ಸ್ಥಳೀಯ ಕಲಾವಿದರಿಗೆ ಪ್ರೋತ್ಸಾಹಿಸಿ-ಸಿದ್ಧೇಶ್ವರ ಶಿವಾಚಾರ್ಯರು
ವೀಕ್ಷಕರ ಗಮನ ಸೆಳೆದ ಸ್ಥಳೀಯ ಕಲಾವಿದರು
ಯಾದಗಿರಿ, ಶಹಾಪುರಃ ನಗರದ ಸಂಗೀತ, ಹಾಸ್ಯ ವಿವಿಧ ಕಲಾವಿದರು ಒಗ್ಗೂಡಿ ಸಂಗೀತ ಪಡೆಯನ್ನು ರಚಿಸಿಕೊಂಡು ಸ್ಥಳೀಯ ಕಲಾವಿದರನ್ನು ಗುರುತಿಸುವ ಕಾರ್ಯಕ್ಕೆ ಮುಂದಾಗಿದ್ದು ಸರ್ವರೂ ಇದಕ್ಕೆ ಪ್ರೋತ್ಸಾಹಿಸಿ ಬೆಳೆಸುವ ಕಾರ್ಯ ಮಾಡಬೇಕಿದೆ ಎಂದು ಗುಂಬಳಾಪುರ ಮಠದ ಸಿದ್ಧೇಶ್ವರ ಶಿವಾಚಾರ್ಯರು ತಿಳಿಸಿದರು.
ನಗರದ ಸಿಪಿಎಸ್ ಶಾಲಾ ಮೈದಾನದಲ್ಲಿ ಶನಿವಾರ ರಾತ್ರಿ ಅಕ್ಷಯ್ ಮೆಲೋಡಿಸ್ 2 ನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ ಆಯೋಜಿಸಿದ್ದ ಸ್ಥಳೀಯ ಪ್ರತಿಭೆಗಳನ್ನು ಗುರುತಿಸುವ ನಮ್ಮ ಊರು ನನ್ನ ಹಾಡು ಸಾಂಸ್ಕೃತಿಕ ರಸಮಂಜರಿ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು.
ಸ್ಥಳೀಯರಿಗೆ ಸೂಕ್ತ ವೇದಿಕೆ ಒದಗಿಸಿಕೊಟ್ಟಲ್ಲಿ ಸಾಕಷ್ಟು ಪ್ರತಿಭೆಗಳು ಹೊರಬರಲಿವೆ. ಹಾಸ್ಯ ಕಲಾವಿದರು ಸಹ ಈ ವೇದಿಕೆ ಮೇಲೆ ಕಾಣಬಹುದಾಗಿದೆ. ಉತ್ತಮ ಗಾಯಕರು ನೃತ್ಯ ಪಟುಗಳು, ಅಲ್ಲದೆ ಯೋಗ ಪಟುಗಳಿಗೂ ಸಹ ಇಲ್ಲಿ ಅವಕಾಶ ಕಲ್ಪಿಸಲಾಗಿದೆ. ಜಾನಪದ, ಸಿನಿಮಾ ಹಾಡುಗಾರರು ಇಲ್ಲಿದ್ದಾರೆ.
ಕಾರಣ ಸಾರ್ವಜನಿಕರು ಸ್ಥಳೀಯ ಕಲಾವಿದರನ್ನು ಗೌರವಿಸಿ ಅವರನ್ನು ಬೆಳೆಸುವ ಕಾರ್ಯಕ್ಕೆ ಕೈ ಜೋಡಿಸಬೇಕೆಂದು ಕರೆ ನೀಡಿದರು. ಪ್ರಸ್ತುತ ದಿನಮಾನಗಳಲ್ಲಿ ಸಾಕಷ್ಟು ಅವಕಾಶಗಳು ಬೆಂಗಳೂರ ಮೈಸೂರ ಭಾಗದಲ್ಲಿ ನಡೆಯುತ್ತಿವೆ. ಆ ಭಾಗದ ಕಲಾವಿದರನ್ನು ಮೀರಿಸುವ ಕಲಾ ಪ್ರತಿಭೆಗಳು ನಮ್ಮಲ್ಲಿದ್ದಾರೆ. ಆದರೆ ಅವರನ್ನು ಗುರುತಿ ಸೂಕ್ತ ವೇದಿಕೆ ಕಲ್ಪಿಸುವ ಕಾರ್ಯ ಮಾಡಬೇಕಿದೆ. ಆ ನಿಟ್ಟಿನಲ್ಲಿ ಎಲ್ಲರೂ ಸಹಕಾರ ಅತ್ಯಗತ್ಯ ಎಂದರು.
