
ದಿನಕ್ಕೊಂದು ಕಥೆ
ಹೋಳಿ ಹಬ್ಬದ ಮಹತ್ವ ಹಾಗೂ ಹಿನ್ನೆಲೆ
ಇಂದು ಭಾರತದಾದ್ಯಂತ ಹೋಳಿ ಹಬ್ಬವನ್ನು ಸಂಭ್ರಮ ಸಡಗರದಿಂದ ಎಲ್ಲರೂ ಆಚರಿಸುತ್ತಾರೆ. ಯಾವುದೇ ಜಾತಿ ಮತಗಳ ಭೇದವಿಲ್ಲದೆ ಒಟ್ಟಾಗಿ ಸೇರಿ ಬಣ್ಣಗಳ ಓಕುಳಿಯಾಟದಲ್ಲಿ ಮಿಂದೇಳುತ್ತಾರೆ. ಹಿಂದು ಅಥವಾ ಭಾರತೀಯ ಪರಂಪರೆಯಲ್ಲಿ ಹಬ್ಬಗಳು ತನ್ನದೇ ಆದ ಆಚಾರ, ಸಂಪ್ರದಾಯಗಳನ್ನು ಹೊಂದಿವೆ. ಅದೇ ರೀತಿ ಹೋಳಿ ಹಬ್ಬವು ಸಹ ಬಣ್ಣಗಳ ಹಬ್ಬವಾಗಿದ್ದು, ದೂರದ ಊರಿನವರು ತಮ್ಮ ತಾಯ್ನಾಡಿಗೆ ಬಂದು ಈ ಹಬ್ಬವನ್ನು ಆಚರಿಸುತ್ತಾರೆ. ಈ ಹಬ್ಬವನ್ನು ವಸಂತ ಮಾಸದಲ್ಲಿ ಆಚರಿಸಲಾದ, ಚಳಿಗಾಲದ ಕೊನೆಯನ್ನು ವಸಂತದ ಆಗಮನವನ್ನು ಸಾರುವ ಹಬ್ಬವಾಗಿದೆ. ಜನರು ಬಣ್ಣಗಳನ್ನು ಪರಸ್ಪರ ಎರಚಿಕೊಳ್ಳುವ ಮೂಲಕ ಈ ಹಬ್ಬವನ್ನು ಆಚರಿಸುತ್ತಾರೆ.
ಹೋಳಿ ಹಬ್ಬವನ್ನು ದಿನದಂದು ಮಕ್ಕಳಿಂದ ದೊಡ್ಡವರ ತನಕ ಸಂಭ್ರಮ ಸಡಗರದಿಂದ ಆಚರಿಸುತ್ತಾರೆ. ಈ ಹಬ್ಬದ ಆಚರಣೆಯಲ್ಲಿ ದಿನ ಕಾಮನ ಸುಂದರ ಪ್ರತಿಮೆ ಮಾಡಿ ಶೃಂಗರಿಸಿ ಊರಿನ ಕಾಮನ ಕಟ್ಟೆಯ ಮೇಲೆ ಚಪ್ಪರ ಕಟ್ಟಿ, ಕಾಮನ ಮುಂದೆ ಮಂಗಳ ವಾದ್ಯಗಳನ್ನು ಊದುತ್ತ, ಪರಸ್ಪರ ಬೈಗುಳ, ಬಣ್ಣದ ನೀರು, ಸಗಣಿಯ ಗಂಜಲಗಳನ್ನು ಎರಚುತ್ತಾ ಆಚರಿಸುತ್ತಾರೆ.
