ಅಕ್ಕಪಕ್ಕದವರನೆಲ್ಲ ನಂಬಿಸಿ ಕೋಟಿ ಕೋಟಿ ವಂಚನೆ : ಹಣ ದೋಚಿ ತಾಯಿ-ಮಗಳು ಪರಾರಿ!
ಮಂಡ್ಯ : ಚೋರ್ ಗುರು ಚಂಡಾಲ್ ಶಿಷ್ಯ ಎಂಬ ಗಾದೆ ಮಾತಿಗೆ ಪುಷ್ಟಿ ಕೊಡುವಂತಹ ಘಟನೆಯೊಂದು ಮಂಡ್ಯದಲ್ಲಿ ನಡೆದಿದೆ. ಆದರೆ ಕೊಂಚ ಭಿನ್ನ. ಇಲ್ಲಿ ತಾಯಿ ಮಗಳು ಇಬ್ಬರೂ ಸೇರಿಕೊಂಡು ಅಕ್ಕ ಪಕ್ಕದ ಮನೆಯರನೆಲ್ಲ ನಂಬಿಸಿ ಕೋಟಿ ಕೋಟಿ ಹಣ ದೋಚಿ ರಾತ್ರೋ ರಾತ್ರಿ ಮನೆ ಬಿಟ್ಟು ಪರಾರಿಯಾಗಿದ್ದಾರೆ.
ತಾಯಿ-ಮಗಳ ಚಾಲಾಕಿತನಕ್ಕೆ ಹಲವು ಕುಟುಂಬಗಳು ಬೀದಿಗೆ ಬಿದ್ದಿವೆ. ಸದ್ಯ ತಾಯಿ, ಮಗಳಿಗಾಗಿ ತೀವ್ರ ಹುಡುಕಾಟ ನಡೆಯುತ್ತಿದೆ.
ಮಂಡ್ಯದ ಹೊಸಹಳ್ಳಿ ಬಡಾವಣೆಯ 5ನೇ ಕ್ರಾಸ್ ನಲ್ಲಿ ವಾಸವಾಗಿದ್ದ ಗಿರಿಜಮ್ಮ ಹಾಗೂ ಅವರ ಪುತ್ರಿ ದಿವ್ಯ ಎಂಬುವವರು ಅಕ್ಕಪಕ್ಕದವರ ವಿಶ್ವಾಸ, ನಂಬಿಕೆ ಗಳಿಸಿ ಅವರ ಹೆಸರಲ್ಲಿ ಸಾಲ ಪಡೆದು ದ್ರೋಹ ಬಗೆದಿದ್ದಾರೆ. ರಾತ್ರೋ ರಾತ್ರಿ ಪರಾರಿಯಾಗಿದ್ದಾರೆ ಎಂದು ಇಲ್ಲಿನ ಜನರು ಗಂಭೀರ ಆರೋಪ ಮಾಡಿದ್ದಾರೆ. ಕೋಟಿ ಕೋಟಿ ಹಣ ದೋಚಿ ಪರಾರಿಯಾದ ತಾಯಿ-ಮಗಳನ್ನು ಹುಡುಕಲು ಫ್ಲೆಕ್ಸ್ ಚಳವಳಿ ನಡೆಸಲಾಗುತ್ತಿದೆ. ನಗರದ ಪ್ರಮುಖ ವೃತ್ತಗಳಲ್ಲಿ ಫ್ಲೆಕ್ಸ್ ಹಾಕಿ ಆರೋಪಿಗಳ ಪತ್ತೆಗಾಗಿ ಹಾಗೂ ಮಾಹಿತಿಗಾಗಿ ಮನವಿ ಮಾಡಿದ್ದಾರೆ.
ಅಕ್ಕಪಕ್ಕದವರು ಸೇರಿದಂತೆ ನಂಬಿಕಸ್ಥರ ಹೆಸರಲ್ಲಿ ಕೋಟಿಗೂ ಹೆಚ್ಚು ಹಣವನ್ನು ತಾಯಿ-ಮಗಳು ಲೂಟಿ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ವಿವಿಧ ಸ್ತ್ರೀಶಕ್ತಿ ಸಂಘಗಳು, ಸ್ವ-ಸಹಾಯ ಸಂಘಗಳು, ಮೈಕ್ರೋ ಫೈನಾನ್ಸ್ ಗಳಲ್ಲಿ ಸಾಲ, ಸಂಘದ ಸದಸ್ಯರ ಹೆಸರಲ್ಲಿ, ನಂಬಿಕಸ್ಥರು, ಪರಿಚಯಸ್ಥರ ಹೆಸರಲ್ಲಿ ಮತ್ತು ನಾಮಿನಿಯಾಗಿ ಸಾಲ ಪಡೆದು ಸಾಲ ಮರು ಪಾವತಿಸದೆ ವಂಚಿಸಿ, ರಾತ್ರೋ ರಾತ್ರಿ ಮನೆ ಬಿಟ್ಟು ಪರಾರಿಯಾಗಿದ್ದಾರೆ ಎನ್ನಲಾಗುತ್ತಿದೆ. ತಾಯಿ-ಮಗಳ ಈ ಕಿಲಾಡಿ ಜೋಡಿ ಸಾಲದ ಮೊತ್ತ ಮರು ಪಾವತಿಸದ ಹಿನ್ನೆಲೆ ವಿವಿಧ ಸಂಘಗಳು, ಮೈಕ್ರೋ ಫೈನಾನ್ಸ್ಗಳು ಸಂಘದ ಸಹ ಸದಸ್ಯರು, ಸಾಲಕ್ಕೆ ಮಧ್ಯಸ್ಥಿಕೆ ವಹಿಸಿದ್ದವರ ದುಂಬಾಲು ಬಿದ್ದಿದ್ದಾರೆ.
ತಾಯಿ, ಮಗಳ ನಡೆಯಿಂದ 50ಕ್ಕೂ ಹೆಚ್ಚು ಬಡ ಕುಟುಂಬಗಳು ಬೀದಿಗೆ ಬಿದ್ದಿವೆ. ಕೂಲಿನಾಲಿ ಮಾಡಿ, ಸಣ್ಣಪುಟ್ಟ ವ್ಯಾಪಾರ, ವ್ಯವಹಾರ ನಡೆಸುತ್ತಿದ್ದ ಕುಟುಂಬಗಳು, ಮಹಿಳೆಯರನ್ನೇ ಈ ಕಿಲಾಡಿ ಜೋಡಿ ಟಾರ್ಗೆಟ್ ಮಾಡಿ ವಂಚಿಸಿದೆ ಎನ್ನಲಾಗಿದೆ. ಈ ಘಟನೆ ಸಂಬಂಧ ಮೋಸ ಹೋದವರು ಪೂರ್ವ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆದಷ್ಟು ಬೇಗ ತಾಯಿ-ಮಗಳನ್ನು ಪತ್ತೆ ಹಚ್ಚಿ ಎಂದು ಮನವಿ ಮಾಡಿದ್ದಾರೆ.