ಮಹಿಳಾ ವಾಣಿ

ಚೀಲದಾಗ ರೊಕ್ಕ ತುಂಬ್ಕೊಂಡು ಹೋಗಿ ಕಿಸೆದಾಗ ಸಂತಿ ತರುವ ಕಾಲ ಬಂದೈತಿ.!

ಬಯಸಿದ್ದನ್ನೆಲ್ಲ ಕ್ಷಣಾರ್ಧದಲ್ಲಿ ತಂದು ಕೊಡುವ ತಾಕತ್ತು ಯಾರಿಗಿದೆ ಹೇಳಿ.?

ನಾನಿನ್ನೂ ಪೇಟೆಕೋಟು ಹಾಕಿಕೊಂಡು ಓಡಾಡುತ್ತಿದ್ದ ಕಾಲ ಅದು. ನನ್ನ ಅಜ್ಜ (ತಾಯಿಯ ತಂದೆ) ಪ್ರಾಥಮಿಕ ಶಾಲೆಯ ಹೆಡ್ ಮಾಸ್ಟರ್. ನಮ್ಮನ್ನೆಲ್ಲ ಕೂಡ್ರಿಸಿ ತಲೆಗೆ ಕಸರತ್ತು ಕೊಡುವ ಪ್ರಶ್ನೆ ಕೇಳುತ್ತಿದ್ದರು. ಉತ್ತರ ಹೇಳಿದವರಿಗೆ ಬಹುಮಾನವಾಗಿ ತಮ್ಮ ಒಳಂಗಿ ಕಿಸೆಯಿಂದ ಝಣ ಝಣ ಸದ್ದು ಮಾಡುವ ನಾಣ್ಯ ತೆಗೆದು ಕೊಡುತ್ತಿದ್ದರು.

ಮಗುವೊಂದು ಚಂದ್ರನನ್ನು ಕಂಡು ತಾಯಿಗೆ ಪ್ರಶ್ನಿಸುವ ಕುವೆಂಪು ವಿರಚಿತ ಶಿಶುಗೀತೆ

ದೇವರ ಪೆಪ್ಪರಮೆಂಟೇನಮ್ಮಾ
ಗಗನದೊಳಲೆಯುವ ಚಂದಿರನು?
ಎಷ್ಟೇ ತಿಂದರೂ ಖರ್ಚೇ ಆಗದ
ಬೆಳೆಯುವ ಪೆಪ್ಪರಮೆಂಟೇನಮ್ಮಾ

ಎಂದು ನಮಗೆಲ್ಲ ಹಾಡು ಹೇಳಿಸುತ್ತಿದ್ದರು. ಕೊನೆಗೆ ಪೆಪ್ಪರಮೆಂಟ್ ತುಗೊಂಡ ತಿನ್ರಿ ಎಂದು ಹೇಳುತ್ತ ನನ್ನಜ್ಜ ಕೈಗಿತ್ತ ನಾಲ್ಕಾಣೆ ನಾನು ನೋಡಿದ ಮೊದಲ ಹಣದ ಚಿಕ್ಕ ರೂಪ. ಅದನ್ನು ಬೆರಗುಗಣ್ಣಿನಿಂದ ನೋಡಿದೆ. ಅದರ ಮುಖದ ಮೇಲೆ ಬೆನ್ನಿನ ಮೇಲೆ ಸವರಿ ನಿಂತಲ್ಲೇ ಕುಣಿದೆ. ಗಿಡ್ಡ ಪೇಟೆಕೋಟಿನ ಉದ್ದನೆಯ ಕಿಸೆಗೆ ಇಳಿ ಬಿಟ್ಟು ಎಷ್ಟೋ ತಿಂಗಳುಗಳವರೆಗೆ ಜತನವಾಗಿಟ್ಟುಕೊಂಡಿದ್ದೆ. ಸಿಕ್ಕ ಸಿಕ್ಕ ಗೆಳತಿಯರಿಗೆಲ್ಲ ಚಿಕ್ಕ ನಾಲ್ಕಾಣೆ ತೋರಿಸಿ ದೊಡ್ಡದಾಗಿ ಸಂಭ್ರಮಿಸಿದ ಕ್ಷಣಗಳು ಇನ್ನೂ ಮನದಲ್ಲಿ ಅಚ್ಚೊತ್ತಿವೆ.

