ಡಾ.ಈಶ್ವರಯ್ಯ ಮಠ್ ಅವರ ಬದುಕು ಮತ್ತು ಬರಹ ಒಂದೆ ಆಗಿತ್ತು – ಡಾ.ಶಿರವಾಳ
ಡಾ.ಈಶ್ವರಯ್ಯ ಮಠ್ ಅವರ ಬದುಕು ಮತ್ತು ಬರಹ ಒಂದೆ ಆಗಿತ್ತು – ಡಾ.ಶಿರವಾಲ
ಶಹಾಪುರ: ಇತ್ತೀಚೆಗೆ ಅಗಲಿದ ಡಾ ಈಶ್ವರಯ್ಯ ಮಠ ಅವರ ಬದುಕು ಮತ್ತು ಬರಹ ಒಂದೇ ನೆಲೆಗಟ್ಟಿನಲ್ಲಿತ್ತು ಅವರ ಜೀವನ ಶೈಲಿ ಸರಳವಾಗಿತ್ತು ಅಲ್ಲದೆ ಸಾಹಿತ್ಯ ಮತ್ತು ಸಮಾಜ ಮನುಷ್ಯನ ಸಂಬಂಧದ ಸಂವೇದನೆ ಬಹಳ ಮುಖ್ಯ ಎಂದು ನನಗೆ ಬಾಲ್ಯದಲ್ಲಿ ಹೇಳಿಕೊಟ್ಟಿದ್ದರು ಎಂದು ಸಾಹಿತಿ ಹಾಗೂ ಸಂಶೋಧಕರಾದ ಡಾ.ಮೋನಪ್ಪ ಶಿರವಾಳ ಹೇಳಿದರು.
ನಗರದ ದೇಶಮುಖ ಬಡಾವಣೆಯಲ್ಲಿರುವ ಕನ್ನಡ ಸಾಹಿತ್ಯ ಭವನದಲ್ಲಿ ಹಮ್ಮಿಕೊಂಡಿರುವ ಡಾ. ಈಶ್ವರಯ್ಯ ಮಠ ಅವರ ನುಡಿ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಹಿರಿಯ ಸಾಹಿತಿ ಖ್ಯಾತ ಕಥೆಗಾರ ಸಿದ್ಧರಾಮ ಹೊನ್ಕಲ್ ಮಾತನಾಡಿ ಡಾ.ಈಶ್ವರಯ್ಯ ಮಠ ಅವರ ನೆನಪಿನ ಶಕ್ತಿ ಅಗಾಧವಾಗಿತ್ತು ಅಲ್ಲದೆ ಸರಳ ಮತ್ತು ಸೂಕ್ಷ್ಮ ವೇದನಾ ಶೀಲರಾಗಿ ಕಳೆದ ೨೫ ವರ್ಷಗಳಿಂದ ಕಲಬುರಗಿಯಲ್ಲಿ ನೆಲೆಸಿ ಶರಣ ತತ್ತ್ವ ಆದರ್ಶಗಳನ್ನು ಮೈಗೂಡಿಸಿಕೊಂಡು ವಿಚಾರಧಾರೆಯನ್ನು ಜನರಲ್ಲಿ ಬಿತ್ತುವ ಕಾಯಕದಲ್ಲಿ ತೊಡಗಿದ್ದರು.
ಆದರೆ ಅವರ ಅಕಾಲಿಕ ನಿಧನದಿಂದ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಅಲ್ಲದೆ ಅವರಿಗೂ ಹಾಗೂ ನಮಗೂ ಬಹಳ ಒಡನಾಟವಿತ್ತು ಎಂದು ಭಾವುಕರಾಗಿ ನುಡಿದರು.
ಪ್ರಗತಿಪರ ಚಿಂತಕ ವಿಶ್ವರಾಧ್ಯ ಸತ್ಯಂಪೇಟೆ ಮಾತನಾಡಿ, ಡಾ.ಈಶ್ವರಯ್ಯ ಮಠ ಅವರು ಸಾಹಿತಿಗಳಾಗಿ, ಉಪನ್ಯಾಸಕರಾಗಿ, ಸಾಮಾಜಿಕ ಕಳಕಳಿಯ ಜತೆಗೆ ವೈಚಾರಿಕತೆಯ ಬದುಕನ್ನು ಮೈಗೂಡಿಸಿಕೊಂಡಿದ್ದರು.
ಅಲ್ಲದೆ ಅವರಿಗೆ ಅಗಾಧ ಜ್ಞಾನವನ್ನು ಪಡೆದುಕೊಂಡಿದ್ದರು, ಬಸವಾದಿ ಶರಣರ ಅನುಯಾಯಿಗಳಲ್ಲಿ ಒಬ್ಬರಾಗಿದ್ದರು ಎಂದರು.
ಈ ಸಂದರ್ಭದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸಿದ್ದಲಿಂಗಣ್ಣ ಆನೇಗುಂದಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹಿರಿಯ ಸಾಹಿತಿಗಳಾದ ಶಿವಣ್ಣ ಇಜೇರಿ, ಗುರುಬಸಯ್ಯ ಗದ್ದುಗೆ,ಪ್ರಗತಿಪರ ಹೋರಾಟಗಾರ ಚೆನ್ನಪ್ಪ ಆನೆಗುಂದಿ, ಯುವ ಮುಖಂಡರಾದ ಗುಂಡಪ್ಪ ತುಂಬಿಗಿ,ಮಹಿಳಾ ಪ್ರತಿನಿಧಿಯಾದ ಚಂದ್ರಕಲಾ ಗೂಗಲ್, ಯುವ ಸಾಹಿತಿ ಶಿವಪ್ರಸಾದ ಕರದಳ್ಳಿ, ಸಗರನಾಡು ಪತ್ತಿನ ಸಹಕಾರ ಬ್ಯಾಂಕಿನ ನಿರ್ದೇಶಕರಾದ ದೇವಿಂದ್ರಪ್ಪ ಕನ್ಯಾಕೋಳೂರ, ರಾಜು,ಆಂಗ್ಲ ಭಾಷೆ ಉಪನ್ಯಾಸಕರಾದ ಹೊನ್ನಾರೆಡ್ಡಿ ಬೈರೆಡ್ಡಿ,ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಬಸವರಾಜ ಸಿನ್ನೂರ, ಪಂಚಾಕ್ಷರಯ್ಯ ಹಿರೇಮಠ ಹಾಗೂ ಇತರರು ಉಪಸ್ಥಿತರಿದ್ದರು.