ಯೂತ್ ಐಕಾನ್

MLC ರಘು ಆಚಾರ್ ಖಾಸಗಿ ಬಿಲ್ ಮಂಡಿಸಲು ಪ್ರೇರಣೆ ದುರ್ಗದ ಬಾಲಕಿ!

ನಯನಾ ಜೋಗಿ ಹೋರಾಟಕ್ಕೆ ಜಯವಾಗಲಿ,  ರಘು ಆಚಾರ್ ಪ್ರಯತ್ನ ಫಲಿಸಲಿ…

ಶಾಲೆಯಲ್ಲಿ ಆಟ-ಪಾಠ, ಮನೆಯಲ್ಲಿ ತಿಂಡಿ-ಊಟ ಮಾಡಿಕೊಂಡು ಹಾಯಾಗಿರಬೇಕಾದ ಹಾಲುಗಲ್ಲದ ಬಾಲೆ ಅವಳು. ಆದರೆ, ಆಟ, ಪಾಠದಲ್ಲೂ ಮುಂಚೂಣಿಯಲ್ಲಿರುವ ಆ ಬಾಲಕಿಗೆ ವಯಸ್ಸು ಮೀರಿದ ಪ್ರಬುದ್ಧತೆ, ಸಾಮಾಜಿಕ ಕಳಕಳಿ, ಹೋರಾಟದ ಕಿಚ್ಚಿದೆ. ಪರಿಣಾಮ ಮೈಕ್ ಸಿಕ್ಕರೆ ಸಾಕು ಉದ್ದುದ್ದ ಭಾಷಣ ಬಿಗಿಯು ಸಚಿವರಿಗೇ ನೀರಿಳಿಸಿ ರಾಜ್ಯದ ಗಮನ ಸೆಳೆದಿದ್ದಾಳೆ. ಅಲ್ಲದೆ ವಿಧಾನ ಪರಿಷತ್ ಸದಸ್ಯ ರಘು ಆಚಾರ್ ವಿಧಾನಸಭೆಯಲ್ಲಿ ಶಿಕ್ಷಣ ಇಲಾಖೆಗೆ ಸಂಭಂಧಿಸಿದ್ದ ಖಾಸಗಿ ವಿಧೇಯಕ ಮಂಡನೆಗೆ ಪ್ರೇರಣೆ ಆಗಿದ್ದಾಳೆ.

ಹೌದು, ಚಿತ್ರದುರ್ಗದ ಓಂಕಾರ ಮೂರ್ತಿ-ಭಾಗ್ಯಮ್ಮ ದಂಪತಿಯ ಸುಪುತ್ರಿ ನಯನಾ. ನಯನಾ ಜೋಗಿ ಅಂದರೆ ಸಾಕು ವಿದ್ಯಾರ್ಥಿಗಳಿಂದ ಹಿಡಿದು ಹಿರಿಯ ನಾಗರೀಕರವರೆಗೆ ಎಲ್ಲರಿಗೂ ಅಚ್ಚುಮೆಚ್ಚು. ಚಿತ್ರದುರ್ಗ ನಗರದ ವಿದ್ಯಾವಿಕಾಸ ಪ್ರೌಢ ಶಾಲೆಯಲ್ಲಿ 10ನೇ ತರಗತಿ ಓದುತ್ತಿರುವ ನಯನಾ ಚಿಕ್ಕ ವಯಸ್ಸಿನಲ್ಲೇ ಅಪಾರ ಕೀರ್ತಿಗಳಿಸಿದ್ದಾಳೆ. ಎಂಟನೇ ತರಗತಿ ಓದುವಾಗಿನಿಂದಲೇ ಹೋರಾಟ ಪ್ರವೃತ್ತಿ ಬೆಳೆಸಿಕೊಂಡಿರುವ ನಯನಾ ಖಾಸಗಿ ಸಂಸ್ಥೆಯೊಂದರ ಸಹಭಾಗಿತ್ವದಲ್ಲಿ ಸಂಗಡಿಗರ ಗುಂಪು ಕಟ್ಟಿಕೊಂಡು ಮಕ್ಕಳು ಶಾಲೆ ಬಿಡುವುದು ಏಕೆ, ಸರ್ಕಾರಿ ಶಾಲೆ ಸೇರದಿರಲು ಕಾರಣವೇನು ಎಂಬುದರ ಬಗ್ಗೆ ರಿಸರ್ಚ್ ಮಾಡಿದ್ದಾಳೆ.

