ಯಾದಗಿರಿ-ಶಿಕ್ಷಕರ ಕೋವಿಡ್ ಆರೈಕೆ ಕೇಂದ್ರ ಉದ್ಘಾಟನೆಃ ಸಚಿವರಿಂದ ಶ್ಲಾಘನೆ
ಶಿಕ್ಷಕರ ಕೋವಿಡ್ ಆರೈಕೆ ಕೇಂದ್ರ ಉದ್ಘಾಟನೆಃ ಸಚಿವರಿಂದ ಶ್ಲಾಘನೆ
ಯಾದಗಿರಿ: ಶಿಕ್ಷಕರ ಸಂಘದಿಂದ ಕೋವಿಡ್ ತಡೆಗಾಗಿ ಶಿಕ್ಷಕರ ಕೋವಿಡ್ ಆರೈಕೆ ಕೇಂದ್ರ ನಿರ್ಮಿಸುವ ಮೂಲಕ ಮಾದರಿ ಕಾರ್ಯಕೈಗೊಂಡಿದ್ದಾರೆ ಎಂದು ತೋಟಗಾರಿಕೆ ಮತ್ತು ರೇಷ್ಮೆ ಖಾತೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್. ಶಂಕರ್ ಶ್ಲಾಘನೆ ವ್ಯಕ್ತಪಡಿಸಿದರು.
ನಗರದ ಆರ್,.ಟಿ.ಓ. ಕಚೇರಿ ಹಿಂಭಾಗದಲ್ಲಿ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ನೂತನವಾಗಿ ಆರಂಭಿಸಲಾದ ಶಿಕ್ಷಕರ ಕೋವಿಡ್ ಆರೈಕೆ ಕೇಂದ್ರವನ್ನು ಈಗಾಗಲೇ ಕೋವಿಡ್ ನಿಂದ ಮೃತಪಟ್ಟ 17 ಶಿಕ್ಷಕರ ಭಾವಚಿತ್ರಗಳಿಗೆ ಮಾಲಾರ್ಪಣೆ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಪ್ರತಿಯೊಂದು ಸಂಘ ಸಂಸ್ಥೆಗಳು ತಮ್ಮ ಸದಸ್ಯರಿಗಾಗಿ ಇಂತಹ ಮಾದರಿ ಕೆಲಸ ಕಾರ್ಯಗಳನ್ನು ಕೈಗೊಂಡಲ್ಲಿ ಸಮಸ್ಯೆ ಅರ್ಧದಷ್ಟು ಪರಿಹಾರ ಕಾಣಲು ಸಾಧ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.
ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ ಮಾತನಾಡಿ, ಶಿಕ್ಷಕರ ಸಂಘ ತಮ್ಮ ಸಂಘದ ಸದಸ್ಯರ ರಕ್ಷಣೆಗೆ ಮುಂದಾಗಿರುವದು ಸಂಘದ ಕಾಳಜಿಯನ್ನು ತೋರುತ್ತದೆ. ಇದು ಇತರೆ ಸಂಘ ಸಂಸ್ಥೆಗಳಿಗೆ ಮಾದರಿ ಕೆಲಸವಾಗಿದ್ದು, ಸಂಘದ ಸದಸ್ಯರ ರಕ್ಷಿಸುವ ಕೆಲಸವನ್ನು ಆಯಾ ಸಂಘ ಸಂಸ್ಥೆಗಳು ಮಾಡಿದ್ದಲ್ಲಿ ಕೋವಿಡ್ ನಿಯಂತ್ರಿಸಲು ಸುಲಭವಾಗಲಿದೆ ಎಂದರು.
ಇದೇ ಸಂದರ್ಭದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಶಾಂತಗೌಡ ಪಾಟೀಲ್ ಮೃತ ಶಿಕ್ಷಕರ ನೆನಪಿಗಾಗಿ ಶಾಲಾ ಆವರಣದಲ್ಲಿ ಸಸಿ ನೆಡಲಾಯಿತು.. ಈ ಸಂದರ್ಭದಲ್ಲಿ ರಾಯಚೂರು ಸಂಸದ ರಾಜಾ ಅಮರೇಶ್ವರ ನಾಯಕ, ಜಿಲ್ಲಾಧಿಕಾರಿ ಡಾ. ರಾಗಪ್ರಿಯಾ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಿ.ಬಿ. ವೇದಮೂರ್ತಿ, ಡಿಸಿಸಿ ಬ್ಯಾಂಕ್ ಉಪಾದ್ಯಕ್ಷ ಸುರೇಶ ಸಜ್ಜನ್, ಬಿಜೆಪಿ ಜಿಲ್ಲಾಧ್ಯಕ್ಷ ಡಾ|| ಶರಣಭೂಪಾಲರೆಡ್ಡಿ ನಾಯ್ಕಲ್, ಯುಡಾ ಅಧ್ಯಕ್ಷ ಬಸವರಾಜ ಚಂಡ್ರಕಿ, ನಗರಸಭೆ ಅಧ್ಯಕ್ಷ ವಿಲಾಸ ಪಾಟೀಲ್, ಪ್ರಾಶಾ ಶಿಕ್ಷಕರ ಸಂಘದ ಅಧ್ಯಕ್ಷ ರಾಘವೇಂದ್ರ ಅಳ್ಳಳ್ಳಿ, ಕಾರ್ಯದರ್ಶಿ ಜಮ್ಮಿ ಜಗದೀಶ ಗೋಟ್ಲಾ, ಸಹ ಕಾರ್ಯದರ್ಶಿ ಮೂರ್ತಿ ಜಿ., ಸಂಘಟನಾ ಕಾರ್ಯದರ್ಶಿ ಮನೋಹರ ಕಟ್ಟಿಮನಿ, ಸುರಪೂರ ತಾಲ್ಲೂಕು ಎನ್.ಜಿ.ಓ ಕಾರ್ಯದರ್ಶಿ ಶರಣಬಸವ ಗಚ್ಚಿನಮನಿ ಸೇರಿದಂತೆ ಇನ್ನಿತರರು ಇದ್ದರು.