ಹೋಳಿಯ ಹಿನ್ನೆಲೆ :—
ಪೂರ್ವದಲ್ಲಿ ತಾರಕಾಸುರನೆಂಬ ರಾಕ್ಷಸನಿದ್ದ. ಆತ ದುರಹಂಕಾರಿಯೂ ಹಾಗೂ ಕ್ರೂರಿಯೂ ಆಗಿದ್ದ, ತಾರಕಾಸುರ ತನಗೆ ಸಾವು ಬರದಿರಲಿ ಎಂದು ತಪಸ್ಸು ಮಾಡಿದ. ಆಗ ಬ್ರಹ್ಮ ಪ್ರತ್ಯಕ್ಷನಾಗುತ್ತಾನೆ. ಆಗ ನನಗೆ ಮರಣ ಬಾರದಿರಲಿ, ಬಂದರೂ ಅದು ಶಿವನಿಗೆ ಜನಿಸಿದ ಏಳು ದಿನದ ಶಿಶುವಿನಿಂದ ಬರಲಿ ಎಂಬ ವರವನ್ನು ಕೇಳಿದ. ತಾರಕಾಸುರನ ತಪ್ಪಸ್ಸನ್ನು ಮೆಚ್ಚಿ ಬ್ರಹ್ಮ ವರವನ್ನು ಕೊಡುತ್ತಾನೆ. ಆಗ ತನಗೆ ವರ ಸಿಕ್ಕಿದೆ ಎಂದು ತಾರಕಾಸುರ ಮೆರೆಯುತ್ತಿರುತ್ತಾನೆ. ಇತ್ತ ಭೋಗ ಸಮಾಧಿಯಲ್ಲಿದ್ದ ಶಿವ, ಪಾರ್ವತಿಯ ಜೊತೆ ಸಮಾಗಮ ಹೊಂದಲು ಸಾದ್ಯವಿರಲಿಲ್ಲ. ಆಗ ದೇವತೆಗಳು ಪಾರ್ವತಿಯಲ್ಲಿ ಮೋಹ ಹೊಂದುವಂತೆ ಮಾಡಲು ಕಾಮನಲ್ಲಿ ಬೇಡಿದರು. ಕಾಮ ಅಂದರೆ (ಮನ್ಮಥ) ಮತ್ತು ಅವನ ಪತ್ನಿ ರತಿದೇವಿ ಈ ಸತ್ಕಾರ್ಯಕ್ಕೆ ಒಪ್ಪಿದ್ದರು. ಈ ವೇಳೆ ಭೋಗಸಮಾಧಿಯಲ್ಲಿದ್ದ ಶಿವನಿಗೆ ಹೂ ಬಾಣಗಳಿಂದ ಹೊಡೆದು ಸಮಾಧಿಯಿಂದ ಎಚ್ಚರಿಸಿದರು. ಇದರಿಂದ ಕುಪಿತಗೊಂಡ ಶಿವನು ತನ್ನ ಮೂರನೇ ಕಣ್ಣಿಂದ ಕಾಮನನ್ನು ಸುಟ್ಟು ಭಸ್ಮ ಮಾಡಿದ. ರತಿದೇವಿ ದು:ಖದಿಂದ ಶಿವನಲ್ಲಿ ಪತಿಭಿಕ್ಷೆಯನ್ನು ಬೇಡಿದಳು. ಶಾಂತಗೊಂಡ ಶಿವನು ಪತ್ನಿಯೊಡನೆ ಮಾತ್ರ ಶರೀರಿಯಾಗುವಂತೆ ಕಾಮನಿಗೆ ವರ ಕೊಟ್ಟನು. ಲೋಕಕಲ್ಯಾಣಕ್ಕಾಗಿ ಮನ್ಮಥನು ಅನಂಗನಾದ. ಈ ಘಟನೆ ನಡೆದದ್ದು ಫಾಲ್ಗುಣ ಶುದ್ಧ ಪೂರ್ಣಿಮೆಯಂದು. ಆದ್ದರಿಂದ ಈ ದಿನವನ್ನು “ಕಾಮನ ಹುಣ್ಣಿಮೆ”ಯಾಗಿ ಆಚರಿಸಲ್ಪಡುತ್ತದೆ.
ಮತ್ತೊಂದು ಕಥೆ :–
ಹಿರಣ್ಯಕಶಿಪುವಿನ ಸಹೋದರಿ ಹೋಲಿಕಾ ಇದ್ದಳು. ಹಿರಣ್ಯಕಶಿಪು ತನ್ನ ರಾಜ್ಯದಲ್ಲಿ ದೇವರನ್ನು ಪೂಜಿಸುವುದನ್ನು ನಿಷೇಧಿಸಿದ್ದು, ತನ್ನನ್ನೇ ದೇವರೆಂದು ಪೂಜಿಸುವಂತೆ ಆದೇಶಿಸಿದ. ಆದರೆ ಆತನ ಮಗ ಪ್ರಹ್ಲಾದ ವಿಷ್ಣು ದೇವರ ಪರಮ ಭಕ್ತನಾಗಿದ್ದನು. ತಾನು ಎಷ್ಟೆ ಪ್ರಯತ್ನ ಮಾಡಿದರು ಮಗನಿಂದ ವಿಷ್ಣು ದೇವರ ಆರಾಧಾನೆಯನ್ನು ನಿಲ್ಲಿಸಲು ಸಾಧ್ಯವಾಗಿಲ್ಲ. ಕೊನೆಗೆ ಹಿರಣ್ಯಕಶಿಪು ತನ್ನ ಮಗನನ್ನು ದಂಡಿಸಲು ತೀರ್ಮಾನಿಸುತ್ತಾನೆ. ಆಗ ಬೆಂಕಿಯು ಸುಡದಂತೆ ವರವನ್ನು ಪಡೆದಿದ್ದ ತನ್ನ ತಂಗಿ ಹೋಲಿಕಾಳ ಸಹಾಯವನ್ನು ಹಿರಣ್ಯಕಶಿಪು ಪಡೆಯುತ್ತಾನೆ. ಹಿರಣ್ಯಕಶಿಪು ತನ್ನ ಮಗನನ್ನು ಆಕೆಯ ತೊಡೆಯ ಮೇಲೆ ಕೂರಿಸಿಕೊಳ್ಳುವಂತೆ ತಂಗಿಯಲ್ಲಿ ಕೇಳಿದ. ಹೋಲಿಕಾ ಅಣ್ಣನ ಆಜ್ಞೆಯಂತೆ ಪ್ರಹ್ಲಾದನನ್ನು ತನ್ನ ತೊಡೆಯ ಮೇಲೆ ಕೂರಿಸಿಕೊಳ್ಳುತ್ತಾಳೆ. ಆದರೆ ಈ ಪಾಪಕೃತ್ಯವನ್ನು ಹೋಲಿಕಾ ಮಾಡಿದ್ದರಿಂದಾಗಿ, ಆಕೆಯ ವರ ನಿಷ್ಫಲವಾಗುತ್ತದೆ. ಇದರಿಂದ ಹೋಲಿಕಾ ಸುಟ್ಟು ಬೂದಿಯಾಗುತ್ತಾಳೆ. ಪ್ರಹ್ಲಾದ ಸುರಕ್ಷಿತವಾಗಿ ಬೆಂಕಿಯಿಂದ ಹೊರಬರುತ್ತಾನೆ. ಅದಕ್ಕಾಗಿ ಪ್ರತೀ ವರ್ಷ ಹೋಲಿಯ ಮುನ್ನ ಹಿಂದೂ ಮನೆಗಳಲ್ಲಿ ಹೋಲಿಕನನ್ನು ಸುಡುತ್ತಾರೆ.
ಈ ಹಬ್ಬ ಮನೆಯ ಪ್ರತಿಯೊಬ್ಬ ಸದಸ್ಯರನ್ನು ಒಂದುಗೂಡಿಸುತ್ತದೆ ಮತ್ತು ಹಬ್ಬದ ಸಡಗರವನ್ನು ಪ್ರತಿಯೊಬ್ಬರಲ್ಲಿ ತುಂಬುತ್ತದೆ. ಕೆಟ್ಟದ್ದು ಒಳ್ಳೆಯದರ ಮುಂದೆ ತಲೆಬಾಗಲೇಬೇಕು ಎಂಬ ಸಂದೇಶವನ್ನು ಹೋಳಿ ಹಬ್ಬ ಸಾರುತ್ತದೆ. ದುಷ್ಕ್ರತ್ಯಗಳು ದೇವರ ಶಕ್ತಿಯ ಎದುರು ಎಂದಿಗೂ ಜಯವನ್ನು ಪಡೆಯಲು ಸಾಧ್ಯವಿಲ್ಲ ಎಂಬುದು ಈ ಹಬ್ಬದ ಸಾರ. ಹೋಲಿಕನಂತೆ ಕೆಟ್ಟ ಶಕ್ತಿಗಳು, ದುಷ್ಟ ಆಲೋಚನೆಗಳು ನಾಶವಾಗಿ ಹೊಸದರ ಪ್ರಾರಂಭದ ಕಡೆಗೆ ಮನುಷ್ಯರು ಹೋಗುತ್ತಾರೆ.
ಜೀವನವು ಎಂದೆಂದಿಗೂ ವರ್ಣಮಯವಾಗಿರಲಿ, ಬಣ್ಣದ ವರ್ಣಗಳು ಜೀವನದಲ್ಲಿ ಸೃಜನಶೀಲತೆ ಮತ್ತು ಹೊಸತನವನ್ನು ತರಲಿ. ಈ ಬಣ್ಣ ನಿಮ್ಮ ಬದುಕಿನಲ್ಲಿ ಎಂದೆಂದೂ ಮಾಸದಿರಲಿ ಎಂದು ಆಶಿಸುತ್ತ, ನಿಮಗೆ ಅತ್ಯಂತ ಸಂತೋಷದಾಯಕ ಹೋಳಿ ಶುಭಾಶಯಗಳು
ಸಂಗ್ರಹ
*ಡಾ.ಅಭಿನವ ರಾಮಲಿಂಗ ಶಿವಶರಣ ಮಹಾಸ್ವಾಮೀಜಿ.*
– 9341137882.