ಹೆದ್ದಾರಿ ಪಕ್ಕದಲ್ಲಿ ತ್ಯಾಜ್ಯಃ ಪಾದಚಾರಿ, ವಾಹನ ಸವಾರರ ಆಕ್ರೋಶ
ಹೆದ್ದಾರಿ ಬಳಿ ಮೆಡಿಕಲ್ ತ್ಯಾಜ್ಯಃ ವಾಹನ ಸವಾರರ ಆಕ್ರೋಶ
yadgiri, ಶಹಾಪುರಃ ಕೊರೊನಾ ಮಹಾಮಾರಿ ಈಗಾಗಲೇ ಜನರನ್ನು ಹಣ್ಣುಗಾಯಿ ನೀರುಗಾಯಿ ಮಾಡಿದೆ. ಇಂತಹ ಸಂಕಷ್ಟದ ಸಮಯದಲ್ಲಿ ಸದಾ ಸ್ವಚ್ಛತೆ ಕಾಪಾಡಬೇಕಿದ್ದ ನಗರಸಭೆ ನಿರ್ಲಕ್ಷವಹಿಸಿದೆ. ನಗರದ ಜೀವೇಶ್ವರ ಕಲ್ಯಾಣ ಮಂಟಪದ ಮುಂದೆ ಹೆದ್ದಾರಿ ಪಕ್ಕದಲ್ಲಿಯೇ ಯಾವುದೋ ಮೆಡಿಕಲ್ ಅಂಗಡಿಯವರೊಬ್ಬರು ತ್ಯಾಜ್ಯ ಎಸೆದಿರುವದು ಪಾದಚಾರಿ ಮತ್ತು ವಾಹನ ಸವಾರರ ಆಕ್ರೋಶಕ್ಕೆ ಕಾರಣವಾಗಿದೆ.
ಹೆದ್ದಾರಿ ಪಕ್ಕದಲ್ಲಿಯೇ ಅಪಾರ ಪ್ರಮಾಣ ತ್ಯಾಜ್ಯ ಎಸೆದ ಪರಿಣಾಮ ಪಾದಚಾರಿಗಳು ಮತ್ತು ಸಂಚಾರಿ ವಾಹನಗಳ ಪ್ಲಾಸ್ಟಿಕ್ ಮತ್ತು ಮೆಡಿಸಿನ್ ಖಾಲಿ ಡಬ್ಬಿಗಳು ಗಾಳಿಗೆ ತೂರಿ ಬಂದು ಬೀಳುತ್ತಿದ್ದು, ಪ್ರತಿಯೊಬ್ಬರು ಹಿಡಿ ಶಾಪ ಹಾಕುತ್ತಿದ್ದಾರೆ.
ತ್ಯಾಜ್ಯದಲ್ಲಿ ಮೆಡಿಕಲ್ ಡಬ್ಬಿಗಳು, ಪ್ಲಾಸ್ಟಿಕ್ ಕ್ಯಾರಿ ಬ್ಯಾಗಗಳು ಗಾಳಿಗೆ ಹಾರಿ ಮೈಮೇಲೆ ಬಂದು ಬೀಳುತ್ತಿವೆ. ಹೀಗಾಗಿ ಪಾದಚಾರಿಗಳು, ವಾಹನ ಸವಾರರು ತಿಪ್ಪೆಯಲ್ಲಿ ಎಸೆದಿರುವ ಗಲೀಜು ಮೇಲೆ ಬೀಳುತ್ತಿದ್ದಂತೆ ಹೌಹಾರಿ ಶಪಿಸುತ್ತಿದ್ದಾರೆ. ಹೀಗಾಗಿ ನಗರಸಭೆ ಅಧಿಕಾರಿಗಳು ಇತ್ತ ಗಮನಹರಿಸಿ ರಸ್ತೆ ಪಕ್ಕದಲ್ಲಿಯೇ ಅಪಾರ ತ್ಯಾಜ್ಯ ವಿಲೇವಾರಿ ಮಾಡಿದ ಅಂಗಡಿಕಾರರನ್ನು ಗುರುತಿಸಿ ಸೂಕ್ತ ಕ್ರಮಕೈಗೊಳ್ಳಬೇಕೆಂದು ವಾಹನ ಸವಾರರು ಆಗ್ರಹಿಸಿದ್ದಾರೆ.
ಅಲ್ಲದೆ ತಕ್ಷಣಕ್ಕೆ ರಸ್ತೆ ಮೇಲೆ ಎಸೆದ ತ್ಯಾಜ್ಯ ವಿಲೇವಾರಿ ಮಾಡಬೇಕೆಂದು ನಾಗರಿಕರು ಮನವಿ ಮಾಡಿದ್ದಾರೆ.
ಕೊರೊನಾ ಸಂಕಷ್ಟಕಾಲದಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವ ಅಗತ್ಯವಿದೆ. ಮೈಮರೆತಲ್ಲಿ ಕೊರೊನಾ ಮಾರಿಗೆ ಪರಿತಪಿಸಬೇಕಾಗುತ್ತದೆ. ಈ ಕುರಿತು ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುವದು ಸರಿಯಲ್ಲ. ನಾಗರಿಕರು ಸಹ ಚಿಂತನೆ ಮಾಡುವ ಅಗತ್ಯವಿದೆ.