ಕುರಿ ಸಾಕಾಣಿಕೆ ಮಾಡಿ ಆರ್ಥಿಕವಾಗಿ ಸದೃಢರಾಗಿ – ದರ್ಶನಾಪುರ
ಕುರಿ ಸಾಕಾಣಿಕೆದಾರರಿಗೆ ಪರಿಕರ ವಿತರಣೆ
ಯಾದಗಿರಿ, ಶಹಾಪುರಃ ಕುರಿ ಸಾಕಾಣಿಕೆ ಈಗ ದೊಡ್ಡ ಉದ್ಯಮವಾಗಿ ಬೆಳೆದಿದೆ. ಕುರಿ ಸಾಕಾಣಿಕೆಯಿಂದ ಆರ್ಥಿಕವಾಗಿ ಸದೃಢರಾಗಬಹುದು. ಕೃಷಿ ಕಾಯಕದ ಜೊತೆಗೆ ರೈತರು ಕುರಿ ಉದ್ಯಮವನ್ನು ಕೈಗೊಂಡಲ್ಲಿ ಕುಟುಂಬದ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ತಿಳಿಸಿದರು.
ನಗರದ ಪಶು ಸಂಗೋಪನಾ ಇಲಾಖೆಯ ಆವರಣದಲ್ಲಿ ಕುರಿ ಉಣ್ಣೆ ಅಭಿವೃದ್ದಿ ನಿಗಮ ಹಾಗೂ ತಾಲೂಕಾ ಪಶು ಸಂಗೋಪನಾ ಇಲಾಖೆಯ ಆಶ್ರಯದಲ್ಲಿ ಕುರಿ ಸಾಕಾಣಿಕೆದಾರರಿಗಾಗಿ ಲಘು ಶೆಡ್, ಟಾರ್ಚ್, ಸೋಲಾರ ಲ್ಯಾಂಪ್, ಹೊದಿಕೆ ಸೇರಿದಂತೆ ಅಗತ್ಯಗನುಗುಣವಾಗಿ ಒಟ್ಟು 8 ಪರಿಕರಗಳನ್ನು ವಿತರಿಸಿ ಅವರು ಮಾತನಾಡಿದರು.
ರಾಜ್ಯ ಕುರಿ ಉಣ್ಣೆ ನಿಗಮದಿಂದ ಕುರಿ ಸಾಕಾಣಿಕೆಗೆ ವಿವಿಧ ಯೋಜನೆಗಳಲ್ಲಿ ಸಹಾಯಧನ ನೀಡಲಾಗುತ್ತಿದ್ದು, ಕುರಿ ಸಾಕಾಣಿಕೆದಾರರು ಸದುಪಯೋಗ ಪಡೆದುಕೊಳ್ಳಬೇಕು. ಅಲ್ಲದೆ ಈಗಾಗಲೇ ಕುರಿಗಳು ನೈಸರ್ಗಿಕ ವಿಕೋಪಕ್ಕೆ ತುತ್ತಾಗಿ ಅಥವಾ ಅಪಘಾತದಲ್ಲಿ ಮೃತಪಟ್ಟಲ್ಲಿ ಜೀವ ವಿಮಾದೊಂದಿಗೆ ಸರ್ಕಾರ 5 ಸಾವಿರ ರೂ.ಗಳ ಸಹಾಯಧನ ನೀಡುತ್ತಿದೆ.
ಅಂದಿನ ಮುಖ್ಯಮಂತ್ರಿ ಸಿದ್ರಾಮಯ್ಯನವರ ಗಂಭೀರ ಚಿಂತನೆಗಳಿಂದ ಈ ಯೋಜನೆ ಜಾರಿಗೊಳಿಸುವ ಮೂಲಕ ಕುರಿ ಸಾಗಾಣಿಕೆದಾರರಿಗೆ ಜೀವ ಮತ್ತು ಬದುಕಿಗೆ ಆಸರೆ ನೀಡಿದ್ದಾರೆ ಎಂದರು.
ಮುಖ್ಯ ಅಥಿತಿಗಳಾಗಿ ಆಗಮಿಸಿದ್ದ ರಾಜ್ಯ ಕುರಿ ಮತ್ತು ಉಣ್ಣೆ ಮಹಾ ಮಂಡಳದ ನಿರ್ದೇಶಕ ಶಾಂತಗೌಡ ಮಾತನಾಡಿ, ಯಾದಗಿರಿ ಜಿಲ್ಲೆಗೆ ಒಟ್ಟು 400 ಪಲಾನುಭವಿಗಳಿಗೆ ಲಘು ಉಪಕರಣಗಳು ಮಂಜೂರಿಯಾಗಿದ್ದು, ಅದರಲ್ಲಿ ಶಹಾಪುರ ತಾಲೂಕಿಗೆ 200 ಪಲಾನುಭವಿಗಳಿಗೆ ಈ ಸೌಲಭ್ಯ ದೊರೆಯಲಿದೆ. ಸರ್ಕಾರದಿಂದ ವಿತರಿಸುವ ಈ ಉಪಕರಣಗಳನ್ನು ಪಡೆದುಕೊಂಡು ಆರ್ಥಿಕವಾಗಿ ಸಬಲರಾಗಬೇಕೆಂದು ತಿಳಿಸಿದರು.
ತಾಲೂಕಾ ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಷಣ್ಮುಖಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುರಿ ಸಾಕಾಣಿಕೆಗೆ ವಿವಿಧ ಯೋಜನೆಗಳಲ್ಲಿ ಹೆಚ್ಚು ಪ್ರಾತಿನಿಧ್ಯ ನೀಡಲಾಗುತ್ತಿದೆ. ಸಹಕಾರ ಸಂಘದ ಪಲಾನುಭವಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದರು. ಈ ಸಂದರ್ಭದಲ್ಲಿ ತಾಪಂ ಅಧ್ಯಕ್ಷ ನಾಗಣ್ಣ ಪೂಜಾರಿ, ಅಮರಣ್ಣ ಕೊಬ್ಬರಿ ಉಪಸ್ಥಿತರಿದ್ದರು.
ಹಿರಿಯ ಪಶು ವೈದ್ಯಕೀಯ ಸಹಾಯಕರು ಮತ್ತು ತಾಲೂಕಾ ಕುರಿ ಸಹಕಾರ ಸಂಘದ ಪದಾಧಿಕಾರಿಗಳು ಸರ್ವ ಸದಸ್ಯರು ಹಾಗೂ ಕುರಿ ಸಾಕಾಣಿಕೆದಾರರು ಭಾಗವಹಿಸಿದ್ದರು.