ಆಪ್ತ ಗೆಳತಿಯೊಬ್ಬಳು ಅವಳ ಅಜ್ಜಿ ಎಲೆ ಅಡಿಕೆ ಚೀಲದಿಂದ ತೆಗೆದು ಕೊಟ್ಟ ಮುದುರಿದ ಒಂದು ರೂಪಾಯಿ ಹೆಮ್ಮೆಯಿಂದ ತೋರಿಸಿ ಬೀಗಿದ್ದಳು. ಅಪ್ಪನ ಕಿಸೆಯಿಂದ ಆಗಾಗ ಕದ್ದ ಪುಡಿಗಾಸನ್ನು ಜೀರಿಗೆ ಸಾಸಿವೆ ಡಬ್ಬದಲ್ಲಿ ಭದ್ರವಾಗಿ ಮುಚ್ಚಿಟ್ಟ ಅವ್ವ, ಊರ ಜಾತ್ರೆಯ ದಿನ ನಿಮಗಿಷ್ಟವಾದ ಗೊಂಬಿ ಪುಗ್ಗಾ ತುಗೊಳ್ರೀ ಅಂತ ಅಪ್ಪನಿಗೆ ಗೊತ್ತಾಗದಂತೆ ಕೊಡುತ್ತಿದ್ದ ಮುದ್ದಿನ ರೀತಿ ಸೊಗಸಾಗಿರುತ್ತಿತ್ತು.

ಅಣ್ಣ ದೀಪಾವಳಿ ಹಬ್ಬಕ್ಕೆ ಸೊದರತ್ತೆ ಕರೆ ತರಲು ಹೊರಟಾಗ ಅಪ್ಪ ಜೇಬಿಗಿಟ್ಟ ಇಪ್ಪತ್ತರ ನೋಟು,ನೆಂಟರಿಷ್ಟರು ಮನೆಗೆ ಬಂದು ಮರಳುವಾಗ ಹಣೆಗೆ ಮುತ್ತನಿಕ್ಕಿ ಕೈಗಿತ್ತ ನಾಣ್ಯಗಳು. ಅಬ್ಬಬ್ಬಾ! ಹೀಗೆ ನೋಟಿಗೆ ಅಂಟಿಕೊಂಡ ಕತೆಗಳು ಸುರುಳಿ ಸುರುಳಿಯಾಗಿ ಬಿಚ್ಚಿಕೊಳ್ಳುತ್ತವೆ. ಪ್ರತಿಯೊಬ್ಬರ ಜೀವನದಲ್ಲಿ ಹಣದ ಹತ್ತು ಹಲವು ತರಹೇವಾರಿ ಕತೆಗಳು ಇದ್ದೇ ಇರುತ್ತವೆ. ಜಗದ ಜನರೆಷ್ಟೋ ಅಷ್ಟು ತೆರನಾದ ಕತೆಗಳು ಸಿಕ್ಕರೂ ಸೋಜಿಗ ಪಡಬೇಕಾದ್ದಿಲ್ಲ.

“ನಮ್ಮ ಕಾಲದಾಗ ಎರಡು ರೂಪಾಯಿ ತುಗೊಂಡ್ ಹೋದ್ರ ಸಾಕು. ಎರಡ್ ಚೀಲ ತುಂಬ ಸಂತಿ ಬರ್ತಿತ್ತು. ಈಗ ರೊಕ್ಕಕ್ಕ ಕಿಮ್ಮತ್ತಿಲ್ಲದಂಗ ಆಗೈತಿ ಚೀಲದ ತುಂಬ ರೊಕ್ಕ ತುಂಬಕೊಂಡು ಹೋಗಿ ಕಿಸೆದಾಗ ಸಂತಿ ತರುವ ಕಾಲಮಾನ ಬಂದೈತಿ.” ಎಂದು ಬೇಸರ ಪಟ್ಟುಕೊಂಡು ನುಡಿಯುವ ಹಿರಿಯ ನಾಗರಿಕರ ಮಾತುಗಳು ಕಿವಿಗೆ ಬಿದ್ದಾಗ ಎಂಥಾ ಕಾಲ ಬಂತಪ್ಪಾ ಅಂತ ನಮಗೂ ಅನ್ನಿಸದೇ ಇರದು.

