ದೇಶ ಕಂಡ ಮಹಾನ್ ಸಂತ ಶ್ರೀಶಿವಕುಮಾರ ಸ್ವಾಮೀಜಿ
ದೇಶ ಕಂಡ ಮಹಾನ್ ತ್ಯಾಗಿ, ಸಂತ – ಶ್ರೀ. ಶಿವಕುಮಾರ ಮಹಾಸ್ವಾಮಿಜಿ
–ರಾಘವೇಂದ್ರ ಹಾರಣಗೇರಾ
ನಾಡಿನ ಆಧ್ಯಾತ್ಮಿಕ, ಧಾರ್ಮಿಕ, ಸಾಂಸ್ಕೃತಿಕ, ಶಿಕ್ಷಣ ಕ್ಷೇತ್ರಕ್ಕೆ ತುಮಕೂರಿನ ಸಿದ್ದಗಂಗೆಯ ಶಿವಕುಮಾರ ಸ್ವಾಮೀಜಿಯವರು ಸಲ್ಲಿಸಿದ ಸೇವೆ ಅನುಪಮವಾದದ್ದು.
ಮಠದ ಸ್ವಾಮೀಜಿಯೆಂಬ ಪರಿಕಲ್ಪನೆಯಾಗಲಿ, ಅಹಂ ಆಗಲಿ ಇಲ್ಲದೆ ನಿಸ್ವಾರ್ಥದಿಂದ ಅವಿರತ ಶ್ರಮಿಸಿದ ಸರಳ ಸಜ್ಜನಿಕೆಯ, ಸೌಜನ್ಯಮೂರ್ತಿ, ಮಾನವೀಯ ಅಂತಃಕರಣದ ಮಹಾನ್ ವ್ಯಕ್ತಿತ್ವ ಅವರದಾಗಿತ್ತು.
ನಂಬಿ ಕೆಟ್ಟವರಿಲ್ಲವೋ ಎಂದು ಮಠಕ್ಕೆ ಬರುವ ಭಕ್ತಾದಿಗಳೊಂದಿಗೆ ಸಮರಸವಾಗಿ ಬೆರೆಯುವ, ನೊಂದವರ ಬಗ್ಗೆ, ದೀನ ದುರ್ಬಲರ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಶಿವಕುಮಾರ ಸ್ವಾಮೀಜಿ ತಾಯ್ತನದ ಮಮತೆಯ ಕರುಣಾಮಯಿಗಳಾಗಿದ್ದರು.
ಅವರ ತ್ಯಾಗ ಜೀವನ ಜಗತ್ತಿಗೆ ಮಾದರಿ ಮತ್ತು ಅನುಕರಣೀಯ. ಕಾಯಕವೇ ಕೈಲಾಸವೆಂದು ನಂಬಿದ್ದ ಸ್ವಾಮೀಜಿಯವರು ನಮ್ಮ ದೇಶ ಕಂಡ ಮಹಾನ್ ಸಂತರಾಗಿದ್ದಾರೆ.
ಕೆಲವರು ಹುಟ್ಟುತ್ತಲೇ ಮಹಾಪುರುಷರಾಗಿ ಕಾಣಿಸಿಕೊಂಡರೆ, ಕೆಲವರು ಸಾಧನೆಯಿಂದ ಮಹಾಪುರುಷರ ಪಟ್ಟವನ್ನು ಪಡೆಯುತ್ತಾರೆ.
ಈ ವಿಷಯಕ್ಕೆ ಶಿವಕುಮಾರ ಸ್ವಾಮೀಜಿಯವರ ಬಗ್ಗೆ ಒಪ್ಪಿಕೊಳ್ಳುವುದು ಕಷ್ಟ. ಜನಸಾಮಾನ್ಯರಲ್ಲಿ ಜನಸಾಮಾನ್ಯರಾಗಿ ಭಕ್ರರ ಹೃದಯದಲ್ಲಿ ಬೆರೆತ ಸ್ವಾಮೀಜಿ ಅವರು ಗಳಿಸಿಕೊಂಡ ಕೀರ್ತಿ, ಜನರಲ್ಲಿ ಅವರು ಮನೆ ಮಾಡಿರುವ ರೀತಿ ” ಮಹಾಪುರುಷ” ಕಟ್ಟನ್ನು ಮೀರುವಂತದ್ದು.
