ಪ್ರಮುಖ ಸುದ್ದಿ

ಕೊಟ್ಟಿದ್ದು ತಮಗೆ ಬಚ್ಚಿಟ್ಟಿದ್ದು ಪರರಿಗೆ

ಕೊಟ್ಟಿದ್ದು ತಮಗೆ ಬಚ್ಚಿಟ್ಟಿದ್ದು ಪರರಿಗೆ

ಕನಕಪುರ ಎಂಬ ಊರಿನಲ್ಲಿ ತಿಮ್ಮಣ್ಣಮತ್ತು ತಾಯವ್ವಎಂಬ ದಂಪತಿ ಇದ್ದರು. ಅವರಿಗೆ ಹಿರಿಯರಿಂದ ಬಂದಂತಹ ಸ್ವಲ್ಪ ಜಮೀನು ಇತ್ತು. ಆ ದಂಪತಿ ಆ ಸ್ವಲ್ಪ ಜಮೀನಿನಲ್ಲಿ ದುಡಿದು ತಮ್ಮ ಜೀವನವನ್ನು ಸಾಗಿಸುತ್ತಿದ್ದರು. ಅವರಿಗೆ ಮೂವರು ಮಕ್ಕಳು, ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಬ್ಬ ಮಗ. ಒಂದು ದಿನ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದರು. ತಿಮ್ಮಣ್ಣ ಬಾಳೆಯ ಸಸಿ ನೆಡಬೇಕೆಂದು ನೆಲವನ್ನು ಅಗೆಯುತ್ತಿದ್ದ.

ಥನ್’ ಎಂದು ಏನೋ ಶಬ್ದ ಬಂತು. ಆಗ ತಿಮ್ಮಣ್ಣನಿಗೆ ಅನುಮಾನ ಬಂತು ಏನೋ ಇರಬಹುದು ಎಂದು ಮತ್ತೆ ಅಗೆದನು. ಮತ್ತೆ ‘ಥನ್’ ಎಂದು ಮತ್ತು ದೊಡ್ಡ ಸದ್ದು ಬಂದು. ಯಾವುದೋ ದೊಡ್ಡ ಕಲ್ಲಿರಬೇಕೆಂದು ಅದನ್ನು ತೆಗೆದುಹಾಕಬೇಕೆಂದು ಅದನ್ನು ತನ್ನ ಎರಡು ಕೈಗಳನ್ನು ಉಪಯೋಗಿಸಿ ಎಳೆದು ತೆಗೆದನು.

ಅದು ತುಂಬಾ ಭಾರವಾಗಿತ್ತು. ಅದರಲ್ಲಿ ಏನಿರಬೇಕೆಂದು ಕುತೂಹಲ ಹುಟ್ಟಿತ್ತು. ಆದರೆ, ಮೇಲಿನ ಮಣ್ಣನ್ನೆಲ್ಲ ತೆಗೆದು ನೋಡಿದನು. ಕೊಪ್ಪರಿಗೆ ತುಂಬೆಲ್ಲಾ ಬಂಗಾರದ ನಾಣ್ಯಗಳು. ತಿಮ್ಮಣ್ಣ ತುಂಬಾ ಖುಷಿಯಾಯಿತು. ಅದೃಷ್ಟ ದೇವತೆಯೇ ಒಲಿದು ಬಿಟ್ಟಿದ್ದಾಳೆ ಎನ್ನುತ್ತಾ ತನ್ನ ಹೆಂಡತಿ ತಾಯವ್ವನನ್ನು ಕರೆದನು.

