ಅನ್ನಭಾಗ್ಯ ಹೆಸರಲ್ಲಿ ಲಕ್ಷ ಲಕ್ಷ ವಸೂಲಿ : ಭ್ರಷ್ಟ ಅಧಿಕಾರಿ ACB ಬಲೆಗೆ!
ಚಿತ್ರದುರ್ಗ: ಲಂಚ ಸ್ವೀಕಾರಿಸುವ ಸಂದರ್ಭದಲ್ಲಿ ಆಹಾರ ಇಲಾಖೆ ಅಧಿಕಾರಿಯೊಬ್ಬ ರೆಡ್ ಹ್ಯಾಂಡಾಗಿ ಎಸಿಬಿ ಅಧಿಕಾರಿಗಳ ಬಲೆ ಬಿದ್ದ ಘಟನೆ ನಗರದ ಖಾಸಗಿ ಶಾಲೆಯೊಂದರ ಸಮೀಪ ನಡೆದಿದೆ. ಖಚಿತ ಮಾಹಿತಿ ಮೇರೆಗೆ ಡಿವೈಎಸ್ಪಿ ಜಿ.ಮಂಜುನಾಥ ನೇತೃತ್ವದಲ್ಲಿ ಎಸಿಬಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಭ್ರಷ್ಟ ಅಧಿಕಾರಿಯನ್ನು ಬಲೆಗೆ ಬೀಳಿಸಿದ್ದಾರೆ.
ಆಹಾರ ಇಲಾಖೆ ಫುಡ್ ಇನ್ಸಪೆಕ್ಟರ್ ತಿಪ್ಪೇಶಪ್ಪ ಮೊಳಕಾಲ್ಮೂರು ತಾಲೂಕಿನ ರಾಂಪುರ ಮೂಲದ ವ್ಯಾಪಾರಿ ಚಂದ್ರಶೇಖರ್ ಅವರ ಬಳಿ 2 ಲಕ್ಷ ರೂ.ಲಂಚ ಸ್ವೀಕರಿಸುತ್ತಿದ್ದ ಸಮಯದಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ವ್ಯಾಪಾರಿ ಚಂದ್ರಶೇಖರ್ ಅವರಿಗೆ ಸೇರಿದ ಲಾರಿ ತಡೆದು ಅನ್ನಭಾಗ್ಯ ಯೋಜನೆಯ ಅಕ್ಕಿ ಸಾಗಣೆಯ ಕೇಸಿನಲ್ಲಿ ಸಿಲುಕಿಸುವುದಾಗಿ ಬೆದರಿಸಿ 2 ಲಕ್ಷ ರೂ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಹಿಂದೆಯು ವ್ಯಾಪಾರಿ ಚಂದ್ರಶೇಖರ್ ಗೆ ಬೆದರಿಸಿ ಲಕ್ಷಾಂತರ ರೂಪಾಯಿ ಲಂಚ ಪಡೆದಿದ್ದರು ಎನ್ನಲಾಗಿದೆ.
ಸದ್ಯ ಭ್ರಷ್ಟಾಚಾರದ ಆರೋಪ ಹೊತ್ತ ತಿಪ್ಪೇಶಪ್ಪ ಎಸಿಬಿ ಬಲೆಗೆ ಬಿದ್ದಿದ್ದಾರೆ. ಎಸಿಬಿ ಅಧಿಕಾರಿಗಳು ತಿಪ್ಪೇಶಪ್ಪನನ್ನು ವಶಕ್ಕೆ ಪಡೆದಿದ್ದು ಸಂಬಂಧಿತ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆದಾಗ ತಿಪ್ಪೇಶಪ್ಪನ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಾಗಲಿದೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.