ಕನ್ನಡ ಸಾಹಿತ್ಯಕ್ಕೆ ಈ ನೆಲದ ಕೊಡುಗೆ ಅಪಾರ – ಡಾ. ಅಬ್ದುಲ್ ಕರೀಂ
ಯಾದಗಿರಿ, ಶಹಾಪುರಃ ಕನ್ನಡ ಸಾಹಿತ್ಯಕ್ಕೆ ಸುಮಾರು 2 ಸಾವಿರ ವರ್ಷಗಳ ಇತಿಹಾಸವಿದೆ. ಅಲ್ಲದೆ, ಕನ್ನಡ ಸಾಹಿತ್ಯಕ್ಕೆ ಉಪಲಬ್ಧ ಗ್ರಂಥ ದೊರಕಿದ್ದು, ಇದೇ ನಾಡಿನ ಕವಿರಾಜ ಮಾರ್ಗ ಕೃತಿಯಿಂದಲೇ ಎಂದು ಕನ್ನಡ ಉಪನ್ಯಾಸಕ ಡಾ.ಅಬ್ದುಲ್ ಕರೀಂ ಕನ್ಯಾಕೋಳೂರು ಹೇಳಿದರು.
ನಗರದ ಎಸ್.ಬಿ.ದೇಶಮುಖ ಕಾಲೇಜಿನಲ್ಲಿ ಜರುಗಿದ ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು ವತಿಯಿಂದ ನಡೆದ ಜಾಣ-ಜಾಣೆಯರ ಬಳಗದ ಸಾಹಿತ್ಯ ಮತ್ತು ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಓದು ಜೀವನದ ಬದುಕನ್ನೆ ಬದಲಾಯಿಸುತ್ತದೆ. ಎಷ್ಟೋ ಮನಸ್ಸುಗಳು ಪುಸ್ತಕ ಓದಿನಿಂದ ಪರಿವರ್ತನೆಯಾಗಿದ್ದಾರೆ. ಕಾರಣ ಓದುವ ಅಭಿರುಚಿ ಇರಬೇಕು. ಓದು ಒಂಟಿತನವನ್ನು ಕಳೆಯುತ್ತದೆ. ಆದರೆ ಓದುವಾಗ ಮನುಷ್ಯನಿಗೆ ಒಂಟಿತನ ಆವರಿಸಿರುತ್ತದೆ. ಅಂದರೆ ಬರಿ ಓದಿನಲ್ಲಿ ಮಗ್ನರಾಗಿರುತ್ತಾರೆ.
ತದನಂತರ ಸಂಪಾದಿಸಿದ ಜ್ಞಾನವನ್ನು ನಾಲ್ಕು ಜನರಿಗೆ ಹಂಚಿಕೆ ಮಾಡಲು ಸಾಧ್ಯವಾಗುತ್ತದೆ. ಮನುಷ್ಯ ಎಲ್ಲವನ್ನು ಖರೀದಿಸಬಹುದು ಆದರೆ ಜ್ಞಾನ ಖರೀಧಿಸಲು ಸಾಧ್ಯವಿಲ್ಲ ಎಂದರು. ಕಸಾಪ ಅಧ್ಯಕ್ಷ ಸಿದ್ದಲಿಂಗಣ್ಣ ಆನೇಗುಂದಿ ಮಾತನಾಡಿ, ಓದು ಶಿಕ್ಷಣ ನೌಕರಿ ಸಲುವಾಗಿ ಮಾತ್ರ ಎಂದುಕೊಳ್ಳದೆ, ನೈತಿಕ ಬದುಕಿಗಾಗಿ ಸತತ ಅಧ್ಯಯನ ಮಾಡಿ ಜೀವನದಲ್ಲಿ ಯಶಸ್ವಿ ಕಾಣಬೇಕು. ಕೇವಲ ಪಠ್ಯ ಶಿಕ್ಷಣ ಅಭ್ಯಾಸ ಮಾಡದೆ, ಸಾಹಿತ್ಯವಾಗಿ ಪುಸ್ತಕಗಳನ್ನು ಓದುವದನ್ನು ರೂಢಿಸಿಕೊಳ್ಳಬೇಕು ಎಂದರು.
ದೇಶಮುಖ ಕಾಲೇಜಿನ ಶಿವರಾಜ ದೇಶಮುಖ ಅಧ್ಯಕ್ಷತವೆಹಿಸಿದ್ದರು. ನಗರಸಭೆ ಉಪಾಧ್ಯಕ್ಷ ಡಾ.ಬಸವರಾಜ ಇಜೇರಿ, ರಾಜಕುಮಾರ, ಸುಧೀರ ಚಿಂಚೋಳಿ, ಬಸವರಾಜ ಸಿಣ್ಣೂರ, ಆನಂದರಡ್ಡಿ ಇತರರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಕೀರ್ತಿ, ನಿಂಗಮ್ಮ, ಅಂಬಿಕಾ ಪಾಟೀಲ, ಅಮಾತೆಪ್ಪ ಕಾರ್ಯಕ್ರಮದಲ್ಲಿ ಭಾಗವಹಿಸಿ ನಾಡಿನ ಹಿರಿಯ ಸಾಹಿತಿಗಳ ಕೃತಿಗಳ ಬಗ್ಗೆ ಅಭಿಪ್ರಾಯ ಮಂಡಿಸಿದರು. ಸುಷ್ಮಾ ಪ್ರಾರ್ಥಿಸಿದರು. ನಾಗರತ್ನ ಸ್ವಾಗತಿಸಿದರು. ಪ್ರಭುದೇವ ನಿರೂಪಿಸಿದರು. ರಾಮು ವಂದಿಸಿದರು.