ಬಡಮಕ್ಕಳು ಶಾಲೆಯಿಂದ ದೂರು ಉಳಿಯುವುದು ಹಾಗೂ ಸರ್ಕಾರಿ ಶಾಲೆಯ ಸ್ಥಿತಿಗತಿ ಕಂಡ ನಯನಾಗೆ ಹೋರಾಟದ ಕಿಚ್ಚು ಮೂಡಿದೆ. ಪರಿಣಾಮ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸಿ ಗುಣಮಟ್ಟದ ಶಿಕ್ಷಣ ನೀಡಿ ಎಂದು ಅಭಿಯಾನವನ್ನು ಆರಂಭಿಸಿದ್ದಾಳೆ. ಸರ್ಕಾರಿ ನೌಕರರು ಮತ್ತು ಜನಪ್ರತಿನಿಧಿಗಳ ಮಕ್ಕಳು ಕಡ್ಡಾಯವಾಗಿ ಸರ್ಕಾರಿ ಶಾಲೆಯಲ್ಲಿ ಓದುವಂತಾಗಬೇಕು. ಆ ನಿಟ್ಟಿನಲ್ಲಿ ಕಾನೂನು ರೂಪಿಸಬೇಕೆಂದು ಹೋರಾಟಕ್ಕಿಳಿದಿದ್ದಾಳೆ. ಬೆಂಗಳೂರಿನಲ್ಲಿ ಮಕ್ಕಳೊಂದಿಗೆ ಮುಖ್ಯಮಂತ್ರಿಗಳ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನಯನಾ, ಸಿಎಂ ಸಿದ್ಧರಾಮಯ್ಯ ಅವರಿಗೂ ಈ ಬಗ್ಗೆ ಮನವಿ ಮಾಡಿ ಗಮನಸೆಳೆದಿದ್ದಳು. ಅಲ್ಲದೆ ಕಾನೂನು ಸಚಿವ ಟಿ.ಬಿ.ಜಯಚಂದ್ರ, ಶಿಕ್ಷಣ ಸಚಿವ ತನ್ವೀರ್ ಸೇಠ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ ಅವರಿಗೂ ಈ ಬಗ್ಗೆ ಮನವಿ ಸಲ್ಲಿಸಿದ್ದಾಳೆ.

ಚಿತ್ರ- ಸಿಎಂ ಸಿದ್ಧರಾಮಯ್ಯಗೆ ಮನವಿ ಸಲ್ಲಿಸುತ್ತಿರುವ ನಯನಾ

ಇನ್ನು ಚಿತ್ರದುರ್ಗ ನಗರದಲ್ಲಿ ಸೆಪ್ಟಂಬರ್ 22ರಂದು ನಡೆದ ಪ್ರತಿಭಾ ಕಾರಂಜಿ ಕಾರ್ಯಕ್ರಮದ ವೇದಿಕೆಯಲ್ಲಿ ಸಮಾಜ ಕಲ್ಯಾಣ ಸಚಿವ ಹೆಚ್.ಆಂಜನೇಯ ಉದ್ದುದ್ದ ಭಾಷಣ ಮಾಡಿದ್ದರು. ಸರ್ಕಾರಿ ಶಾಲೆಯಲ್ಲಿ ಓದಿದವರು ಮಹಾನ್ ವ್ಯಕ್ತಿಗಳಾಗಿದ್ದಾರೆಂದೆಲ್ಲಾ ಹೇಳಿ ವೇದಿಕೆಯಿಂದ ಕೆಳಗಿಳಿದು ಇನ್ನೇನು ಕಾರು ಹತ್ತಬೇಕು ಅನ್ನುವಷ್ಟರಲ್ಲಿ ಹೋರಾಟಗಾರ್ತಿ ನಯನಾ ಸಚಿವರನ್ನು ಅಡ್ಡಗಟ್ಟಿದ್ದಳು. ಸರ್ಕಾರಿ ಶಾಲೆ-ಕಾಲೇಜುಗಳ ಸ್ಥಿತಿಗತಿ ಬಗ್ಗೆ ಪ್ರಶ್ನಿಸಿ ಕಕ್ಕಾಬಿಕ್ಕಿ ಆಗುವಂತೆ ಆಡಿದ್ದಳು. ಸರ್ಕಾರಿ ಶಾಲೆಗಳಿಗೆ ಉತ್ತಮ ಸೌಲಭ್ಯ ಒದಗಿಸಿ, ಗುಣಮಟ್ಟದ ಶಿಕ್ಷಣ ನೀಡಿ. ನಾವೆಲ್ಲಾ ಸರ್ಕಾರಿ ಶಾಲೆ ಸೇರುತ್ತೇವೆ. ಮುಂದಿನ ವರ್ಷದೊಳಗೆ ಇಲ್ಲಿನ ಪಿಯು ಕಾಲೇಜು ಯಾವ ವಿದ್ಯಾಸಂಸ್ಥೆಗೂ ಕಮ್ಮಿಯಿಲ್ಲ ಎಂಬಂತೆ ಅಭಿವೃದ್ಧಿ ಪಡಿಸಿ ನನ್ನೊಟ್ಟಿಗೆ 20ಜನ ವಿದ್ಯಾರ್ಥಿಗಳು ಸರ್ಕಾರಿ ಕಾಲೇಜು ಸೇರುತ್ತೇವೆಂದು ಸವಾಲು ಹಾಕಿದಳು. ಅಲ್ಲದೆ ನೀವು ಜನಪ್ರತಿನಿಧಿಗಳು ಹಾಗೂ ಸರ್ಕಾರಿ ನೌಕರರ ಮಕ್ಕಳು ಕಡ್ಡಾಯವಾಗಿ ಸರ್ಕಾರಿ ಶಾಲೆಗಳಲ್ಲಿ ವಿದ್ಯಭ್ಯಾಸ ಮಾಡುವಂತೆ ಕಾನೂನು ರೂಪಿಸಿ ಎಂದು ಮನವಿ ಮಾಡಿದಳು.

