ಬುಡಕಟ್ಟು ಸಂಸ್ಕೃತಿಯ ಬಂಜಾರ ಸಮುದಾಯ ಆಚರಿಸುವ ದೀಪಾವಳಿ ಹಬ್ಬದ ವೈಶಿಷ್ಟ್ಯವೇನು ಗೊತ್ತಾ?
ಒಲವು–ಚೆಲುವು, ನೋವು–ನಲಿವಿನ ಸಮ್ಮಿಲನ ದೀಪಾವಳಿ
-ಮಲ್ಲಿಕಾರ್ಜುನ ಮುದನೂರ್
ಬೆಳಕಿನ ಹಬ್ಬ ದೀಪಾವಳಿ ಅಂದರೆ ಝಗಮಗಿಸುವ ಬಣ್ಣದ ವಿದ್ಯುತ್ ದೀಪಗಳ ಸಾಲು. ಸಾಲು ಸಾಲು ಹಣತೆಗಳ ಬೆಳ್ಳಿ ಬೆಳಕು. ಕಿವಿಗಡಚಿಕ್ಕುವ ಪಟಾಕಿ ಸದ್ದು. ಪೂಜೆ, ಪುನಸ್ಕಾರ, ಚೆಲುವೆಯರ ಚಿತ್ತಾರ…
ಬುಡಕಟ್ಟು ಸಂಸ್ಕೃತಿಯ ಲಂಬಾಣಿ ತಾಂಡಾಗಳಲ್ಲಿ ಬಂಜಾರ ಸಮುದಾಯ ಆಚರಿಸುವ ದೀಪಾವಳಿ ಮಾತ್ರ ವಿಭಿನ್ನ ಮತ್ತು ವಿಶೇಷ. ಮಹಿಳಾ ಪ್ರಾಧಾನ್ಯದ ವಿಶಿಷ್ಟ ಆಚರಣೆಯ ಹಬ್ಬ ದೀಪಾವಳಿ. ಅಲ್ಲಿ ರಂಭೆ, ಊರ್ವಶಿ, ಮೇನಕೆಯರನ್ನೂ ಮೀರಿಸುವ ಬೆಡಗಿಯರು ಬಲು ಶ್ರದ್ಧೆಯಿಂದ ದೀಪಾವಳಿ ಆಚರಿಸುತ್ತಾರೆ. ಅದು ಅವರ ಪಾಲಿಗೆ ಬರೀ ದೀಪಾವಳಿ ಹಬ್ಬ ಅಷ್ಟೇ ಅಲ್ಲ. ಒಲವು-ಚೆಲುವು, ಸ್ನೇಹ-ಪ್ರೀತಿ, ಭಾವನೆ-ಭಾತೃತ್ವ , ನೋವು-ನಲಿವು, ಸುಖ:-ದುಖ: ಬಂಧ-ಅನುಬಂಧಗಳ ಸಮ್ಮಿಲನ.

ಲಂಬಾಣಿ ತಾಂಡಾದ ಕನ್ಯಾಮಣಿಗಳು ಒಂದು ತಿಂಗಳುಗಳ ಕಾಲ ದೀಪಾವಳಿಯನ್ನು ಆಚರಿಸುತ್ತಾರೆ. ನಿತ್ಯವೂ ಒಂದೆಡೆ ಸೇರಿ ಪೂಜೆ-ಪ್ರಾರ್ಥನೆ ಸಲ್ಲಿಸುವುದು. ಪರಸ್ಪರ ಸುಖ: ದುಖ: ಗಳನ್ನು ಹಂಚಿಕೊಳ್ಳುವುದು. ನಾಚ್, ಗಾನಾ, ಬಜಾನಾ ಮೂಲಕ ಸದಾಕಾಲ ನೆನಪಿನಲ್ಲುಳಿಯುವಂತೆ ಏಂಜಾಯ್ ಮಾಡುತ್ತಾರೆ. ಆ ತಾಂಡಾದವರು ಅದೆಷ್ಟೇ ದೂರದ ಊರುಗಳಲ್ಲಿದ್ದರೂ ಸಹ ತಪ್ಪದೇ ದೀಪಾವಳಿ ಹಬ್ಬಕ್ಕೆ ಬಂದು ತಾಂಡಾ ಸೇರುತ್ತಾರೆ. ದೀಪಾವಳಿ ಹಬ್ಬದ ಜೊತೆಗೆ ಹಿರಿಯರ ಹಬ್ಬವನ್ನೂ ಆಚರಿಸುತ್ತಾರೆ. ದೀಪಾವಳಿ ದಿನ ಗ್ರಾಮದ ಮುತ್ತೈದೆಯರೆಲ್ಲಾ ಗ್ರಾಮದ ಸರ್ದಾರ್ ಸೇವಾಲಾಲ್ ಮಂದಿರದಲ್ಲಿ ಸೇರಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಹಸುವಿಗೆ ದೀಪ ಬೆಳಗಿ ಪ್ರಾರ್ಥಿಸುತ್ತಾರೆ. ಬಳಿಕ ಮನೆ ಮನೆಗೂ ತೆರಳಿ (ಮೇರಾ) ದೀಪದ ಬೆಳಕು ಹಂಚಿ ದೀಪಾವಳಿಯ ಶುಭಾಶಯ ಕೋರುತ್ತಾರೆ. ‘ವರ್ಸೇರ್ ಕೋರ್ ದವಾಳಿ ಭೀಯಾ ತೋನ ಮೇರಾ…’
ಬಳಿಕ ಊರಿನ ಕನ್ಯೆಯರೆಲ್ಲಾ ಒಟ್ಟಾಗಿ ತಂಗಟಿ ಹೂವು ತರಲೆಂದು ಕಾಡಿಗೆ ತೆರಳಲು ಅಣಿಯಾಗುತ್ತಾರೆ. ಇದೀಗ ತಾನೇ ಇಂದ್ರಲೋಕದಿಂದ ಧರೆಗಿಳಿದಿರುವಂತೆ ಕಂಗೊಳಿಸುವ ಸ್ಪೂರದ್ರೂಪಿ ಚೆಲುವೆಯರು ಚೆಲುವೆಲ್ಲಾ ತಂದೆಂದು ಬೀಗುತ್ತಾರೆ. ಒನಪು ಒಯ್ಯಾರದೊಂದಿಗೆ ತಲೆ ಮೇಲೆ ತಾಯಂದಿರು ಕಟ್ಟಿಕೊಟ್ಟ ಬುತ್ತಿ, ಬುತ್ತಿಗೆ ಸಹೋದರರು ಪ್ರೀತಿಯಿಂದ ಹಾರೈಸಿ ನೀಡಿದ ದಕ್ಷಿಣೆ ರೂಪದ ಹಣದ ಮೂಲಕ ಸಿಂಗರಿಸಲಾಗಿರುತ್ತದೆ. ಬುತ್ತಿಹೊತ್ತು ಸಾಗುವ ಬೆಡಗಿಯರ ಸಾಲು ನೋಡುವುದೇ ಕಣ್ಣಿಗೆ ಹಬ್ಬ.

ಊರಿನ ಮಂದಿಯೆಲ್ಲಾ ಸೇರಿ ಭಾಜಾ ಭಜಂತ್ರಿಯೊಂದಿಗೆ ಗ್ರಾಮದ ಗಡಿವರೆಗೆ ಕನ್ಯೆಯರೊಂದಿಗೆ ಮೆರವಣಿಗೆ ಹೊರಡುತ್ತಾರೆ. ಮಹಿಳೆಯರೂ ಸಹ ಕನ್ಯೆಯರೊಂದಿಗೆ ಹಾಡಿ ಕುಣಿಯುತ್ತಾರೆ. ಸಾಂಪ್ರದಾಯಿಕ ಉಡುಗೆ ತೊಟ್ಟು ಹೆಜ್ಜೆ ಹಾಕುತ್ತಾರೆ. ಗ್ರಾಮದ ಗಡಿ ಬರುತ್ತಿದ್ದಂತೆ ಕನ್ಯಾ ಮಣಿಗಳನ್ನು ಮಾತ್ರ ಕಾಡಿಗೆ ಕಳುಹಿಸಿ ಉಳಿದವರು ಗ್ರಾಮಕ್ಕೆ ಹಿಂದಿರುಗುತ್ತಾರೆ. ಕಾಡಿಗೆ ತೆರಳಿದ ಕನ್ಯೆಯರು ದೇವರಿಗೆ ಪ್ರಿಯವಾದ ತಂಗಟಿ ಹೂವನ್ನು ಕೀಳುತ್ತಾರೆ. ಪೋಷಕರು ನೀಡಿದ ಬುತ್ತಿ, ಸಹೋದರರು ನೀಡಿದ ಹಣದಲ್ಲಿ ಪಡೆದ ಸಿಹಿ ತಿನಿಸುಗಳನ್ನು ಹಂಚಿಕೊಂಡು ತಿನ್ನುತ್ತಾರೆ. ಒಂದು ಒಂಡ್ರೆಲಾ ಪಿಕ್ ನಿಕ್ ನಂತೆ ಏಂಜಾಯ್ ಮಾಡುತ್ತಾರೆ. ಸಂಜೆವರೆಗೆ ಕಾಡಿನಲ್ಲಿ ಕಾಲ ಕಳೆಯುವ ಕನ್ಯೆಯರು ಕಳೆದ ವರ್ಷದ ನೋವು ನಲಿವುಗಳನ್ನು ಹಂಚಿಕೊಳ್ಳುತ್ತಾರೆ. ಆದ್ರೆ, ಕಾಡಿನಿಂದ ಗ್ರಾಮಕ್ಕೆ ಹಿಂದಿರುಗುವ ವೇಳೆ ಮಾತ್ರ ಅಕ್ಷರಶಹ ಕನ್ಯೆಯರು ಕಣ್ಣೀರಾಗುತ್ತಾರೆ. ಆ ಭಾವುಕ ಕ್ಷಣಗಳನ್ನು ಕಂಡ ಎಂಥವರ ಕಣ್ಣಾಲಿಯೂ ಒದ್ದೆಯಾಗದೆ ಇರದು.
ಬರುವ ದೀಪಾವಳಿ ಒಳಗೆ ಮದುವೆ ಆಗುವ ಹುಡುಗಿಯರು ಮತ್ತೆ ಈ ತಂಗಟಿ ಹೂವು ಕೀಳುವ ಆಚರಣೆಯಲ್ಲಿ ಪಾಲ್ಗೊಳ್ಳಲು ಆಗುವುದಿಲ್ಲ. ಗೆಳತಿಯರೊಡನೆ ಸೇರಿ ತಿಂಗಳ ದೀಪಾವಳಿ ಆಚರಿಸಲು ಆಗುವುದಿಲ್ಲವಲ್ಲ ಎಂಬ ನೋವಿನೊಂದಿಗೆ ಯುವತಿಯರು ಒಬ್ಬರಿಗೊಬ್ಬರು ತಬ್ಬಿಕೊಂಡು ಭಾವುಕರಾಗುತ್ತಾರೆ. ಕಣ್ಣೀರು ಹಾಕಿ ನೋವು ತೋಡಿಕೊಳ್ಳುತ್ತಾರೆ. ಕೊನೆಗೆ ಈವರೆಗಾದರೂ ನಾವು ಇಷ್ಟೊಂದು ಅನ್ಯೋನ್ಯವಾಗಿದ್ದೆವಲ್ಲ ಅಷ್ಟು ಸಾಕು. ಮುಂದೆ ಅದೆಂಥ ವರಮಹಾಶಯ ಸಿಗುತ್ತಾನೋ. ಯಾವ ಊರೋ ಏನು ಕಥೆಯೋ, ಬದುಕು ಯಾವ ತಿರುವು ಪಡೆಯುತ್ತದೋ ಗೊತ್ತಿಲ್ಲ. ಈವರೆಗೆ ನಾವೆಲ್ಲಾ ಸೇರಿ ಕಳೆದ ಮಧುರ ನೆನಪುಗಳೇ ನಮ್ಮ ಬದುಕಿನುದ್ದಕ್ಕೂ ನಮ್ಮೊಂದಿಗಿರುತ್ತವೆ ಎಂದು ಸಮಾಧಾನಿಸಿಕೊಳ್ಳುತ್ತ ಗ್ರಾಮಕ್ಕೆ ಮರಳುತ್ತಾರೆ.