ತಾಯವ್ವನಿಗೆ ಚಿನ್ನವನ್ನು ನೋಡಿ ಮತ್ತಷ್ಟು ಖುಷಿಯಾಯಿತು. ಇಷ್ಟೊಂದು ಚಿನ್ನವನ್ನು ಅವಳು ತನ್ನ ಜೀವಮಾನದಲ್ಲಿ ನೋಡಿರಲಿಲ್ಲ. ಆಕೆಗೆ ತನ್ನ ಕಣ್ಣನ್ನೇ ಒಮ್ಮೆ ನಂಬಲಾಗಲಿಲ್ಲ. ‘ರೀ. ಇವನ್ನೆಲ್ಲಾ ಕರಗಿಸಿ ಬೇರೆ ಬೇರೆ ರೀತಿಯ ಸರ, ಬಲೆ, ಸೊಂಟದ ಪಟ್ಟಿ, ಕೈಗೆ ವಂಕಿ, ಬಾಜುಬಂದಿ ಎಲ್ಲಾ ಮಾಡಿಸಿಕೊಂಡಿ’ ಎಂದಳು ಆಸೆಯಿಂದ.

ಲೇ, ಇದನ್ನ ಯಾರಿಗೂ ಹೇಳೋದು ಬೇಡ. ನಮ್ಮ ಹತ್ತಿರ ಇಷ್ಟೊಂದು ಬಂಗಾರವಿದೆ ಎಂದು ತಿಳಿದರೆ ಎಲ್ಲರ ಕಣ್ಣೂ ನಮ್ಮ ಮೇಲೆ ಇರುತ್ತದೆ. ಅಲ್ಲದೆ ನೋಡಿದ ಜನರಿಗೆಲ್ಲ ನಮ್ಮ ಬಗ್ಗೆ ಅನುಮಾನ ಕೂಡ ಬರುತ್ತದೆ’ ಎಂದನು ತಿಮ್ಮಣ್ಣ. ತಾಯವ್ವ ಗಂಡ ಹೇಳುವುದು ಸರಿ ಎನಿಸಿತು.

‘ಹೋಗಲಿ ನಮ್ಮ ಮಗನಿಗಾದರೂ ಹೇಳೋಣ, ಅವನೂ ಖುಷಿ ಪಡಲಿ’ ಎಂದಳು. ಆಗ ತಿಮ್ಮಣ್ಣ, ‘ಲೇ ತಾಯವ್ವ ಅವನಿಗೆ ಈ ಸುದ್ಧಿಯನ್ನು ಈಗಲೇ ಹೇಳುವುದು ಬೇಡ, ಅವನು ದೊಡ್ಡವನಾದ ಮೇಲೆ ಹೀಗೆ ಭೂಮಿಯನ್ನು ಅಗೆದಾಗ ಅವನಿಗೆ ನಿಧಿ ಸಿಗಬೇಕು.

ಆಗ ಅವನಿಗೆ ಸಿಗುವ ಆನಂದವೇ ಬೇರೆ. ನನಗೆ ಸಿಕ್ಕ ಖುಷಿಯೇ ಆ ಆನಂದವೇ ಬೇರೆ. ನನಗೆ ಸಿಕ್ಕ ಖುಷಿಯೇ ಅವನಿಗೂ ಸಿಗಬೇಕು’ ಎಂದನು. ತಾಯವ್ವ ಗಂಡನ ಮಾತಿಗೆ ಎದುರಾಡಲಿಲ್ಲ. ಬಂಗಾರದ ಕೊಪ್ಪರಿಗೆಯನ್ನು ಅಲ್ಲೇ ಇಟ್ಟು ಮಣ್ಣು ಮುಚ್ಚಿದರು.

ಕೆಲವು ವರ್ಷಗಳಲ್ಲೇ ತಿಮ್ಮಣ್ಣ ಮತ್ತು ಅವನ ಹೆಂಡತಿ ತೀರಿಕೊಂಡರು. ಮಗ ನಾರಾಯಣ ಕೊಪ್ಪರಿಗೆ ವಿಚಾರ ತಿಳಿದಿರಲಿಲ್ಲ. ಒಂದು ದಿನ ಹೀಗೆ ತೋಟದಲ್ಲಿ ಯಾವುದೋ ಸಸಿ ನೆಡಲು ಅಗೆಯುವಾಗ ಅದೇ ಬಂಗಾರ ತುಂಬಿದ ಕೊಪ್ಪರಿಗೆ ನಾರಾಯಣನಿಗೆ ಸಿಕ್ಕಿತು.

