ಪ್ರಮುಖ ಸುದ್ದಿ

ರಾಜ್ಯದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ: ಸಿಎಂ ವಿರುದ್ಧ ಅನಂತಕುಮಾರ್ ವಾಗ್ದಾಳಿ

ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದು ರಾಜ್ಯದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಹೇರಿದ್ದಾರೆ. ಸಿಎಂ ಅವರ ಅಕ್ರಮದ ಬಗ್ಗೆ ಮಾತನಾಡಿದರೆ ಅಧಿಕಾರ ದುರ್ಬಳಕೆ ಮಾಡಿಕೊಂಡು ನಮ್ಮ ಮೇಲೆ ಭ್ರಷ್ಟಾಚಾರ ನಿಗ್ರಹ ದಳ ಬಳಸಿಕೊಂಡು ಎಫ್ ಐ ಆರ್ ದಾಖಲಿಸಲಾಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಅನಂತಕುಮಾರ್ ಹೇಳಿದ್ದಾರೆ. ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ. ಹೈಕಮಾಂಡ್ ಗೆ ಕಪ್ಪ ನೀಡಿರುವ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಕೇಂದ್ರ ಸಚಿವ ಅನಂತಕುಮಾರ್ ಹಾಗೂ ಮಾಜಿ ಸಿಎಂ, ಬಿಜೆಪಿ ರಾಜ್ಯದ್ಯಕ್ಷ ಬಿ.ಎಸ್.ಯಡಿಯೂರಪ್ಪ ಮಾತನಾಡಿಕೊಂಡಿದ್ದರು. ಆ ಬಗ್ಗೆ ಎಫ್ ಎಸ್ ಎಲ್ ವರದಿ ನೀಡಿದ್ದು ಬಿಎಸ್ ವೈ ಮತ್ತು ಅನಂತಕುಮಾರ್ ಅವರ ಧ್ವನಿಯನ್ನು ಖಚಿತ ಪಡಿಸಿದೆ. ಎಫ್ ಎಸ್ ಎಲ್ ವರದಿ ಆಧರಿಸಿ ಭ್ರಷ್ಟಾಚಾರ ನಿಗ್ರಹ ದಳದ ಮೂಲಕ ತನಿಖೆ ನಡೆಸಲು ರಾಜ್ಯ ಸರ್ಕಾರ ಮುಂದಾಗಿದೆ.

ಕೇವಲ ರಾಜಕೀಯ ಸೇಡಿಗಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಎಸಿಬಿಯಲ್ಲಿ ಎಫ್ ಐ ಆರ್ ದಾಖಲಾಗುವಂತೆ ನೋಡಿಕೊಂಡಿದ್ದಾರೆ. ನಮ್ಮ ಪ್ರಕರಣದಲ್ಲಿ ಕೇವಲ 15ದಿನಗಳಲ್ಲಿ ವರದಿ ಬರುವಂತೆ ನೋಡಿಕೊಂಡಿದ್ದಾರೆ. ಆದರೆ, ಮಾಜಿ ಡಿವೈಎಸ್ಪಿ ಅನುಪಮಾ ಶಣೈ, ಗಣಪತಿ ಪ್ರಕರಣದಲ್ಲಿ ಮಾತ್ರ ವರ್ಷವಾದರೂ ವರದಿ ಬಂದಿಲ್ಲ. ಅಸಲಿಗೆ ಎಫ್ ಎಸ್ ಎಲ್ ವರದಿ ಆಧರಿಸಿ ಎಸಿಬಿಯಲ್ಲಿ ನಮ್ಮ ವಿರುದ್ಧ ಎಫ್ ಐ ಆರ್ ದಾಖಲಿಸಿರುವುದೇ ಪ್ರಶ್ನಾರ್ಹವಾಗಿದೆ. ಅಧಿಕಾರ ದುರ್ಬಳಕೆ ಮಾಡಿಕೊಂಡು ವಿಪಕ್ಷಗಳ ನಾಯಕರುಗಳನ್ನು ಬಗ್ಗು ಬಡೆಯುವ ಕೆಲಸ ಸಿದ್ಧರಾಮಯ್ಯ ಸರ್ಕಾರದಿಂದ ನಡೆಯುತ್ತಿದೆ. ನಾವು ಸಿದ್ಧರಾಮಯ್ಯ ಅವರ ಈ ಕುತಂತ್ರಕ್ಕೆಲ್ಲ ಹೆದರಲ್ಲ, ಬಗ್ಗಲ್ಲ. ಬದಲಾಗಿ ವಿಧಾನ ಮಂಡಲ ಮತ್ತು ಕೋರ್ಟ್ ಮೂಲಕ ಸೂಕ್ತ ಉತ್ತರ ನೀಡುತ್ತೇವೆ ಎಂದು ಕೇಂದ್ರ ಸಚಿವ ಅನಂತಕುಮಾರ್ ಹೇಳಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button