ಹಣ ಅಂದ್ರ ಹೆಣಾನೂ ಬಾಯಿ ತೆಗಿತದ ಅನ್ನೂ ಮಾತು ಎಲ್ಲರಿಗೂ ಗೊತ್ತದ. ಹಣದ ತಾಕತ್ ಅಂಥದ್ದು. ಅದಕ್ಕ ಅಂತಾರ ರೊಕ್ಕ ಇದ್ರ ಸಂತಿ ಅಂತ. ಹುಟ್ಟಿ ಛೋಟುದ್ದ ಬೆಳದಿರುದಿಲ್ಲ ಅಂಥ ಸಣ್ಣ ಸಣ್ಣ ಮಕ್ಕಳಿಗೂ ಹಣದ ಹುಚ್ಚು ಇರೋದನ್ನ ಕಾಣುತ್ತೇವೆ. ಮೊನ್ನೆ ನೋಟು ರದ್ದು ಆದವಲ್ಲಾ ಆಗ ತಿಜೋರಿಯೊಳಗ ಉಸಿರಾಡೋಕೆ ಬರದಂತೆ ಒತ್ತಿ ಒತ್ತಿ ಕುಂತಿದ್ದ ಐನೂರು ಸಾವಿರ ನೋಟುಗಳೆಲ್ಲ ರಸ್ತೆ ಪಾಲಾಗಿದ್ದವು.

ಗಂಟು ಕಟ್ಟಿದ ನೋಟುಗಳು ತಿಪ್ಪೆಯಲ್ಲೂ ಸಿಕ್ಕವು. ಕಣ್ಣು ಕಂಡಲೆಲ್ಲ ನೋಟಿನ ಕಂತೆಗಳು ನೋಟ ಬೀರಿದವು. ಪ್ರಪಂಚದ ಆಡಂಬರ ಚಿನ್ನ ಮುತ್ತು ರತ್ನ ವಜ್ರದ ಒಡವೆ ಒಳ್ಳೆಯ ಬಟ್ಟೆಗಳು ಇನ್ನೂ ಏನೇನೋ ಕೊಡಿಸುವ, ಬಯಸಿದ್ದನ್ನೆಲ್ಲ ಕ್ಷಣಾರ್ಧದಲ್ಲಿ ತಂದು ಕೊಡುವ ಕಾಮಧೇನುವಿನ ತಾಕತ್ತಿದ್ದ ನೋಟುಗಳೇ ಅನಾಥವಾಗಿ ಬೀದಿ ಪಾಲಾಗಿದ್ದವು.

ಪರರ ದುಡ್ಡು ಪಾಷಾಣಕ್ಕೆ ಸಮ ಅಂತಾರ. ಬಡವಿಯಾದರೂ ಶುದ್ಧ ಮನಸ್ಸುಳ್ಳ ಪಾರಮ್ಮಜ್ಜಿ ಮತ್ತೊಬ್ಬರ ದುಡ್ಡು ಹಾಳಾಗಿದ್ದಕ್ಕೆ ಖುಷಿ ಪಟ್ಟು ಆರಿಸಿಕೊಳ್ಳುತ್ತಿದ್ದಳು ಅದನ್ನು ಕಂಡ ನಾನು ಅನುಮಾನ ಮಿಶ್ರಿತ ಕುತೂಹಲದಿಂದ ಪಾರಮ್ಮಜ್ಜಿ ಮೊಮ್ಮಗಳನ್ನು ಕೇಳಿದೆ. ನಮ್ಮಜ್ಜಿಗೆ ಬೇರೆ ಯಾವುದರ ಮೇಲೂ ಮೋಹ ಇಲ್ಲ. ಆದರೆ ನಾಣ್ಯ ನೋಟು ಸಂಗ್ರಹದ ಮೇಲೆ ವಿಪರೀತ ಮೋಹ ತೂತು ಕಾಸಿನಿಂದ ಹಿಡಿದು ಅಣೆ ದುಡ್ಡು ಪೈಸೆ ಹೀಗೆ ತರಹೇವಾರಿ ನಾಣ್ಯಗಳನ್ನು ಸಂಗ್ರಹಿಸಿದ್ದಾಳೆ.