ವಿದ್ಯಾರ್ಥಿನಿ ಸಚಿವರಿಗೆ ಬೆವರಿಳಿಸಿದ ಸುದ್ದಿ ರಾಜ್ಯದ ಗಮನ ಸೆಳೆಯುತ್ತಿದ್ದಂತೆ ವಿಧಾನ ಪರಿಷತ್ ಸದಸ್ಯ ರಘು ಆಚಾರ್ ಚಿತ್ರದುರ್ಗಕ್ಕೆ ಬಂದು ವಿದ್ಯಾರ್ಥಿನಿಯನ್ನು ಭೇಟಿಯಾಗಿ ಗೌರವಿಸಿದರು. ಆಗಲೂ ವಿದ್ಯಾರ್ಥಿನಿ ಹೇಳಿದ್ದು ಒಂದೇ ಮಾತು ಜನಪ್ರತಿನಿಧಿಗಳು ಮತ್ತು ಸರ್ಕಾರಿ ನೌಕರರ ಮಕ್ಕಳನ್ನು ಕಡ್ಡಾಯವಾಗಿ ಸರ್ಕಾರಿ ಶಾಲೆಗೆ ಸೇರಿಸುವ ಕಾನೂನು ರೂಪಿಸಿ. ಆ ಮೂಲಕ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸಲು ಸಾದ್ಯವಾಗುತ್ತದೆ ಎಂಬುದೇ ಆಗಿತ್ತು. ಹೀಗಾಗಿ, ಅಂದು ರಘು ಆಚಾರ್ ವಿದ್ಯಾರ್ಥಿನಿಯ ಹೋರಾಟ ಮನೋಭಾವಕ್ಕೆ ಮೆಚ್ಚಿ ಖಾಸಗಿ ವಿಧೇಯಕ ಮಂಡಿಸುವುದಾಗಿ ಪ್ರಾಮಿಸ್ ಮಾಡಿದ್ದರು

ಆ ಪುಟ್ಟ ವಿದ್ಯಾರ್ಥಿನಿಗೆ ಕೊಟ್ಟ ಮಾತಿನಂತೆ ವಿಧಾನ ಪರಿಷತ್ ಸದಸ್ಯ ರಘು ಆಚಾರ್ ಈಗ ಜನಪ್ರತಿನಿಧಿಗಳು ಹಾಗೂ ಸರ್ಕಾರಿ ನೌಕರರ ಮಕ್ಕಳನ್ನು ಕಡ್ಡಾಯವಾಗಿ ಸರ್ಕಾರಿ ಶಾಲೆಯಲ್ಲೇ ವಿದ್ಯಾಭ್ಯಾಸ ಮಾಡಬೇಕೆಂಬ ನಿಯಮ ರೂಪಿಸುವ ನಿಟ್ಟಿನಲ್ಲಿ ಕರ್ನಾಟಕ ಶಿಕ್ಷಣ ಅಧಿನಿಯಮ -1983 ತಿದ್ದುಪಡಿ ತರುವ ಖಾಸಗಿ ವಿಧೇಯಕ ಮಂಡಿಸಲು ಮುಂದಾಗಿದ್ದಾರೆ. ನಾಳೆ ಖಾಸಗಿ ವಿಧೇಯಕ ಮಂಡಿಸಲಿದ್ದು ಖಾಸಗಿ ವಿಧೇಯಕದ ಮೇಲೆ ಚರ್ಚೆ ನಡೆಯಲಿದೆ. ನಿಜವಾಗಲೂ ಜನಪರ ಕಾಳಜಿವುಳ್ಳ ಸರ್ಕಾರ ರಘು ಆಚಾರ್ ಮಂಡಿಸುವ ವಿಧೇಯಕವನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಆ ಮೂಲಕ ಶಿಕ್ಷಣ ವ್ಯವಸ್ಥೆ ಸುಧಾರಣೆಗೆ ಕ್ರಮ ಕೈಗೊಳ್ಳಬೇಕಿದೆ.

 

-ಮಲ್ಲಿಕಾರ್ಜುನ್ ಮುದನೂರ್

Related Articles

2 Comments

Leave a Reply

Your email address will not be published. Required fields are marked *

Back to top button