ಹೊಸೂರಲ್ಲಿ ವಾಂತಿ ಬೇಧಿಃ ವೈದ್ಯರಿಂದ ಸೂಕ್ತ ಚಿಕಿತ್ಸೆ
ಯಾದಗಿರಿಃ ಅಶುದ್ಧ ನೀರು ಸೇವನೆಯಿಂದ ಜಿಲ್ಲೆಯ ಶಹಾಪುರ ತಾಲೂಕಿನ ಹೊಸೂರ ಗ್ರಾಮದಲ್ಲಿ ಸುಮಾರು 20 ಜನ ಮಕ್ಕಳು ಸೇರಿದಂತೆ 3 ಜನ ಹಿರಿಯರಿಗೂ ವಾಂತಿ ಬೇಧಿ ಉಂಟಾಗಿ ಸೋಮವಾರ ಸಂಜೆಯಿಂದ ರಾತ್ರಿವರೆಗೆ ಗ್ರಾಮದ ಸ್ಥಿತಿ ಬಿಗಡಾಯಿಸಿತ್ತು. ನಂತರ ಸುದ್ದಿ ತಿಳಿದ ಇಲ್ಲಿನ ತಾಲೂಕು ವೈದ್ಯಾಧಿಕಾರಿ ಡಾ.ರಮೇಶ ಗುತ್ತೇದಾರ ಅವರು, ಸಮೀಪದ ಅಣಬಿ ಮತ್ತು ಶಿರವಾಳ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯರು ಹಾಗೂ ಸಿಬ್ಬಂದಿಗಳಿಗೆ ತಕ್ಷಣಕ್ಕೆ ಸೂಚನೆ ನೀಡಿ ಗ್ರಾಮಕ್ಕೆ ತೆರಳಲು ತಿಳಿಸಿ ಸೂಕ್ತ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಿದ್ದಾರೆ.
ಶಿರವಾಳ ಸರ್ಕಾರಿ ಆಸ್ಪತ್ರೆಯ ವೈದ್ಯ ಡಾ.ಮಕ್ಸೂದ್ ಅಲಿ ಹಾಗೂ ಇತರೆ ನಾಲ್ಕು ಜನ ಸಿಬ್ಬಂದಿ ತಕ್ಷಣ ಹೊಸೂರ ಗ್ರಾಮಕ್ಕೆ ತೆರಳಿ, ವಾಂತಿ ಬೇಧಿಯಿಂದ ನರಳುತ್ತಿದ್ದ ಮಕ್ಕಳು ಹಾಗೂ ಇತರರನ್ನು ಪರೀಕ್ಷಿಸಿ ಸೂಕ್ತ ಚಿಕಿತ್ಸೆ ನೀಡಿದರು. ಮಂಗಳವಾರ ಸಂಜೆವರಗೂ ಸಮರ್ಪಕ ವಿಕಿತ್ಸೆ ವ್ಯವಸ್ಥೆ ಮಾಡಲಾಗಿದ್ದು, ವಾಂತಿ ಬೇಧಿ ಹತೋಟಿಗೆ ಬಂದಿದೆ.
ಗ್ರಾಮದ ಸರ್ಕಾರಿ ಶಾಲೆಯಲ್ಲಿ ವಿದ್ಯುತ್ ವ್ಯವಸ್ಥೆ ಮಾಡಿ, ರೋಗಿಗಳನ್ನು ನೋಡಲು ಗ್ರಾಮಸ್ಥರು ಅನುವು ಮಾಡಿಕೊಟ್ಟಿದ್ದರು. ಗ್ರಾಮದಲ್ಲಿ ಕುಡಿಯುವ ನೀರು ಸರಬರಾಜು ಆಗವು ನೀರಿನ ಟ್ಯಾಂಕ್ ತೊಳೆಯದೆ ಹೊಲಸು ನೀರು ಸೇವಿಸಿದ ಕಾರಣ, ವಾಂತಿ ಬೇಧಿಗೆ ಕಾರಣವಾಗಿದ್ದು, ಕೂಡಲೇ ಸಂಬಂಧಿಸಿದ ಗ್ರಾಪಂ ಅಭಿವೃದ್ಧಿಗಳು ನೀರಿನ ಟ್ಯಾಂಕ್ ಸ್ವಚ್ಛತೆಗೊಳಿಸಿ ಶುದ್ಧ ಕುಡಿಯುವ ನೀರು ಒದಗಿಸುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಮತ್ತು ಗ್ರಾಮದಲ್ಲೂ ಚರಂಡಿ ಸ್ವಚ್ಛತೆ, ಮನೆಯಲ್ಲಿ ಕುಡಿಯುವ ನೀರು ಸ್ವಚ್ಛತೆಯಿಂದ ಕೂಡಿರಬೇಕು ಎಂದು ವೈದ್ಯರು ಗ್ರಾಮಸ್ಥರಲ್ಲಿ ಜಾಗೃತಿಯೂ ಮೂಡಿಸಿದ್ದಾರೆ. ಒಟ್ಟಾರೆ ವಾಂತಿ ಬೇಧಿ ಹತೋಟಿಗೆ ಬಂದಿದೆ. ಗ್ರಾಮದ ನಾಲ್ಕು ಜನರು ನಗರದ ಜಯ ವಿಜಯ ಮಕ್ಕಳ ಆಸ್ಪತ್ರೆಯಲ್ಲಿ ದಾಖಲಾದರೆ, ಓರ್ವ ಮಗು ಕಲಬುರ್ಗಿಯ ಖಾಸಗಿ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಮುಂಜಾಗೃತಿಗಾಗಿ ಓರ್ವ ವೈದ್ಯರು, ಸಿಬ್ಬಂದಿ ಗ್ರಾಮದಲ್ಲಿ ಇದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಸುದ್ದಿ ತಿಳಿದು ರಾತ್ರಿ ಸಮಯದಲ್ಲ ಸರ್ಕಾರಿ ವೈದ್ಯರ ತಂಡ ಬಂದಿರುವದರಿಂದ ಗ್ರಾಮಸ್ಥರು ವೈದ್ಯರ ಸೇವೆಯಿಂದ ಸಂತೃಪ್ತ ಭಾವ ವ್ಯಕ್ತಪಡಿಸಿದ್ದಾರೆ.