ಏಕದಂಡಿಗಿ ಮಠದ ಕಾಳಹಸ್ತೇಂದ್ರ ಶೀಗಳು ಮಾತನಾಡಿ, ಪ್ರತಿಯೊಬ್ಬರಲ್ಲಿ ಒಂದಿಲ್ಲೊಂದು ಕಲೆ ಅಡಗಿರುತ್ತದೆ. ಅದನ್ನು ಹೊರತೆಗೆಯುವದು ಒಂದು ಕಲೆ. ನಾನು ಯುವಕನಾಗಿದ್ದಾಗ ಅದ್ಭುತ ಗಾಯಕ ಎನಿಸಿಕೊಂಡಿದ್ದೆ. ಸಂಗೀತ ತುಮುಲು ಯಾರನ್ನು ಬಿಟ್ಟಿಲ್ಲ. ಈಗಲೂ ನಾನು ನಿಮ್ಮೆಲ್ಲರನ್ನು ಮೀರಿಸುವಂತೆ ಹಾಡಬಲ್ಲೆ ಎಂದು ಪಿ.ಬಿ.ಶ್ರೀನಿವಾಸ ಅವರು ಹಾಡಿದ ರವಿ ವರ್ಮಾನ ಕುಂಚದ ಕಲೆ ಕಲೆ ಹಾಡಾಗಿದೆ ಎಂಬ ಗೀತೆಯ ಎರಡು ಸಾಲನ್ನು ಹಾಡಿದರು.
ಅಲ್ಲದೆ ಆ ಹಾಡು ಹಾಡುವಾಗ ಪಿ.ಬಿ.ಶ್ರೀನಿವಾಸರ ತಾಯಿ ಮೃತಪಟ್ಟಿದ್ದರು. ಬೆಳಗ್ಗೆ ಮೃತಪಟ್ಟಿದ್ದರು ಸಂಜೆ ಗೀತೆಯನ್ನು ರಿಕಾರ್ಡ್ ಮಾಡಲಾಯಿತಂತೆ. ಆದಾಗ್ಯು ಅಷ್ಟೊಂದು ಅದ್ಭುತ ಹಾಡು ಅವರು ನಮಗೆ ನೀಡಿದ್ದಾರೆ. ತಾಯಿಯ ಸಾವಿನಲ್ಲೂ ಅವರು ತಮ್ಮ ಕಲೆಯನ್ನು ನಾಡಿನ ಜನತೆಗೆ ಉಣಬಡಿಸಿದ್ದಾರೆ ಅವರ ಸೇವೆ ಅನಂತ ಅನಂತ ಕೃತಜ್ಞತೆಗಳು ಸಲ್ಲಿಸುವ ಜೊತೆಗೆ ಆ ಹಾಡಿನ ಹಿಂದಿರುವ ರೋಚಕ ಕಥೆ ಬಿಚ್ಚಿಟ್ಟರು.
ಕಾರ್ಯಕ್ರಮವನ್ನು ಕಾಂಗ್ರೆಸ್ ಮುಖಂಡ ಅಂಬರೇಶಗೌಡ ದರ್ಶನಾಪುರ ಉದ್ಘಾಟಿಸಿದರು. ರಾಜಶೇಖರ ಪತ್ತಾರ ಪ್ರಾಸ್ತವಿಕವಾಗಿ ಮಾತನಾಡಿದರು. ಮುಖಂಡರಾದ ಸುರೇಂದ್ರ ಪಾಟೀಲ್ ಮಡ್ನಾಳ, ಬಸವರಾಜ ಹಿರೇಮಠ, ಕರವೇ ಉಕ ಅಧ್ಯಕ್ಷ ಶರಣು ಗದ್ದುಗೆ, ಪತ್ರಕರ್ತರ ಸಂಘದ ಅಧ್ಯಕ್ಷ ನಾರಾಯಣಾಚಾರ್ಯ ಸಗರ, ಮಾಜಿ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಗುರು ಕಾಮಾ ಇತರರು ಉಪಸ್ಥಿತರಿದ್ದರು. ಮೆಲೋಡಿಸ್ ಸಂಸ್ಥಾಪಕ ಬಾಲು.ಆರ್.ಕೆ. ಮತ್ತು ಅವರ ಗೆಳೆಯರ ಬಳಗ ವಿವಿಧ ಹಾಡುಗಳನ್ನು ಹಾಡುವ ಮೂಲಕ ರಂಜಿಸಿದರು.