ಶಾಲಾ ಪುನಾರಂಭ ನಿರ್ಧಾರ ಸದ್ಯಕ್ಕೆ ಬೇಡ- ಕಕಯುಸೇನೆ
ಶಾಲಾ ಪುನಾರಂಭ ನಿರ್ಧಾರ ಸದ್ಯಕ್ಕೆ ಬೇಡ- ಕಕಯುಸೇನೆ
ಯಾದಗಿರಿ, ಶಹಾಪುರಃ ರಾಜ್ಯದಾದ್ಯಂತ ಕೋವಿಡ್-19 ವೈರಸ್ ವ್ಯಾಪಕವಾಗಿ ಹಬ್ಬುತ್ತಿರುವ ವೇಳೆ ಸರ್ಕಾರ ರಾಜ್ಯದಾದ್ಯಂತ ಶಾಲಾ ಪುನಾರಂಭ ಮಾಡಲು ಹೊರಟಿರುವದು ಸರಿಯಲ್ಲ. ಮಕ್ಕಳ ಆರೋಗ್ಯ ಹಿತ ದೃಷ್ಟಿಯಿಂದ ಇನ್ನೂ ಮೂರು ತಿಂಗಳುವರೆಗೂ ಸರ್ಕಾರ ಶಾಲಾ ಆರಂಭಿಸುವ ನಿರ್ಧಾರ ಕೈಬಿಡಬೇಕೆಂದು ಆಗ್ರಹಿಸಿ ಇಲ್ಲಿನ ಕಲ್ಯಾಣ ಕರ್ನಾಟಕ ಯುವ ಸೇನೆ ತಹಶೀಲ್ದಾರರ ಮೂಲಕ ಸಿಎಂ ಅವರಿಗೆ ಮನವಿ ಸಲ್ಲಿಸಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಸೇನೆ ಅಧ್ಯಕ್ಷ ಭೀಮಾಶಂಕರ ಕಟ್ಟಿಮನಿ, ಕೊರೊನಾ ಆತಂಕದಲ್ಲಿ ಜೀವನ ಕಳೆಯುತ್ತಿರುವ ಪಾಲಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಸಮ್ಮತಿಸಿರುವದಿಲ್ಲ. ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಜನಮಾನಸದಲ್ಲಿ ಕೊರೊನಾ ಭಯ ಮನೆ ಮಾಡಿದೆ. ಆತಂಕದಿಂದ ಪಾಲಕರು ಹೊರ ಬಂದಿಲ್ಲ. ಇಂತಹ ವೇಳೆ ಶಾಲೆ ಆರಂಭ ನಿರ್ಧಾರ ಸರಿಯಲ್ಲ. ಕನಿಷ್ಟ ಇನ್ನೂ ಮೂರು ತಿಂಗಳವರೆಗೂ ಶಾಲೆ ನಡೆಸುವದು ಬೇಡ. ಮಕ್ಕಳಿಗೆ ಬೇಕಿದ್ದರೆ ಆನ್ಲೈನ್ ವ್ಯವಸ್ಥೆ ಮಾಡಲಿ.
ಮಕ್ಕಳ ಆರೋಗ್ಯ ಬಹುಮುಖ್ಯವಾಗಿದ್ದು, ಸರ್ಕಾರ ಈ ಕುರಿತು ಸಮಾಲೋಚನೆ ನಡೆಸಬೇಕಿದೆ. ಪಾಲಕರ ಆತಂಕ ನಿವಾರಣೆಯಾದ ಮೇಲೆಯೇ ಶಾಲೆಗೆ ಮಕ್ಕಳು ಬರಲಿದ್ದಾರೆ ಎಂಬುದನ್ನು ಸರ್ಕಾರ ಗಮನಿಸಬೇಕಿದೆ ರಾಜ್ಯಾದಾದ್ಯಂತ ಮಹಾರಾಷ್ಟ್ರದಿಂದ ಲಕ್ಷಗಟ್ಟಲೇ ವಲಸಿಗರು ಬಂದಿದ್ದು, ಸದ್ಯ ಕೊರೊನಾ ಪಾಸಿಟಿವ್ ಪ್ರಕರಣಗಳಲ್ಲಿ ಹೆಚ್ಚಿನ ಪಾಲು ವಲಸೆ ಕಾರ್ಮಿಕರದ್ದೆ ಇದೆ. ಅದನ್ನು ಸಂಪೂರ್ಣ ನಿವಾರಣೆಯಾಗಿದೆ ಎನ್ನುವವರೆಗೂ ಪಾಲಕರಲ್ಲಿರುವ ಆತಂಕ ದೂರ ಮಾಡಲು ಸಾಧ್ಯವಿಲ್ಲ.
ಖಾಸಗಿ ಶಾಲಾ ಒಕ್ಕೂಟಗಳ ಒತ್ತಡಕ್ಕೆ ಸರ್ಕಾರ ಮಣಿದು ಶಾಲೆಗಳು ಆರಂಭಿಸಿದಲ್ಲಿ ಮುಂದೆ ಸಂಭವಿಸುವ ಗಂಭೀರ ಪರಿಣಾಮಗಳಿಗೆ ಸರ್ಕಾರವೇ ಜವಬ್ದಾರಿಯಾಗಲಿದೆ ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ರಾಮು ತಹಸೀಲ್, ಮಲ್ಲಿಕಾರ್ಜುನ ಕಟ್ಟಿಮನಿ, ಶಾರುಕ್, ಸಯ್ಯದ್, ನಿತೀನ್ ಕುಮಾರ, ಶಕೀಲ್, ರಡ್ಡಿ ಗುತ್ತಿಪೇಠ, ಸಮೀರ್, ಶಿವು, ಸಿದ್ದು ಕಟ್ಟಿಮನಿ ಇತರರಿದ್ದರು.