ವಿಕಲಚೇತನರಿಗೆ ಮಾನವೀಯ ಸ್ಪಂಧನೆ ನೀಡಿ ಕುಲಕರ್ಣಿ
ವಿಕಲಚೇತನರಿಗಾಗಿ ನಡೆದ ಕಾನೂನು ಅರಿವು ನೆರವು ಕಾರ್ಯಕ್ರಮ
ಶಹಾಪುರ: ವಿಕಲಚೇತನರಿಗೆ ಯಾವುದೇ ಹುದ್ದೆ, ಸ್ಥಾನದಲ್ಲಿ ಸಮಾನ ಅವಕಾಶ ನೀಡಬೇಕು. ಕಾನೂನಿನಲ್ಲಿ ವಿಕಲಚೇತರಿಗಾಗಿಯೇ ಒಂದು ಕಾಯ್ದೆ ರೂಪಿಸಲಾಗಿದೆ. ಸರ್ಕಾರದ ಯೋಜನೆಗಳನ್ನು ಸರಿಯಾಗಿ ಅರಿತುಕೊಳ್ಳುವುದರ ಮೂಲಕ ಅದನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಜೆಎಂಎಫ್ಸಿ ನ್ಯಾಯಾಲಯದ ಪ್ರಧಾನ ಸಿವಿಲ್ ನ್ಯಾಯಧೀಶ ಎಚ್.ಆರ್.ಕುಲಕರ್ಣಿ ತಿಳಿಸಿದರು.
ಇಲ್ಲಿನ ನಗರಸಭೆ ಸಭಾಂಗಣದಲ್ಲಿ ಶನಿವಾರ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ನಗರಸಭೆ ಕಾರ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಶನಿವಾರ ವಿಕಲಚೇತನರಿಗಾಗಿ ಹಮ್ಮಿಕೊಂಡಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ವಿಕಲಚೇತನರಿಗೆ ಮಾನವೀಯ ಸ್ಪಂದನೆಯನ್ನು ನೀಡುವುದರ ಮೂಲಕ ನಾವು ಗೌರವಿಸಬೇಕು. ಯಾರು ಶೇ.40 ಕ್ಕಿಂತ ಹೆಚ್ಚು ದೇಹ ಅಂಗವೈಕಲ್ಯರಾಗಿರುತ್ತಾರೆ ಅಂತಹ ವ್ಯಕ್ತಿಯನ್ನು ನಾವು ಅಂಗವಿಕಲ ಎನ್ನುತ್ತೇವೆ. ಬಸ್ಸು, ರೈಲ್ವೆ, ಸರ್ಕಾರದಿಂದ ಸಹಾಯಧನ, ವಸತಿ ಯೋಜನೆ ಅಡಿಯಲ್ಲಿ ಶೇ.5ರಷ್ಟು ನಿವೇಶನಗಳು ಮೀಸಲಾಗಿರುತ್ತವೆ. ಆದರೆ ನಿಜವಾದ ವಿಕಲಚೇತನರು ಇಂತಹ ಯೋಜನೆಯನ್ನು ಉಪಯೋಗಿಸಿಕೊಳ್ಳಬೇಕು. ಅಧಿಕಾರಿಗಳು ದುರ್ಬಳಕೆಗೆ ಅವಕಾಶ ನೀಡಬಾರದು ಎಂದು ಎಚ್ಚರಿಕೆ ನೀಡಿದರು.
ಪೌರಾಯುಕ್ತ ಬಸವರಾಜ ಶಿವಪೂಜೆ ಮಾತನಾಡಿ, ಸರ್ಕಾರ 21 ವಿಧದಲ್ಲಿ ಅಂಗವೈಕಲ್ಯ ಹೊಂದಿದ ಬಗ್ಗೆ ಗುರುತಿಸಲಾಗುತ್ತದೆ. ಅಂಗವಿಕಲರಿಗೆ ಅಗತ್ಯವಾದ ಊರುಗೋಲು ಹಾಗೂ ಇನ್ನಿತರ ಸಾಮಗ್ರಿಗಳನ್ನು ವಿತರಿಸಲಾಗುತ್ತದೆ. ಅಲ್ಲದೆ ಈಗಾಗಲೇ 21 ವಿಕಲಚೇತನಿರಿಗೆ ತ್ರಿಚಕ್ರ ವಾಹನ ವಿತರಿಸಲಾಗಿದೆ. ನಗರಸಭೆಯ ವ್ಯಾಪ್ತಿಯಲ್ಲಿ ಎಷ್ಟು ವಿಕಲಚೇತನರು ಇದ್ದಾರೆ ಎಂಬುವುದರ ಬಗ್ಗೆ ಸಮೀಕ್ಷೆ ನಡೆಸಲಾಗುತ್ತಿದೆ ಎಂದರು.
ವಕೀಲರ ಸಂಘದ ಕಾರ್ಯದರ್ಶಿ ಸಂದೀಪ ದೇಸಾಯಿ, ಜಿಲ್ಲಾ ಅಂಗವಿಕಲರ ಕಲ್ಯಾಣ ಅಧಿಕಾರಿ ಶರಣಪ್ಪ ಪಾಟೀಲ್, ನಗರಸಭೆಯ ಸಮುದಾಯ ಸಂಘಟನಾ ಅಧಿಕಾರಿ ದೇವಿಂದ್ರ ಹೆಗ್ಗಡೆ, ಪೊಲೀಸ್ ಇನ್ಸಪೆಕ್ಟರ್ ಹನುಮರಡ್ಡೆಪ್ಪ, ದುರ್ಗಪ್ಪ ನಾಯಕ, ಹಣಮಂತ ಮಿಲ್ಟ್ರಿ, ಹಿರಿಯ ವಕೀಲರಾದ ಆರ್.ಎಂ.ಹೊನ್ನಾರಡ್ಡಿ, ಮಲ್ಲಿಕಾರ್ಜುನ ಬುಕ್ಕಲ, ಶಿವಶರಣ ಹೋತಪೇಟ, ಉಮೇಶ ಮುಡಬೂಳ, ಬಸವರಾಜ ಠಾಕೂರ, ಬಿ.ಎಂ.ರಾಂಪುರೆ, ಸತ್ಯಮ್ಮ ಹೊಸ್ಮನಿ ಸೇರಿದಂತೆ ಇತರರಿದ್ದರು.