ವಿದ್ಯಾರ್ಥಿಗಳ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಶಿವಕುಮಾರ ಸ್ವಾಮೀಜಿ ಅವರು ಕೈ ಕೆಸರಾದರೆ ಬಾಯಿ ಮೊಸರಾಗುವದು ಎಂಬ ಅರಿವನ್ನು ಮೂಡಿಸುವಲ್ಲಿ ಅವರು ಮಾಡಿದ ಕಾರ್ಯ ಶ್ಲಾಘನೀಯ.
ಮಠವನ್ನು ಜನಪರ, ಜೀವಪರ, ಮಾನವೀಯಪರ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿ ತೋರಿಸಿದ ಮಹಾತ್ಮರಾಗಿದ್ದಾರೆ.
ಸಿದ್ದಗಂಗೆಯ ಸ್ವಾಮೀಜಿಯವರು ಒಬ್ಬ ಖ್ಯಾತಿವೆತ್ತ ಸಮಾಜ ಸುಧಾರಕರು ಹಾಗೂ ಶ್ರೇಷ್ಠ ಮಾನವತಾವಾದಿಯಾಗಿದ್ದಾರೆ. ಸಾಧನೆಯಿಂದ ಯೋಗ ಪಡೆದು, ದೇಹ ದಂಡಿಸಿದ ಮಹಾಪುರುಷ, ದೇವಮಾನವರಾಗಿದ್ದರೆಂದು ಹೇಳಿದರೆ ತಪ್ಪಾಗಲಾರದು.
ಸಿದ್ದಗಂಗೆಯ ಮಠವನ್ನು ಸರ್ವಜನಾಂಗದ ಆಧ್ಯಾತ್ಮದ, ಸಾಂಸ್ಕೃತಿಕ, ಶೈಕ್ಷಣಿಕ, ಧಾರ್ಮಿಕ ತಾಣವನ್ನಾಗಿ ಮಾಡಿದ ಮತ್ತು ಸಮಾಜಮುಖಿಯಾದ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿ ತೋರಿಸಿದ ಮಹಾನ್ ಚೇತನ ಶಿವಕುಮಾರ ಸ್ವಾಮೀಜಿ.
ಅವರು ಎಲ್ಲಾ ಕಾಲಕ್ಕೂ ಸರ್ವ ಮಾನ್ಯರಾಗುತ್ತಾರೆ. ಸಾರ್ವಕಾಲಿಕ ಜೀವನ ದೃಷ್ಟಿಯ ರುವಾರಿಯಾಗಿ ನಿಲ್ಲುತ್ತಾರೆ. ಆಧುನಿಕ ಬಸವಣ್ಣನವರಾಗಿ ಕಂಗೋಳಿಸಿದ್ದಾರೆ.
ದೇಶ ಕಂಡ ಮಹಾನ್ ಸಂತ, ಯುಗಪುರುಷ, ತ್ರಿವಿಧ ದಾಸೋಹಿ, ಪದ್ಮ ಭೂಷಣ, ಮಾನವತಾವಾದಿ ಡಾ. ಶಿವಕುಮಾರ ಸ್ವಾಮೀಜಿ ಅವರಿಗೆ ವಿನಯವಾಣಿ ಬಳಗದ ವತಿಯಿಂದ ಜನ್ಮದಿನದ ಹಾರ್ದಿಕ ಶುಭಾಶಯಗಳು ಕೋರುತ್ತಾ. ಇಂತಹ ಮಹಾನ್ ಸಂತರು ಮತ್ತೇ ಹುಟ್ಟಿ ಬರಲಿ ಎಂದು ಪ್ರಾರ್ಥಿಸುತ್ತೇವೆ.
–ರಾಘವೇಂದ್ರ ಹಾರಣಗೇರಾ ಸಮಾಜಶಾಸ್ತ್ರ ಉಪನ್ಯಾಸಕರು ಶಹಾಪುರ. ಮೊ.ನಂ 9901559873.