ಯಾದಗಿರಿಃ ಸಿಡಿಲು ಬಡಿದು ಮತ್ತೋರ್ವ ಯುವಕ ಬಲಿ
ಶಹಾಪುರಃಸಿಡಿಲು ಬಡಿದು ಮತ್ತೋರ್ವ ಯುವಕ ಬಲಿ
ಯಾದಗಿರಿ: ಈಗಷ್ಟೆ ಒಂದೆರಡು ತಾಸಿನ ಹಿಂದೆ ಜಿಲ್ಲೆಯ ಶಹಾಪುರ ತಾಲೂಕಿನ ಬೆಂಡೆಬೆಂಬಳಿ ಗ್ರಾಮದಲ್ಲಿ ಸಿಡಿಲು ಬಡಿದು ಉಸ್ಮಾನ್ಪಾಶ ಎಂಬ ಯುವಕ ಮೃತಪಟ್ಟ ಕುರಿತು ಸುದ್ದಿ ಓದಿದ್ದೀರಿ. ಅದರ ಜೊತೆಗೆ ರೈತ ಮುದಕಪ್ಪ ‘ವಿನಯವಾಣಿ’ ಜೊತೆ ಮಾತನಾಡುತ್ತ ಆತಂಕ ವ್ಯಕ್ತಪಡಿಸಿದ್ದರು. ಈ ಭಾಗದಲ್ಲಿ ಸಿಡಿಲು ಬಡಿದು ಸರಣಿ ಸಾವು ಸಂಭವಿಸುತ್ತಿರುವ ಸುದ್ದಿ ಕೇಳಿ ರೈತರಲ್ಲಿ ಭಯ ಭೀತಿ ಆವರಿಸಿದೆ ಎಂದು ಮನದಾಳದ ಮಾತುಗಳನ್ನು ಬಿಚ್ಚಿಟ್ಟಿದ್ದರು.
ರೈತ ಮುದುಕಪ್ಪನ ಮಾತುಗಳನ್ನು ದಾಖಲಿಸಿ ಇನ್ನೂ ಸರಿಯಾಗಿ ಒಂದೆರಡು ತಾಸೂ ಮೀರಿಲ್ಲ. ಮತ್ತದೆ ಸಾವಿನ ಸಿಡಿಲಿಗೆ ಶಹಾಪುರ ತಾಲೂಕಿನ ಕುಮುನೂರ ಗ್ರಾಮದ ಹೊರವಲಯದ ಜಮೀನಿನಲ್ಲಿ ಎತ್ತು ಮೇಯಿಸುತ್ತಿರುವಾಗ ಸುರೇಶ ಮಡಿವಾಳ (22) ಎಂಬ ಯುವಕ ಸ್ಥಳದಲ್ಲಿಯೇ ಮೃತಪಟ್ಟ ಸುದ್ದಿ ಬರಸಿಡಿಲಿನಂತೆ ಅಬ್ಬರಿಸಿದೆ. ಘಟನೆ ಕುರಿತು ವಡಿಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಸುರೇಶನ ಕುಟುಂಬಸ್ಥರ ರೋದನ ಮುಗಿಲು ಮುಟ್ಟಿದೆ.
ಕೆಲಗಂಟೆಗಳ ಹಿಂದಷ್ಟೇ ರೈತ ಮುದಕಪ್ಪ ವ್ಯಕ್ತಪಡಿಸಿದ ಆತಂಕಕ್ಕೆ ಇಂಬು ನೀಡುವ ಸುದ್ದಿ ಬಂದಿರುವುದು ನಿಜಕ್ಕೂ ವಿಷಾಧನೀಯ. ಕಳೆದ ವಾರದಿಂದ ಸಿಡಿಲಬ್ಬರ ಮುಂದುವರೆದಿದ್ದು, ರೈತರು ನಂಬಿದ ಆ ಶಿವನೇ ಸಿಡಿಲು ಎಂಬ ಜವರಾಯನ ಅಟ್ಟಹಾಸಕ್ಕೆ ಬ್ರೇಕ್ ಹಾಕಬೇಕಿದೆ. ಈ ಭಾಗದಲ್ಲೇ ಸಾವಿನ ಸಿಡಿಲಿನ ಆರ್ಭಟ ಹೆಚ್ಚಾಗಿರಲು ಕಾರಣವೇನೆಂಬುದರ ಬಗ್ಗೆ ವೈಗ್ನಾನಿಕ ಅಧ್ಯಯನವೂ ನಡೆಯಬೇಕಿದೆ.