ಗೌರಿ ಹತ್ಯೆ ಬಗ್ಗೆ ಫೇಸ್ಬುಕ್’ನಲ್ಲಿ ಅವಹೇಳನಕಾರಿ ಬರಹ: ಯಾದಗಿರಿ ಮೂಲದ ‘ಮಲ್ಲಿ ಅರ್ಜುನ್’ ಬಂಧನ
ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ ಹತ್ಯೆ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಪ್ರಚೋದನಾತ್ಮಕ, ಅವಹೇಳನಕಾರಿ ಬರಹಗಳನ್ನು ದಾಖಲಿಸಿದ್ದರು. ಸಾವನ್ನೂ ಸಂಭ್ರಮಿಸುವ ಮೂಲಕ ವಿಕೃತಿ ಮೆರೆದು ವ್ಯಾಪಕ ಟೀಕೆಗೆ ಗುರಿಯಾಗಿದ್ದರು. ಅಲ್ಲದೆ ನಾಡಿನೆಲ್ಲೆಡೆ ವಿಕೃತಿ ಮೆರೆದ ಅವಿವೇಕಿಗಳ ಬಗ್ಗೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು.
ಪೋಲೀಸರೂ ಸಾಮಾಜಿಕ ಜಾಲತಾಣಗಳ ಮೇಲೆ ಕಣ್ಣಿಟ್ಟಿದ್ದರು. ಅಲ್ಲದೆ ಗೌರಿ ಲಂಕೇಶ ಹತ್ಯೆ ಹಿನ್ನೆಲೆಯಲ್ಲಿ ಪ್ರತಿಯೊಂದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಹೀಗಾಗಿ, ಇಂದು ಬೆಂಗಳೂರಿನಲ್ಲಿ ಸೈಬರ್ ಕ್ರೈಂ ವಿಭಾಗದ ಪೊಲೀಸರು ಮಲ್ಲಿ ಅರ್ಜುನ್ ಹೆಸರಿನ ಫೇಸ್ ಬುಕ್ ನಕಲಿ ಅಕೌಂಟ್ ಕ್ರಿಯೇಟ್ ಮಾಡಿಟ್ಟುಕೊಂಡು ಅವಹೇಳನಕಾರಿ ಸಾಲುಗಳನ್ನು ಬರೆದಿದ್ದ ಮಲ್ಲನಗೌಡ ಬಿರಾದರ ಎಂಬ ಯುವಕನನ್ನು ಬಂಧಿಸಿದ್ದಾರೆ.

‘ಒಂದು ಗಂಜಿ ಗಿರಾಕಿಯ ಹೆಣಬಿತ್ತು. ಮಿಕ್ಕ ಗಂಜಿ ಗಿರಾಕಿಗಳಿಗೂ ಇದೆ ಗತಿ… ಧರ್ಮಕ್ಕಾಗಿ ಜೀವ ಕೊಡಬೇಕು ಅಂತೇನಿಲ್ಲ. ಧರ್ಮದ ವಿರೋದ್ಧವಾಗಿದ್ದವರ ಜೀವತೆಗೆದರೆ ಆಯ್ತು’ # ಗೌರಿ ಲಂಕೇಶ್ ಮಟಾಶ್ ‘ ಅಂತ ಫೇಸ್ ಬುಕ್ ಗೋಡೆ ಮೇಲೆ ಬರೆದುಕೊಂಡು ಸಾವಿನ ಸುದ್ದಿಯನ್ನೇ ಸಂಭ್ರಿಮಿಸಿದ್ದ. ಈ ಬಗ್ಗೆ ಪೋಲಿಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದರು.
ಇಂದು ಆರೋಪಿಯನ್ನು ಬಂಧಿಸಿರುವ ಪೊಲೀಸರು ಒಂದನೆಯ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ. ಬಳಿಕ ಹೆಚ್ಚಿನ ವಿಚಾರಣೆಗಾಗಿ ಕಾಲಾವಕಾಶ ಕೇಳಿ ಒಂದು ವಾರ ಕಾಲ ಆರೋಪಿ ಮಲ್ಲಿ ಅರ್ಜುನ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿ ಮೂಲತ: ಯಾದಗಿರಿ ಜಿಲ್ಲೆಯ ಸುರಪುರ ಮೂಲದವನಾಗಿದ್ದಾನೆ. ಲಿಂಗಸೂಗುರಿನಲ್ಲಿ ಡಿಪ್ಲೋಮಾ ವ್ಯಾಸಾಂಗ ಮಾಡಿದ್ದು ಕೆಲಸ ಹುಡುಕಿಕೊಂಡು 2 ತಿಂಗಳಿಂದ ಬೆಂಗಳೂರಿನಲ್ಲಿ ವಾಸವಾಗಿದ್ದನೆಂದು ಪೊಲೀಸ್ ಮೂಲದಿಂದ ತಿಳಿದುಬಂದಿದೆ. ಪೊಲೀಸರ ತನಿಖೆಯಿಂದ ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.