ಕನ್ಯಾಮಣಿಗಳು ತಂಗಟಿ ಹೂವು ತಂದ ನಂತರವೇ ಮನೆಯಲ್ಲಿ ಪೂಜೆ, ಪುನಸ್ಕಾರ ಶುರುವಾಗ್ತದೆ. ಪಾಂಡವರು ಮುಡಿಗೇರಿಸಿಕೊಂಡಿದ್ದ ತಂಗಟಿ ಹೂವು ಮನೆಯಲ್ಲಿದ್ದರೆ ಶಾಂತಿ, ಸಂಪತ್ತು, ಸಮೃದ್ಧಿ ಮತ್ತು ಆರೋಗ್ಯ ವೃದ್ಧಿಯಾಗುತ್ತದೆ ಅನ್ನೋ ನಂಬಿಕೆ ಬುಡಕಟ್ಟು ಸಮುದಾಯದ ಜನರಲ್ಲಿದೆ. ಮನೆಗಳಲ್ಲಿ ಎರಡು ಮಣ್ಣಿನ ಹಣತೆಗಳಲ್ಲಿ ದೀಪವನ್ನು ಹಚ್ಚಿಡಲಾಗುತ್ತದೆ. ಹಬ್ಬ ಮುಗಿಯುವವರೆಗೂ ಆ ಹಣತೆ ಆರದಂತೆ ನೋಡಿಕೊಳ್ಳುವುದು ಮಹಿಳೆಯರ ಜವಬ್ದಾರಿ ಆಗಿರುತ್ತದೆ. ಹೀಗೆ ಲಂಬಾಣಿ ಸಮುದಾಯ ಈ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ದೀಪಾವಳಿ ಆಚರಣೆಯನ್ನು ಇಂದಿಗೂ ಮುಂದುವರೆಸಿಕೊಂಡು ಸಾಗಿದೆ. ಸಾಂಪ್ರದಾಯಿಕ ಹಬ್ಬವೀಗ ಲಂಬಾಣಿ ಸಮುದಾಯದ ಯುವತಿಯರ ಪಾಲಿಗೆ ಗೆಳತಿಯರ ಹಬ್ಬವಾಗಿ ಮಾರ್ಪಟ್ಟಿದೆ. ನಗರ ಪ್ರದೇಶಗಳಲ್ಲಿ ವಾಸಿಸುವ ಎಷ್ಟೋ ಕುಟುಂಬದವ್ರು ಹಬ್ಬಕ್ಕೆ ಊರಿಗೆ ಬರ್ತಾರೆ. ಹೀಗಾಗಿ, ಹಬ್ಬದ ಹೆಸರಲ್ಲಿ ದೀಪಾವಳಿಗೊಮ್ಮೆ ಸೇರುವ ಯುವತಿಯರು ವಿಶೇಷ ಹಬ್ಬ ಆಚರಿಸಿ ನಗರಗಳಿಗೆ ಮರಳುತ್ತಿರೋದು ಮತ್ತೊಂದು ವಿಶೇಷವಾಗಿದೆ. ಕೆಲವು ಕಡೆ ಗೋಧಿ ಹಬ್ಬವನ್ನು ಸಹ ಇದೇ ಮಾದರಿಯಲ್ಲಿ ಆಚರಿಸಲಾಗುತ್ತದೆ.
ಯಾದಗಿರಿ, ಶಹಾಫುರ ತಾಲೂಕಿನ ಲಂಬಾಣಿ ತಾಂಡಾಗಳು ಸೇರಿದಂತೆ ನಾಡಿನ ಬಹುತೇಕ ಲಂಬಾಣಿ ಹಟ್ಟಿಗಳಲ್ಲಿ ಇಂದಿಗೂ ಬುಡಕಟ್ಟು ಸಂಸ್ಕೃತಿಯ ಲಂಬಾಣಿ ಸಮುದಾಯ ವಿಶಿಷ್ಟವಾಗಿ ದೀಪಾವಳಿಯನ್ನು ಆಚರಿಸುತ್ತಾ ಬಂದಿದೆ.
uttama lekhana sir
Thank u sir..
Super story..
Thank u