ಬೆಳೆ ಹಾನಿ ಪರಿಹಾರಕ್ಕೆ ರಾಜ್ಯ ಸರಕಾರದಿಂದ ಶೀಘ್ರ ಕ್ರಮ-ಸಚಿವ ಶಿವಶಂಕರರಡ್ಡಿ
ಕೃಷಿ ಇಲಾಖೆಃ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ವೀಕ್ಷಣೆ
ಯಾದಗಿರಿಃ ರೈತರ ಬೆಳೆ ಹಾನಿ ಮತ್ತು ಕೃಷಿ ಇಲಾಖೆ ಅನುಷ್ಠಾನಗೊಳಿಸುತ್ತಿರುವ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಪರಿಶೀಲನೆಗೆ ಪ್ರವಾಸ ಕೈಗೊಳ್ಳಲಾಗಿದೆ. ರಾಯಚೂರು, ಯಾದಗಿರಿ, ಕೊಪ್ಪಳ, ಬಳ್ಳಾರಿ ಜಿಲ್ಲೆಗಳಲ್ಲಿ ಮಳೆ ಕೊರತೆಯಿಂದ ಬೆಳೆಗಳು ಬಾಡುತ್ತಿವೆ. ಈ ಬಗ್ಗೆ ಸರಕಾರಕ್ಕೆ ವರದಿ ಸಲ್ಲಿಸಿ, ಶೀಘ್ರ ಪರಿಹಾರ ಕ್ರಮ ಕೈಗೊಳ್ಳಲಾಗುವುದು ಎಂದು ಕೃಷಿ ಸಚಿವರಾದ ಶ್ರೀ ಎನ್.ಎಚ್.ಶಿವಶಂಕರರೆಡ್ಡಿ ಅವರು ತಿಳಿಸಿದರು.
ಶಹಾಪೂರ ತಾಲ್ಲೂಕಿನ ಮಂಡಗಳ್ಳಿಯಲ್ಲಿ ರೈತರಾದ ಶರಣಪ್ಪ ಗಂಗಣ್ಣ ಕಾಟಮನಳ್ಳಿ ಅವರು ಕೃಷಿ ಭಾಗ್ಯ ಯೋಜನೆಯಡಿ ನಿರ್ಮಿಸಿಕೊಂಡ ಕೃಷಿ ಹೊಂಡ ಮತ್ತು ಗೋವಿಂದಪ್ಪ ಯಂಕಪ್ಪ ಹುಜರತಿ ಅವರು ರಾಷ್ಟ್ರೀಯ ಆಹಾರ ಭದ್ರತೆ (ಅಕ್ಕಿ) ಯೋಜನೆಯಲ್ಲಿ ಯಾಂತ್ರಿಕೃತ ಭತ್ತ ನಾಟಿ ಮಾಡುತ್ತಿದ್ದ ಪ್ರಾತ್ಯಕ್ಷಿಕೆ ವೀಕ್ಷಣೆ ಮಾಡಿ ಅವರು ಮಾತನಾಡಿದರು.
ರಾಯಚೂರು ಜಿಲ್ಲೆಯಲ್ಲಿ 1 ಲಕ್ಷ ಹೆಕ್ಟೇರ್ ಪ್ರದೇಶ ಬೆಳೆ ನಷ್ಟವಾಗಿದೆ. ರಾಜ್ಯದ ಒಟ್ಟು 13 ಜಿಲ್ಲೆಗಳಲ್ಲಿ ಬರದ ಲಕ್ಷಣ ಕಂಡುಬಂದಿವೆ. ಯಾದಗಿರಿ ಜಿಲ್ಲೆಯಲ್ಲಿಯೂ ಕೂಡ ಮಳೆ ಕೊರತೆಯಿಂದ ಬೆಳೆಗಳು ಬಾಡುತ್ತಿರುವ ಕುರಿತು ಕೃಷಿ ಇಲಾಖೆಯಿಂದ ವರದಿ ಬಂದಿದೆ.
ಈ ಎಲ್ಲಾ ಜಿಲ್ಲೆಗಳನ್ನು ಬರಪೀಡಿತ ಎಂದು ಘೋಷಣೆ ಮಾಡುವ ಬಗ್ಗೆ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. ಬೆಳೆ ವಿಮೆ ಮಾಡಿಸುವ ರೈತರಿಗೆ ಅದೇ ವರ್ಷದಲ್ಲಿ ಪರಿಹಾರ ನೀಡುವಂತಹ ನಿಯಮ ಜಾರಿಗೊಳಿಸುವ ಕುರಿತು ಚಿಂತನೆ ನಡೆದಿದೆ ಎಂದು ಅವರು ತಿಳಿಸಿದರು.
ರಾಜ್ಯ ಸರಕಾರ ರೈತರ ಅಭಿವೃದ್ಧಿಗೆ ಬದ್ಧವಾಗಿದೆ. ಈ ನಿಟ್ಟಿನಲ್ಲಿ ಕೃಷಿ ಇಲಾಖೆಯ ವತಿಯಿಂದ ಬಿತ್ತನೆಯಿಂದ ಬೆಳೆ ಕೊಯ್ಲು ವರೆಗೆ ಬೇಕಾಗುವ ಕೃಷಿ ಯಂತ್ರೋಪಕರಣಗಳನ್ನು ರಿಯಾಯಿತಿ ದರದಲ್ಲಿ ವಿತರಣೆ ಮಾಡಲಾಗುತ್ತಿದೆ. ರೈತರ ಬೇಡಿಕೆಗೆ ಅನುಗುಣವಾಗಿ ಕೃಷಿ ಹೊಂಡಗಳನ್ನು ನಿರ್ಮಿಸಲು ಸಹಾಯಧನ ನೀಡಲಾಗುವುದು. ರೈತರು ಹೆಚ್ಚಿನ ಲಾಭ ಪಡೆಯಲು ಕೃಷಿ ಹೊಂಡದಲ್ಲಿ ಮೀನು ಸಾಕಾಣಿಕೆ ಮಾಡಬೇಕು. ಸುತ್ತ ಗಿಡಗಳನ್ನು ನೆಡಬೇಕು ಎಂದು ಅವರು ಸಲಹೆ ನೀಡಿದರು.
