ಶಹಾಪುರಃ ದಬದಭೆ ಫಾಲ್ಸ್ ನಲ್ಲಿ ಜನವೋ ಜನ..!
ಕೊರೊನಾ ನಿಯಮ ಗಾಳಿಗೆ ತೂರಿ ಮೈಮರೆತು ಹಚ್ಚಹಸಿರು, ಹರಿಯುವ ನೀರಲ್ಲಿ ಮಿಂದೆದ್ದ ಜನತೆ
ಕೊರೊನಾದಿಂದ ಬೇಸತ್ತ ಜನತೆಗೆ ಮುದ ನೀಡಿದ ಫಾಲ್ಸ್..
yadgiri, ಶಹಾಪುರಃ ಶುಕ್ರವಾರ ರಾತ್ರಿ ಸುರಿದ ಧಾರಕಾರ ಮಳೆಯಿಂದಾಗಿ ನಗರದ ಸಗರಾದ್ರಿ ಬೆಟ್ಟದಲ್ಲಿ ಬರುವ ದಬದಭೆ ಫಾಲ್ಸ್ ಅಂತಲೇ ಕರೆಸಿಕೊಂಡಿರುವ ಸಿದ್ಧಲಿಂಗೇಶ್ವರ ಬೆಟ್ಟಕ್ಕೆ ಹೋಗುವ ಮಾರ್ಗ ಮಧ್ಯ ಬಲಗಡೆ ಅದ್ಭುತವಾಗಿ ವಿಶಾಲವಾಗಿ ಝುಳು ಝುಳು ಹರಿಯುವ ಕಲ್ಲು ಬಂಡೆಗಲ್ಲು ಮಧ್ಯ ಬಿಳಿನೊರೆ ಹಾಲಿನಂತೆ ಹುಕ್ಕಿ ಹರಿಯುತ್ತಿರುವ ತಾಣವೇ ದಬೆದಭೆ ಫಾಲ್ಸ್.
ದಬದಬಾ ಅಂಥ ನೀರು ಬೀಳುವ ಶಬ್ಧ ಬರುತ್ತಿರುವದಿಂದಲೋ ಏನೋ ಬಹುಕಾಲದಿಂದ ಇದಕ್ಕೆ ದಬೆದಭೆ ಅಂತಲೇ ಕರೆಯುತ್ತಾರೆ. ಇದಕ್ಕೀಗ ಹೊಸ ಜನರೇಷನ್ ಜನ ದಬದಭೆ ಫಾಲ್ಸ್ ಅಂತ ಕರೆಯುತ್ತಾರೆ. ಜೋರಾಗಿ ಮಳೆ ಬಂದರೆ ದಬದಭೆ ಫಾಲ್ಸ್ ಸಣ್ಣ ಜೋಗದಂತೆ ಮೈನವರಿಸಿಕೊಳ್ಳುತ್ತದೆ. ಹೀಗಾಗಿ ರವಿವಾರ ಸಹಸ್ರಾರು ಸಂಖ್ಯೆಯಲ್ಲಿ ಜನವೋ ಜನ ಈ ಪ್ರದೇಶದಲ್ಲಿ ಸೇರಿ ಕೊರೊನಾ ಎಂಬ ಮಹಾಮಾರಿಯನ್ನು ಅಲಕ್ಷಿಸಿ ನೀರಲ್ಲಿ ಮಿಂದೆದ್ದು ಖುಷಿಪಟ್ಟರು.
ಸತತ ಹದಿನೈದು ಇಪ್ಪತ್ತು ದಿನಗಳಿಂದ ದಿನ ಬಿಟ್ಟು ದಿನ ಮಳೆಯಾಗುತ್ತಿದ್ದು, ಮಲೆನಾಡಿನಂತೆ ಕಂಗೊಳಿಸುತ್ತಿರುವ ಬಿಸಲುನಾಡು, ಸಗರಾದ್ರಿ ಬೆಟ್ಟ ದೊಡ್ಡ ದೊಡ್ಡ ಬಂಡೆಗಲ್ಲು, ಕಲ್ಲು ಕಾಡಿನ ಮಧ್ಯೆ ಹಚ್ಚ ಹಸಿರು ಸೀರೆತೊಟ್ಟು ಸುಂದರವಾಗಿ ಭೂದೇವಿ ಕಂಗೊಳಿಸುತ್ತಿದ್ದು, ಎಂಥವರಾದರೂ ಮೈಮರೆಯುತ್ತಾರೆ.
ಹೀಗಾಗಿ ನಗರದ ನಾಗರಿಕರು ಮಕ್ಕಳು, ಫ್ಯಾಮಿಲಿ ಸಮೇತ ರವಿವಾರ ಪಿಕ್ ನಿಕ್ ಎಂದು ಬೆಟ್ಟಕ್ಕೆ ತೆರಳಿ ಮೋಜು ಮಸ್ತಿಯಲ್ಲಿ ಕಾಲ ಕಳೆದರು. ತಡ ಸಂಜೆಯಾದರೂ ಜನ ಸೇರುತ್ತಲೇ ಇರುವದು ಕಂಡು ಬಂದಿತು. ಈ ಸಂದರ್ಭದಲ್ಲಿ ಯಾರೊಬ್ಬರು ಮಾಸ್ಕ್, ಅಂತರ ಎಲ್ಲವೋ ಮರೀಚಿಕೆಯಾಗಿತ್ತು. ಮನೆಯಿಂದ ಕೆಲವೊಬ್ಬರು ಊಟ ತಂದಿದ್ದರೆ, ಕೆಲವೊಬ್ಬರು ಸ್ಥಳದಲ್ಲಿಯೇ ದೊರೆತ ಸ್ನ್ಯಾಕ್ಸ್ ಖರೀದಿಸಿ ತಿಂದರು. ಇಡಿ ಬೆಟ್ಟದಲ್ಲಿ ರವಿವಾರ ಜನಸ್ತೋಮವೇ ಹರಿದು ಬಂದಿತ್ತು.
ಕೊರೊನಾದಿಂದ ಶಾಲಾ ಕಾಲೇಜುಗಳು ರಜೆ ಇವೆ. ಮನೆಯಲ್ಲೂ ಕೊರೊನಾ ಭಯದಿಂದ ಕಳೆದ ಆರೇಳು ತಿಂಗಳಿಂದ ಎಲ್ಲೂ ಹೋಗಿಲ್ಲ. ಹೀಗಾಗಿ ಸ್ಥಳೀಯವಾಗಿ ಈ ಫಾಲ್ಸ್ ಮಳೆಗಾಲದಲ್ಲಿ ಕೈಬೀಸಿ ಕರೆಯುತ್ತದೆ. ಮಕ್ಕಳ ಒತ್ತಾಯಕ್ಕೆ ಬಂದಿದ್ದೇವೆ. ನೀರು ವಾತಾವರಣ ಹಚ್ಚಹಸಿರು ಫಾಲ್ಸ್ ನೋಡಿ ಮೈಪುಳುಕಿತಗೊಂಡಿದೆ. ಮಕ್ಕಳು ಖುಷಿಯಾಗಿ ಆಟವಾಡುವದನ್ನು ಕಂಡು ನಮಗೆಲ್ಲ ಸಂತೋಷವಾಗಿದೆ.
–ಮೇಘ ದೇಗನಾಳ. ಶಿಕ್ಷಕಿ.ಶಹಾಪುರ.