ತನ್ನ ಹತ್ತಿರವಿದ್ದ ಚಿಕ್ಕ ಚಿಕ್ಕ ನಾಣ್ಯಗಳನ್ನು ಕೊಟ್ಟು ನೋಟುಗಳನ್ನೂ ಸಂಗ್ರಹಿಸಿದ್ದಾಳೆ. ಒಮ್ಮೊಮ್ಮೆ ತನಗೆ ಆಹಾರವಿಲ್ಲದೇ ಪರದಾಡುವ ಸ್ಥಿತಿ ಬಂದಾಗಲೂ ಇವುಗಳನ್ನು ಬಳಸಿಕೊಂಡಿಲ್ಲ. ಇವಳ ನಾಣ್ಯ ಸಂಗ್ರಹದ ಹುಚ್ಚು ಕಂಡು ಇತರರು ತಮ್ಮಲ್ಲಿಯ ನೋಟು ನಾಣ್ಯ ಕೊಟ್ಟರೆ ಪುಕ್ಕಟ್ಟೆ ತೆಗೆದುಕೊಳ್ಳುವ ಜಾಯಮಾನದವಳು ಇವಳಲ್ಲ. ಪ್ರತಿಯಾಗಿ ತಾನು ದುಡಿದು ತಂದ ಕಾಳು ಕಡಿ ಕೊಟ್ಟಾಗಲೇ ಸಮಾಧಾನ.

ಇತ್ತೀಚಿಗೆ ಮೊಮ್ಮಗಳ ಕೂಲಿಯಿಂದಲೇ ಜೀವನ ಸಾಗಿಸಬೇಕಾದ ಅನಿವಾರ್ಯತೆ ಇದ್ದರೂ ತನ್ನ ಸಂಗ್ರಹದಲ್ಲಿರುವ ನೋಟುಗಳಿಗೆ ಕೈ ತಪ್ಪಿಯೂ ಕೈ ಹಚ್ಚಿಲ್ಲವಂತೆ. ಅದಾರೋ ಇವಳ ನಾಣ್ಯ ಸಂಗ್ರಹಕ್ಕೆ ಮಾರು ಹೋಗಿ ಇತ್ತೀಚಿಗೆ ಬಿಡುಗಡೆಯಾದ ಗುಲಾಬಿ ಬಣ್ಣದ ಎರಡು ಸಾವಿರ ನೋಟನ್ನು ಪ್ರೀತಿಯಿಂದ ಉಡುಗೊರೆಯಾಗಿ ಕೊಟ್ಟಿದ್ದಾರಂತೆ. ಅದನ್ನು ತನ್ನ ಸಂಗ್ರಹದ ಪಟ್ಟಿಗೆ ಸೇರಿಸಿಕೊಂಡು ಎಂಥ ಸಂಕಷ್ಟಗಳಲ್ಲೂ ಅದನ್ನು ಬಳಸದೇ ಇರುವುದು ಪಾರಮ್ಮಜ್ಜಿಯ ನೋಟು ನಾಣ್ಯ ಸಂಗ್ರಹದ ಮೇಲಿನ ಪ್ರೀತಿಯನ್ನು ಎತ್ತಿ ತೋರಿಸುತ್ತದೆ ಎಂದಳು.

