ಕಕ ಭಾಗದ ತೊಗರಿ ಬೆಳೆಗಾರರಿಗೆ ನ್ಯಾಯ ಒದಗಿಸುವ ಭರವಸೆಃ ಬಾಸರಡ್ಡಿ
ಕಲ್ಯಾಣ ಕರ್ನಾಟಕದ ತೊಗರಿ ಬೆಳೆ ಬೆಳೆದ ರೈತರಿಗೆ ಸರ್ಕಾರದಿಂದ ನ್ಯಾಯ ಒದಗಿಸಲಾಗುವುದು : ಬಾಸರೆಡ್ಡಿ
ಯಾದಗಿರಿಃ ಇಡೀ ರಾಜ್ಯದಲ್ಲಿಯೇ ಕಲ್ಯಾಣ ಕರ್ನಾಟಕದಲ್ಲಿ ಅತೀ ಹೆಚ್ಚು ರೈತರು ತೊಗರಿ ಬೆಳೆ ಬೆಳೆಯುತ್ತಿದ್ದಾರೆ, ಅವರಿಗೆ ಸರ್ಕಾರದಿಂದ ಸೂಕ್ತ ನ್ಯಾಯ ಒದಗಿಸುವ ಮೂಲಕ ಅವರ ಬೆಳವಣಿಗೆಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ರಾಜ್ಯ ತೊಗರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಲಿಂಗಾರೆಡ್ಡಿಗೌಡ ಬಾಸರೆಡ್ಡಿ ನಾಲವಾರ ಹೇಳಿದರು.
ಮಸ್ಕಿ ವಿಧಾನಸಭಾ ಉಪಚುನಾವಣೆ ಪ್ರಚಾರಕ್ಕೆ ತೆರಳುವ ಸಂದರ್ಭದಲ್ಲಿ ನಗರದ ಪ್ರವಾಸಿ ಮಂದಿರದಲ್ಲಿ ಅವರ ಹುಟ್ಟುಹಬ್ಬದ ನಿಮಿತ್ಯ ಅಭಿಮಾನಿಗಳಿಂದ ಸನ್ಮಾನ ಸ್ವಿಕರಿಸಿ ಮಾತನಾಡಿದ ಅವರು,
ಈ ವರ್ಷ ಬೇರೆ ದೇಶಗಳಿಂದ ನಾಡಿಗೆ ತೊಗರಿ ಬೆಳೆ ಬಹಳ ಕಡಿಮೆ ಇದೆ, ಈಗಾಗಲೇ ಮಾರುಕಟ್ಟೆಯಲ್ಲಿ ತೊಗರಿ ಬೆಳೆಗೆ ಉತ್ತಮ ಬೆಲೆಯಿದೆ, ಪ್ರತಿ ಕ್ವಿಂಟಲ್ಗೆ ೬೮೦೦ ರಿಂದ ೭೦೦೦ ವಿದೆ, ಪರಿಣಾಮ ಸರ್ಕಾರದಿಂದ ರೈತರ ತೊಗರಿ ಖರೀದಿ ಮಾಡುವ ಪ್ರಶ್ನೆ ಉದ್ಭವಿಸಿಲ್ಲ ಎಂದು ತಿಳಿಸಿದರು.
ಕಲಬುರಗಿಯಲ್ಲಿ ರೈತರ ಹಾಗೂ ವ್ಯಾಪಾರಸ್ಥರ ದೃಷ್ಟಿಯಿಂದ ತೊಗರಿ ಪಾರ್ಕ ಪ್ರಸ್ಥಾವನೆ ಮಾಡಬೇಕೆಂದು ಸರ್ಕಾರಕ್ಕೆ ಈಗಾಗಲೇ ಮನವಿ ಮಾಡಲಾಗಿದೆ, ಮುಖ್ಯಮಂತ್ರಿಗಳನ್ನು ನಾನು ಕಲ್ಯಾಣ ಕರ್ನಾಟಕದ ಶಾಸಕರೊಂದಿಗೆ ಹಾಗೂ ವ್ಯಾಪಾರಸ್ಥರ ನಿಯೋಗ ಬೇಟಿ ಮಾಡಿ ತೊಗರಿ ಪಾರ್ಕ್ ಸ್ಥಾಪನೆ ಸಾಧಕ ಬಾದಕಗಳನ್ನು ವಿವರಿಸಿದ್ದೇವೆ.
ಬರುವ ದಿನಗಳಲ್ಲಿ ಸ್ಥಾಪನೆಯಾಗುವ ವಿಶ್ವಾಸವಿದೆ, ಇದರಿಂದ ತೊಗರಿ ಬೆಳೆ ಬೆಳೆಯುವ ರೈತರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿಶ್ವನಾಥ ಸ್ವಾಮಿಜೀ, ಕಲಬುರಿಗಿ ಜಿ.ಪಂ ಸದಸ್ಯ ಅರವಿಂದ ಚವ್ಹಾಣ, ಭೀಮರೆಡ್ಡಿ ಗೌಡ ಕುರಾಳ, ಶರಣಗೌಡ ಗೋಗಿ, ವೆಂಕಟರೆಡ್ಡಿ ಹತ್ತಿಕುಣಿ, ಅಭಿಲಾಷ ಪಾಟೀಲ್ ನಾಲವಾರ, ರವಿ ಕೆ. ಮುದ್ನಾಳ ಇತರರು ಉಪಸ್ಥಿತರಿದ್ದರು.