ಉಪನೋಂದಣಿ ಅಧಿಕಾರಿ ಕಚೇರಿ ಮೇಲೆ ಎಸಿಬಿ ದಾಳಿ
ಐವರು ದಲ್ಲಾಳಿ ಸೇರಿದಂತೆ ಇಲಾಖೆ ಸಿಬ್ಬಂದಿ ವಿಚಾರಣೆ
ದಲ್ಲಾಳಿಗಳಿಂದ 78 ಸಾವಿರ ರೂ. ವಶಕ್ಕೆ
ಯಾದಗಿರಿ, ಶಹಾಪುರಃ ನಗರದ ಉಪನೋಂದಣಿ ಇಲಾಖೆ ಮೇಲೆ ಮಂಗಳವಾರ ಏಕಾಏಕಿ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳ ತಂಡ, ಐವರು ದಲ್ಲಾಳಿಗಳು ಸೇರಿದಂತೆ ಇಲಾಖೆಯ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಿದ ಘಟನೆ ಮಂಗಳವಾರ ಜರುಗಿತು.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಭ್ರಷ್ಚಾಚಾರ ನಿಗ್ರಹ ದಳದ ಯಾದಗಿರಿ ಪ್ರಭಾರಿ ಡಿವೈಎಸ್ಪಿ ಚಂದ್ರಕಾಂತ ಪೂಜಾರಿ, ಉಪನೋಂದಣಿ ಕಚೇರಿಯಲ್ಲಿ ಸರ್ಕಾರಿ ಶುಲ್ಕಕ್ಕಿಂತ ನಾಲ್ಕು ಪಟ್ಟು ಹಣ ಪಡೆದು ನೋಂದಣಿ ಮಾಡುತ್ತಿದ್ದಾರೆ ಎಂಬ ಸಾಕಷ್ಟು ದೂರುಗಳು ಸಾರ್ವಜನಿಕರಿಂದ ಬಂದ ಹಿನ್ನೆಲೆ, ಉಪನೋಂದಣಿ ಇಲಾಖೆ ಮೇಲೆ ದಾಳಿ ನಡೆಸಿದ್ದು, ಐವರು ದಲ್ಲಾಳಿಗರಲ್ಲಿ 78 ಸಾವಿರ ರೂ. ದೊರೆತಿದೆ.
ಅಲ್ಲದೆ ವಿವಿಧ ನಿವೇಶನ, ಜಮೀನು 20 ನೋಂದಣಿ ಕಾರ್ಯ ಗಳಾಗಿದ್ದು, ಇದಕ್ಕೆ ಸಂಬಂಧಿಸಿದ ಸರ್ಕಾರಿ ನಿಯಮನುಸಾರ ಶುಲ್ಕ ಅಧಿಕಾರಿಗಳ ಬಳಿ ದೊರೆಯಲಿಲ್ಲ. ಹೀಗಾಗಿ ಮೇಲ್ನೋಟಕ್ಕೆ ಸರ್ಕಾರಿ ಶುಲ್ಕ ದುರುಪಯೋಗವಾಗಿರುವದು ಸಹ ಕಂಡು ಬರುತ್ತಿದೆ.
ಬೆಳಗ್ಗೆಯಿಂದ ನಡೆದ ನೋಂದಣಿ ಕಾರ್ಯಗಳ ಸರ್ಕಾರ ನಿಗದಿಪಡಿಸಿದ ಹಣವು ಇಲ್ಲಿನ ಅಧಿಕಾರಿ ಸಿಬ್ಬಂದಿ ಬಳಿ ಕಾಣಲಿಲ್ಲ. ಹೀಗಾಗಿ ಮೇಲ್ನೋಟಕ್ಕೆ ಅಧಿಕಾರಿಗಳು ಮತ್ತು ದಲ್ಲಾಳಿಗಳು ಶಾಮೀಲಾಗಿ ಹಣ ದುರುಪಯೋಗ ಮಾಡಿಕೊಂಡಿರುವದು ಕಂಡು ಬರುತ್ತಿದೆ.
ಸರ್ಕಾರಿ ಶುಲ್ಕಕ್ಕಿಂತ 4 ರಿಂದ 5 ಪಟ್ಟು ಹೆಚ್ಚು ಶುಲ್ಕ ಇಲ್ಲಿನ ಸಿಬ್ಬಂದಿಗಳು ವಸೂಲಿ ಮಾಡುತ್ತಿದ್ದಾರೆ ಎಂದು ನಾಗರಿಕರು ಸಲ್ಲಿಸಿದ ದೂರಿನಲ್ಲಿ ತಿಳಿಸಿದ್ದರು ಎಂದು ಹೇಳಿದ ಅವರು, ಐವರು ದಲ್ಲಾಳಿಗಳ ಹತ್ತಿರ 78.550 ರೂ.ವಶಕ್ಕೆ ಪಡೆಯಲಾಗಿದ್ದು, ಇದೆಲ್ಲ ಅನಧಿಕೃತವಾಗಿ ಸಂಗ್ರಹಿಸಿದ ಹಣವಾಗಿರುವದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.
ಕಚೇರಿ ಅಧಿಕಾರಿ, ಸಿಬ್ಬಂದಿ ಸೇರಿದಂತೆ ಐವರು ದಲ್ಲಾಳಿಗಳ ವಿಚಾರಣೆ ನಡೆದಿದ್ದು, ಸಂಪೂರ್ಣ ವಿಚಾರಣೆ ನಂತರವೇ ಪೂರ್ಣ ಮಾಹಿತಿ ಹೊರಬೀಳಲಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಯಾದಗಿರಿ ಎಸಿಬಿ ಪಿಐ ವೀರೇಶ ದೊಡ್ಮನಿ, ಪಿಐ ಲಕ್ಷ್ಮೀ ನಾರಾಯಣ, ಹಣಮಂತ ಸಣ್ಣಮನಿ ಸೇರಿದಂತೆ ರಾಯಚೂರ ಮತ್ತು ಯಾದಗಿರಿ ಠಾಣೆಯ ಸಿಬ್ಬಂದಿ ದಾಳಿ ವೇಳೆ ಇದ್ದು, ವಿಚಾರಣೆ, ಪರಿಶೀಲನೆ ಮುಂದುವರೆದಿದೆ ಎಂದು ತಿಳಿಸಿದರು.