಾರಿ ಪ್ರೌಢ ಶಾಲೆ, ಸರ್ಕಾರಿ ಕನ್ಯಾ ಪ್ರೌಢ ಶಾಲೆ, ಜವಾಹರ್ ಪ್ರೌಢ ಶಾಲೆ, ಮಹಾತ್ಮಾಗಾಂಧಿ ಪ್ರೌಢ ಶಾಲೆ, ನ್ಯೂ ಕನ್ನಡ ಪ್ರೌಢ ಶಾಲೆ ಸೇರಿದಂತೆ ಗ್ರಾಮಾಂತರ ಪ್ರದೇಶದ ಸೈದಾಪೂರ, ವಡಗೇರಾ, ಬೆಂಡೆಬೆಂಬಳಿ ಮುಂತಾದ ಪರೀಕ್ಷಾ ಕೇಂದ್ರಗಳಲ್ಲಿ ಕಾಲೇಜಿನ ಎನ್ಸಿಸಿ ವಿದ್ಯಾರ್ಥಿಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಸಾನಿಟೈಜರ್ ಹಾಕಿಕೊಳ್ಳುವುದು, ಮಾಸ್ಕ್ ಧರಿಸುವುದು ಮುಂತಾದ ಜಾಗೃತಿ ಸಂಗತಿಗಳನ್ನು ತಿಳಿಸುತ್ತಾ ಶಿಸ್ತು ಪಾಲನೆಯನ್ನು ಕೈಗೊಂಡಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಆಯಾ ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರುಗಳು ವಿದ್ಯಾರ್ಥಿಗಳ ನಿಶ್ವಾರ್ಥ ಸೇವೆಯನ್ನು ಶ್ಲಾಘಿಸಿ ಮೆಚ್ಚುಗೆಯ ಪತ್ರವನ್ನು ನೀಡಿದ್ದಾರೆ.