ಕಾವ್ಯ
ಉಸಿರ ಉಗಿ ಬಂಡಿ
ಉಸಿರ ಉಗಿ ಬಂಡಿ
ಬದುಕು ಉಸಿರ ಉಗಿ ಬಂಡಿ,
ಹೆಗಲ ಮ್ಯಾಲ ಹೊರ ಜಗದ
ಚೀಲಗಳದೇ ಸಾಮಾನು.
ಹೊಂಟಿದ್ದೇವೆ ಮುಂದ ಮುಂದಕ್ಕ,
ಮಗ್ಗುಲು ನೋಡದೇ.
ಮುಗಿಲು ಕಾಣದೇ.
ಕೂಸು ಕುನ್ನಿಗಳ
ಬಡ್ಡಿ ಬೆಳೆಯುತ್ತಲೇ ಇದೆ,
ಅಸಲಿಗೆ ಅಸಲು ಮರೆತು.
ಚಕ್ರ ಬಡ್ಡಿಯದೇ ಚಿಂತೆ
ಇಷ್ಟಾದರೂ.
ಒಳಗಣ ಸುಖವದು
ದಿಕ್ಕು ತಪ್ಪಿದ ಪಾಪ.
ಒಣ ಪುಣ್ಯ ಬೇಕಿದೆ ನಮಗೆ
ಇನ್ನೂ
ದೇವರ ಕೇಳಿ ಕೇಳಿ.
ಆತನೂ ನಮ್ಮನ್ನ ಮಾಡಿಟ್ಟು
ದಿಕ್ಕು ತಪ್ಪಿದ್ದಾನೆ, ಪಾಪಗಳ
ಹುಡುಕುತ್ತ ಹೊರಟೇ
ಬಿಟ್ಟಿದ್ದಾನೆ.
ಪಾಪ!
ಅವನಿಗೂ ನಾವು ಸಿಗುತ್ತಿಲ್ಲ.
–ಶಿವಕುಮಾರ್ ಉಪ್ಪಿನ