ಅವನು ಸಹ ತಂದೆಯಂತೆ ಆಸೆಪಟ್ಟು ತನ್ನ ಹೆಂಡತಿಗೂ ತೋರಿಸಿ ಹಾಗೆ ಮುಚ್ಚಿಟ್ಟನು. ಇವನ ಮಗ ನವೀನ ಚೆನ್ನಾಗಿ ಓದಿ ನಗರದಲ್ಲಿ ದೊಡ್ಡ ಕೆಲಸ ಹಿಡಿದುಕೊಂಡನು. ಒಂದು ದಿನ ನವೀನನ ಅಪ್ಪ ಅಮ್ಮ ಇಬ್ಬರೂ ಇದ್ದಕ್ಕಿದ್ದಂತೆ ತೀರಿಕೊಂಡರು.

ತನ್ನ ಜಮೀನಿನಲ್ಲಿ ಬಂಗಾರ ತುಂಬಿದ ಕೊಪ್ಪರಿಗೆ ಇದೆ ಎಂಬ ರಹಸ್ಯ ಅವನಿಗೆ ಗೊತ್ತೇ ಆಗಲಿಲ್ಲ. ಆತ ಒಂದು ದಿನ ತಾನು ಹೇಗಿದ್ದರೂ ನಗರದಲ್ಲಿ ಮನೆ ಮಾಡಿಕೊಂಡು ವಾಸಿಸುವುದು ಎಂದು ನಿರ್ಧರಿಸಿಯಾಗಿದೆ, ಇನ್ನೂ ಈ ಜಮೀನು ಮನೆ ಇಟ್ಟುಕೊಂಡು ಏನು ಮಾಡುವುದು. ಎಂದುಕೊಂಡು ತನ್ನ ಜಮೀನನ್ನು ಬೇರೊಬ್ಬರಿಗೆ ಮಾರಿಬಿಟ್ಟನು.

ಜಮೀನುದಾರರ ಮನೆಯಲ್ಲಿ ದ್ಯಾವಪ್ಪ ಎನ್ನುವ ಒಬ್ಬ ಬಡವ ಕೂಲಿ ಮಾಡುತ್ತಿದ್ದ. ಅವನು ತೋಟದಲ್ಲಿ ಕೆಲಸ ಮಾಡುವಾಗ ಆ ಕೊಪ್ಪರಿಗೆಯನ್ನು ನೋಡಿದ. ಆದರೆ, ಆತ ಆ ಕೊಪ್ಪರಿಗೆಯನ್ನು ತನ್ನ ಯಜಮಾನನಿಗೆ ಒಪ್ಪಿಸಿದ.

ದ್ಯಾವಪ್ಪನ ಪ್ರಾಮಾಣಿಕತೆಗೆ ಮೆಚ್ಚಿದ ಆ ಜಮೀನುದಾರನು ಅದರಲ್ಲಿ ಅರ್ಥ ಭಾಗವನ್ನು ದ್ಯಾವಪ್ಪನಿಗೆ ಕೊಟ್ಟು ಉಳಿದ ಅರ್ಥ ಭಾಗವನ್ನು ಬಳಸಿಕೊಂಡನು. ಆಮೇಲೆ ಅವರೆಲ್ಲರೂ ಸುಖವಾಗಿ ಬದುಕು ಸಾಗಿಸಿದರು. ಬಚ್ಚಿಟ್ಟ ನಿಧಿ ಗೊತ್ತಿಲ್ಲದೆ ಬೇರೆಯವರ ಪಾಲಾಯಿತು.

🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882

Related Articles

Leave a Reply

Your email address will not be published. Required fields are marked *

Back to top button