ವೀರಶೈವ-ಲಿಂಗಾಯತ ಧರ್ಮ : ದ್ವಂದ್ವ ಮೂಡಿಸಿದ ಸಿದ್ಧರಾಮಯ್ಯ ಸರ್ಕಾರದ ನಿರ್ಧಾರ
ಬೆಂಗಳೂರು : ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ನ್ಯಾ.ನಾಗಮೋಹನದಾಸ್ ನೇತೃತ್ವದ ಸಮಿತಿ ನೀಡಿದ ವರದಿ ಬಗ್ಗೆ ವೀರಶೈವ-ಲಿಂಗಾಯತ ಸ್ವತಂತ್ರ ಧರ್ಮದ ಕುರಿತಾಗಿ ಚರ್ಚೆ ನಡೆದಿದೆ. ಸುಮಾರು ಹೊತ್ತು ಬಿರುಸಿನ ಚರ್ಚೆ ನಡೆದಿದ್ದು ಸಂಪುಟ ಸಚಿವರಲ್ಲೇ ಭಿನ್ನಾಭಿಪ್ರಾಯ ಸ್ಪೋಟಗೊಂಡಿದೆ. ಒಂದು ಕಡೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಈಶ್ವರ್ ಖಂಡ್ರೆ, ಮತ್ತೊಂದು ಕಡೆ ಎಮ್.ಬಿ.ಪಾಟೀಲ್, ವಿನಯ ಕುಲಕರ್ಣಿ ಮದ್ಯೆ ತೀವ್ರ ಜಟಾಪಟಿ ನಡೆದಿದೆ.
ಸಚಿವ ಸಂಪುಟದ ಸದಸ್ಯರು ಕೊನೆಗೆ ಸಿಎಂ ಸಿದ್ಧರಾಮಯ್ಯ ಅವರ ತೀರ್ಮಾನವೇ ಅಂತಿಮ ಎಂದು ತಿಳಿಸಿದ್ದಾರೆ. ಬಳಿಕ ಅಡ್ವಕೇಟ್ ಜನರಲ್ ನಾಯಕ್ ಅವರಿಂದ ಕಾನೂನು ಸಲಹೆ ಪಡೆದ ಸಿಎಂ ಸರ್ಕಾರದ ನಿಲುವನ್ನು ಘೋಷಿಸಿದ್ದಾರೆ. ಬಸವತತ್ವವನ್ನು ಒಪ್ಪುವ ಲಿಂಗಾಯತ / ವೀರಶೈವ ಒಂದು ಸ್ವತಂತ್ರ ಧರ್ಮವಾಗಿದ್ದು ಅಲ್ಪ ಸಂಖ್ಯಾತ ಮಾನ್ಯತೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಸಚಿವ ಸಂಪುಟ ಒಪ್ಪಿದೆ.
ಸಚಿವ ಸಂಪುಟ ಸಭೆ ಬಳಿಕ ಸಚಿವರಾದ ಎಮ್.ಬಿ.ಪಾಟೀಲ್ ಮತ್ತು ಎಸ್.ಎಸ್.ಮಲ್ಲಿಕಾರ್ಜುನ್ ಅವರು ನೀಡಿದ ಹೇಳಿಕೆಗಳು ಗೊಂದಲ ಮೂಡಿಸಿವೆ. ಅಂತೆಯೇ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿದ ಸಚಿವ ಟಿ.ಬಿ.ಜಯಚಂದ್ರ ಅವರ ಹೇಳಿಕೆಗಳಲ್ಲೂ ಸಹ ಸಾಕಷ್ಟು ದ್ವಂದ್ವ ವ್ಯಕ್ತವಾಯಿತು. ಅಸಲಿಗೆ ಸಚಿವ ಸಂಪುಟದ ಸಭೆಯ ನಿರ್ಧಾರವನ್ನು ಎರಡು ಲೈನ್ ಓದಿದರೇ ಹೊರತು ಸ್ಪಷ್ಟವಾಗಿ ಹೇಳುವಲ್ಲಿ ವಿಫಲವಾದರು. ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಲು ಸಾಕಷ್ಟು ಸಮಯ ತೆಗೆದುಕೊಂಡರಾದರೂ ಮತ್ತ ಮತ್ತೆ ಡಾಕುಮೆಂಟಿನ ಎರಡು ಲೈನನ್ನೇ ಓದಿ ಹೇಳಿದರು. ಕೊನೆಗೆ ಈ ಬಗ್ಗೆ ಹೆಚ್ಚು ಹೇಳೋಕೆ ಆಗೋದಿಲ್ಲ ಎಂದು ತಿಳಿಸಿದರು.
ಬಸವ ತತ್ವ ಒಪ್ಪುವ ಲಿಂಗಾಯತ / ವೀರಶೈವ ಎಂಬ ಪದವೇ ಸಾಕಷ್ಟು ಗೊಂದಲವನ್ನು ಮೂಡಿಸಿದೆ. ವೀರಶೈವ ಮಠಾಧೀಶರು ಸಿದ್ಧರಾಮಯ್ಯ ಸಂಪುಟದ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಮತ್ತೊಂದು ಕಡೆ ಲಿಂಗಾಯತ ಮಠಾಧೀಶರು ಮತ್ತು ಲಿಂಗಾಯತ ಮಠಾಧೀಶರು ಸರ್ಕಾರದ ನಿರ್ಧಾರ ಸ್ವಾಗತಾರ್ಹ ಎಂದು ಖುಷಿ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಲಿಂಗಾಯತ/ವೀರಶೈವ ಎಂಬ ಪದ ಎಲ್ಲರಲ್ಲೂ ಗೊಂದಲ ಮೂಡಿಸಿದ್ದಂತೂ ಸುಳ್ಳಲ್ಲ.