ದರ್ಶನಾಪುರ-ಶಿರವಾಳರ ಅಧಿಕಾರದಲ್ಲಿ ಕಾರ್ಯಕರ್ತರ ಕಡೆಗಣನೆ-ಯಾಳಗಿ ಆರೋಪ
ಕಾಂಗ್ರೆಸ್-ಬಿಜೆಪಿ ತೊರೆದು ನೂರಾರು ಕಾರ್ಯಕರ್ತರು ಜೆಡಿಎಸ್ ಸೇರ್ಪಡೆ
ಯಾದಗಿರಿ,ಶಹಾಪುರಃ ರಾಜಕೀಯ ಕ್ಷೇತ್ರದಲ್ಲಿ ದರ್ಶನಾಪುರ ಮತ್ತು ಶಿರವಾಳ ಮನೆತನ ಹಲವಾರು ವರ್ಷಗಳಿಂದ ವಿವಿಧ ಅಧಿಕಾರ ಅನುಭವಿಸುತ್ತಾ ಬಂದಿದ್ದು, ಪ್ರಸ್ತುತ ಅದೆ ಎರಡು ಮನೆತನದವರೇ ಶಾಸಕರಾಗಿ ನಾವೊಮ್ಮೆ ನೀವೊಮ್ಮೆ ಎನ್ನುವಂತೆ ಹೊಂದಾಣಿಕೆ ರಾಜಕೀಯಕ್ಕೆ ಈ ಎರಡು ಮನೆತನ ಹೆಸರಾಗಿದ್ದಾರೆ ಎಂದು ಜೆಡಿಎಸ್ ಮುಖಂಡ ಅಮೀನರಡ್ಡಿ ಯಾಳಗಿ ಆರೋಪಿಸಿದ್ದಾರೆ.
ತಾಲೂಕಿನ ಸಗರ ಗ್ರಾಮದಲ್ಲಿ ಶುಕ್ರವಾರ ನಡೆದ ಬಿಜೆಪಿ ಮತ್ತು ಕಾಂಗ್ರೆಸ್ ತೊರೆದು ಜೆಡಿಎಸ್ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಶಿರವಾಳ ಹಾಗೂ ದರ್ಶನಾಪುರ ಅವರ ಕಡೆಗಣನೆಯಿಂದ ಬೇಸತ್ತು ಸಾಕಷ್ಟು ಸಂಖ್ಯೆಯ ಕಾರ್ಯಕರ್ತರು ಜೆಡಿಎಸ್ ಪಕ್ಷ ಸೇರುತ್ತಿರುವದು ಒಳ್ಳೆಯ ಬೆಳವಣಿಗೆ. ಕ್ಷೇತ್ರದಲ್ಲಿ ಹಲವಾರು ಹಳ್ಳಿಗಳಿಂದ ಜನ ಜೆಡಿಎಸ್ ಸೇರ್ಪಡೆಯಾಗುತ್ತಿದ್ದಾರೆ. ತಮ್ಮನ್ನು ಕೈಗೊಂಬೆಯಾಗಿಸಿಕೊಂಡು ಚುನಾವಣೆಯಲ್ಲಿ ಮಾತ್ರ ಹತ್ತಿರ ಬಿಟ್ಟುಕೊಂಡು ನಂತರದ ದಿನಗಳಲ್ಲಿ ಒಂದು ದಿನವಾದರೂ ನಮ್ಮತ್ತ ತಿರುಗಿಯೂ ನೋಟದ ಇಂತಹ ನಾಯಕರನ್ನು ಜನರು ತಿರಸ್ಕರಿಸುತ್ತಿರುವದು ಉತ್ತಮ ಬೆಳವಣಿಗೆಯಾಗಿದೆ. ಹೀಗಾಗಿ ಕ್ಷೇತ್ರದಲ್ಲಿ ಜೆಡಿಎಸ್ ಬಲವರ್ಧನೆ ಹೆಚ್ಚುತ್ತಿದೆ.
ಮುಂಬರುವ ದಿನಗಳಲ್ಲಿ ರಾಜಕೀಯದಿಂದ ಅವಳಿ ಕುಟುಂಬಗಳನ್ನು ರಾಜಕೀಯದಿಂದ ನಿವೃತ್ತಿಗೊಳಿಸುವ ಸಂಘಟಿತ ಹೋರಾಟದ ಸಂಕಲ್ಪವಾಗಿದೆ. ಮುಂದಿನ ದಿನಗಳಲ್ಲಿ ಜಿಪಂ, ತಾಪಂ ಮತ್ತು ಗ್ರಾಪಂಗಳಲ್ಲಿ ಜೆಡಿಎಸ್ ತನ್ನ ಶಕ್ತಿ ತೋರಿಸಲಿದೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಬಸವರಾಜ ವಿಭೂತಿಹಳ್ಳಿ, ಬಸವರಾಜ ಹಾರಣಗೇಆ, ನಾಗಣಗೌಡ ಮಾಲಹಳ್ಳಿ, ವಿಠಲ್ ವಗ್ಗಿ, ಪ್ರದೀಪ ಪುರ್ಲೆ, ಹಯ್ಯಾಳಪ್ಪ ರಸ್ತಾಪುರ, ತಿರುಪತಿ ಹತ್ತಿಕಟಗಿ, ಅಮರೇಶ ಕಟ್ಟಿಮನಿ ಸೇರಿದಂತೆ ತಾಪಂ ಸದಸ್ಯ ಚಂದಪ್ಪ, ಗುರು ಸಜ್ಜನ, ದುರಣ್ಣ ಸೂಗೂರ, ಗಿರೀಶ, ಸಾಯಬಣ್ಣ ಸಿದ್ರಾ ಸೇರಿದಂತೆ ಮಲ್ಲಿಕಾರ್ಜುನ ವಿರುಪಾಪುರ ಇತರರಿದ್ದರು.