ರೈತರೊಂದಿಗೆ ಸಂವಾದ: ಸುರಪುರ ತಾಲ್ಲೂಕಿನ ಕೃಷ್ಣಾಪುರದ ಮಣ್ಣು ಪರೀಕ್ಷಾ ಪ್ರಯೋಗಾಲಯಕ್ಕೆ ಭೇಟಿ ನೀಡಿದರು. ಚಂದ್ಲಾಪುರದಲ್ಲಿ ಕೃಷಿ ಹೊಂಡ, ನಡಾಫ್ ಗುಂಡಿ ವೀಕ್ಷಣೆ ಮಾಡಿದ ನಂತರ ರೈತರೊಂದಿಗೆ ಸಂವಾದ ನಡೆಸಿದರು. ರೈತರು ಕೃಷಿ ಹೊಂಡಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಹೆಚ್ಚಿನ ಮಾಹಿತಿ ಮತ್ತು ಕೃಷಿ ಹೊಂಡಕ್ಕೆ ಅರ್ಜಿ ಸಲ್ಲಿಸಲು ತಮ್ಮ ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಬೇಕು ಎಂದು ಅವರು ಮನವಿ ಮಾಡಿದರು.
ಶಹಾಪುರ ಮತಕ್ಷೇತ್ರದ ಶಾಸಕರಾದ ಶರಣಬಸಪ್ಪಗೌಡ ದರ್ಶನಾಪುರ ಅವರು ಮಾತನಾಡಿ, 2017-18ನೇ ಸಾಲಿನಲ್ಲಿ ಕೃಷಿ ಹೊಂಡ ನಿರ್ಮಿಸಿಕೊಂಡ ರೈತರಿಗೆ ಬಾಕಿ ಇರುವ ಸಹಾಯಧನವನ್ನು ತಕ್ಷಣ ನೀಡಬೇಕು ಎಂದು ಅವರು ಈ ಸಂದರ್ಭದಲ್ಲಿ ಕೋರಿದರು.
ಶಹಾಪುರ ತಾಲ್ಲೂಕಿನ ಗೋಗಿ ಗ್ರಾಮದ ಕೃಷಿ ಯಂತ್ರಧಾರೆ ಕೇಂದ್ರಕ್ಕೆ ಕೃಷಿ ಸಚಿವರು ಭೇಟಿ ನೀಡಿ ಪರಿಶೀಲಿದರು. ನಂತರ ರೈತರೊಂದಿಗೆ ಸಂವಾದ ನಡೆಸಿ, ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದರು.
ಜಲಾನಯನ ಅಭಿವೃದ್ಧಿ ಇಲಾಖೆಯ ನಿರ್ದೇಶಕರಾದ ಎ.ಪದ್ಮಯ್ಯನಾಯಕ್, ಯಾದಗಿರಿ ಜಂಟಿ ಕೃಷಿ ನಿರ್ದೇಶಕರಾದ ದೇವಿಕಾ ಆರ್., ರಾಯಚೂರು ಜಂಟಿ ಕೃಷಿ ನಿರ್ದೇಶಕರಾದ ಚೇತನಾ ಪಾಟೀಲ್, ರಾಯಚೂರು ಕೃಷಿ ವಿಶ್ವವಿದ್ಯಾಲಯದ ಶಿಕ್ಷಣ ನಿರ್ದೇಶಕರಾದ ಡಾ.ಬಿ.ಎಂ.ಚಿತ್ತಾಪುರ, ಕೃಷಿ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕರಾದ ಡಾ.ಎಸ್.ಕೆ.ಮೇಟಿ, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ.ಮಲ್ಲಿಕಾರ್ಜುನ ಕೆಂಗನಾಳ, ಕೃಷಿ ವಿ.ವಿ. ತಾಂತ್ರಿಕ ಸಲಹೆಗಾರ ಡಾ.ಮೌಲಾಸಾಬ್, ಭೀಮರಾಯನಗುಡಿ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಡಾ.ಜಯಪ್ರಕಾಶ ನಾರಾಯಣ, ಶಹಾಪುರ ಸಹಾಯಕ ಕೃಷಿ ನಿರ್ದೇಶಕರಾದ ದಾನಪ್ಪ ಕತ್ನಳ್ಳಿ, ಸುರಪುರ ಸಹಾಯಕ ಕೃಷಿ ನಿರ್ದೇಶಕರಾದ ಮಹಾದೇವ, ಕೃಷಿ ಇಲಾಖೆಯ ಅಧಿಕಾರಿಗಳಾದ ರಾಜ್ಕುಮಾರ, ಸುರೇಶ, ರವಿಕುಮಾರ ಹಾಗೂ ಜನಪ್ರತಿನಿಧಿಗಳು, ರೈತರು ಇದ್ದರು.