ಇದೆಲ್ಲ ಕತೆ ಕೇಳಿ ಅಜ್ಜಿಯನ್ನೇ ಮಾತಿಗೆಳೆದೆ. “ಮನೆಯವರು ಅದೆಷ್ಟೇ ಕೇಳಿದರೂ ಜಪ್ಪಯ್ಯ ಎನ್ನದೇ ಸಂಗ್ರಹದಲ್ಲಿರುವ ನಾಣ್ಯ ನೋಟುಗಳನ್ನು ಜತನದಿಂದ ಕಾಪಾಡಿಕೊಂಡು ಬಂದಿದಿನಿ. ಯಾರು ಎಷ್ಟೇ ಪೀಡಿಸಿದರೂ, ಪ್ರತಿಯಾಗಿ ಹೆಚ್ಚು ಹಣ ಕೊಡುತ್ತೇನೆಂದರೂ ಸಂಗ್ರಹದಿಂದ ನಯಾಪೈಸೆಯನ್ನೂ ಹೊರ ಹೋಗಲು ಬಿಟ್ಟಿಲ್ಲ. ಎಂದು ಬಚ್ಚ ಬಾಯಿ ತೆರೆದು ಹೆಮ್ಮೆಯಿಂದ ಹೇಳಿದಳು. ತನ್ನ ಸಂಗ್ರಹದಲ್ಲಿರುವ ನೋಟು ನಾಣ್ಯ ಸಂಗ್ರಹಿಸಿದ ಹಿಂದಿರುವ ಕತೆಯನ್ನು ಬಿಚ್ಚಿಟ್ಟಳು. ಶಾಲೆಯ ಕಟ್ಟೆ ಹತ್ತದ ಪಾರಮ್ಮಜ್ಜಿ ತನಗರಿವಿಲ್ಲದೇ ನೋಟು ನಾಣ್ಯದ ಇತಿಹಾಸದ ಮೇಲೊಂದು ಬೆಳಕು ಚೆಲ್ಲಿದ್ದನ್ನು ಕಂಡು ಮನಸ್ಸು ಅವಳಿಗೆ ಕೋಟಿ ನಮನ ಸಲ್ಲಿಸಿತು.

ಹಣವನ್ನು ಕೇವಲ ನಮ್ಮ ಆಶೆ ಆಕಾಂಕ್ಷೆ ಈಡೇರಿಸುವ ವಸ್ತು ಎಂದು ಅದರ ಹಿಂದೆ ಬಿದ್ದಿರುವವÀರಿಗೆ, ನೋಟಿಗೆ ಅಂಟಿಕೊಂಡಿರುವ ಭಾವನಾತ್ಮಕ ಕತೆಗಳು ಅರ್ಥವಾಗುವುದು ಸುಲಭ ಅಲ್ಲ ಅನಿಸುತ್ತದೆ. ಆದರೂ ಮಾನವ ಭಾವ ಜೀವಿ ಎನ್ನುವುದನ್ನು ಮರೆಯುವಂತಿಲ್ಲ. ಸ್ವಾರ್ಥ ಲಾಭ ದೃಷ್ಟಿಯಿಂದ ನೋಡುವುದನ್ನು ಬಿಟ್ಟು ಭಾವದ ಹಿನ್ನೆಲೆಯಲ್ಲಿ ನಿಂತು ನೋಡಿದರೆ ನೋಟಿಗೆ ಅಂಟಿದ ಕತೆಗಳನ್ನು ಸುಲಭವಾಗಿ ಅರ್ಥೈಸಿಕೊಳ್ಳಬಹುದಲ್ಲವೇ? ಏನಂತಿರಿ. . . ?

ಲೇಖಕರುಃಜಯಶ್ರೀ.ಜೆ. ಅಬ್ಬಿಗೇರಿ.
ಆಂಗ್ಲ ಭಾಷಾ ಉಪನ್ಯಾಸಕರು.
ಹಿರೇಬಾಗೇವಾಡಿ. ತಾ: ಜಿ: ಬೆಳಗಾವಿ. 

Related Articles

Leave a Reply

Your email address will not be published. Required fields are marked *

Back to top button