BREAKING ಶಹಾಪುರದಲ್ಲಿ ಚಿರತೆ ಶವ ಪತ್ತೆಃ ಗಾಬರಿಗೊಂಡ ಜನತೆ
ಮುಖ್ಯ ಕಾಲುವೆಯಲ್ಲಿ ತೇಲಿ ಬಂದ ಚಿರತೆ ಶವ ಪತ್ತೆ
ಮುಖ್ಯ ಕಾಲುವೆಯಲ್ಲಿ ತೇಲಿ ಬಂದ ಚಿರತೆ ಶವ ಪತ್ತೆ
ವಿನಯವಾಣಿ ಸಮಾಚಾರ
ಶಹಾಪುರಃ ತಾಲೂಕಿನ ಭೀಮರಾಯನ ಗುಡಿ – ಗೋಗಿ ಮಧ್ಯದಲ್ಲಿರುವ ಮುಖ್ಯ ಕಾಲುವೆ ಬೋರುಕಾ ಪವರ್ ಪ್ಲಾಂಟ್ ( ಸ್ಕೀಮ್ 3) ಗೇಟ್ ಗೆ ತಗುಲಿಕೊಂಡು ಗಂಡು ಚಿರತೆಯ ಶವ ಕಾಣಿಸಿಕೊಂಡಿದ್ದು ನಗರದ ಜನತೆ ದಂಗಾಗಿದ್ದಾರೆ.
ಚಿರತೆ ನೀರಿನ ದಾಹ ತೀರಿಸಿಕೊಳ್ಳಲು ಬುಧವಾರ ರಾತ್ರಿಯೇ ಕಾಲುವೆಗೆ ಇಳಿದಿದೆ, ಆಗ ನೀರು ಕುಡಿಯುವ ತವಕದಲ್ಲಿ ಕಾಲುವೆಗೆ ಬಿದ್ದಿದ್ದು, ಮೇಲೇರದಾಗದೆ ಹರಿದುಕೊಂಡು ಬಂದಿರುವ ಸಾಧ್ಯತೆ ಇದ್ದು ಈ ಸಮಯದಲ್ಲಿ ಹೆಚ್ಚಿನ ನೀರು ಕುಡಿದು ಕುಡಿದು ಉಸಿರುಗಟ್ಟಿ ಮೃತಪಟ್ಟಿರುವ ಶಂಕೆಯನ್ನು ಅರಣ್ಯಾಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
ಘಟನೆ ವಿವರಃ ನಾಲ್ಕರಿಂದ ಐದು ವರ್ಷದ ಗಂಡು ಚಿರತೆ ಯೊಂದು ಬುಧವಾರ ರಾತ್ರಿ ಮುಖ್ಯ ಕಾಲುವೆಗೆ ಬಿದ್ದ ಪರಿಣಾಮ ಮೇಲೇರಲು ಯತ್ನಿಸಿ ವಿಫಲವಾಗಿ, ನೀರಿನ ರಭಸಕ್ಕೆ ಹರಿದುಕೊಂಡು ಬಂದು, ವಿಪರೀರ ನೀರು ಕುಡಿದಿರುವ ಹಿನ್ನೆಲೆ ಸಾವನ್ನಪ್ಪಿದೆ.
ಶಹಾಪುರದಿಂದ 7 ಕಿ.ಮಿ. ಅಂತರದಲ್ಲಿರುವ ಮುಖ್ಯ ಕಾಲುವೆಯ ಬೋರುಕಾ ಪವರ್ ಪ್ಲಾಂಟ್ ಸ್ಕೀಮ್ 3 ಯ ಗೇಟಿಗೆ ಬಂದು ನಿಂತ ಚಿರತೆ ಶವ ಕಂಡು ಜನರು ಗಾಬರಿಯಾಗಿದ್ದಾರೆ. ಗುರುವಾರ ಬೆಳಿಗ್ಗೆ ಬೋರುಕ ಪವರ್ ಪ್ಲಾಂಟ್ ಸಿಬ್ಬಂದಿ ಗಳು ನೋಡಿ ಅರಣ್ಯ ಇಲಾಖೆಗೆ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ಪಡೆದ ತಕ್ಷಣ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಹಿರಿಯ ಅಧಿಕಾರಿಗಳಿಗೆ ಮಾಹಿತಿ ರವಾನಿಸಿದ್ದಾರೆ. ಹಿರಿಯ ಅಧಿಕಾರಿಗಳು ಮತ್ತು ಪೊಲೀಸ್ ಹಾಗೂ ಸರ್ಕಾರೇತರ ಸಂಸ್ಥೆಯ ಮುಖಂಡರ ಸಮಕ್ಷಮದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.
ಚಿರತೆಯ ಮರಣೋತ್ತರ ಪರೀಕ್ಷೆ ನಡೆಸಿದ ಅರಣ್ಯ ಇಲಾಖೆಯ ಡಾ. ಅಣ್ಣಾರಾವ್ ಪಾಟೀಲ್, ಡಾ. ರಾಜು ರಾಠೋಡ್, ಚಿರತೆಯ ದೇಹದ ಕೆಲವು ಭಾಗಗಳನ್ನು ಹೈದ್ರಾಬಾದಿನ ಸಿಸಿಎಂಬಿ ಲ್ಯಾಬಿಗೆ ಕಳುಹಿಸಿ ಕೊಡಲಾಗಿದೆ ಎಂದು ವೈದ್ಯರು ತಿಳಿಸಿದರು.
ಈ ಸಂದರ್ಭದಲ್ಲಿ, ಪಶು ಚಿಕಿತ್ಸಾಲಯದ ಸಹಾಯಕ ನಿರ್ದೇಶಕ ಡಾ.ಅಣ್ಣಾರಾವ್ ಪಾಟೀಲ್, ಡಾ.ರಾಜು ರಾಠೋಡ್, ಸುರಪುರ ವಲಯ ಅರಣ್ಯ ಅಧಿಕಾರಿ ಭಾಗಪ್ಪಗೌಡ, ಗೋಗಿ ಪಿಎಸ್ಐ ಶಿವರಾಜ್ ಪಾಟೀಲ್, ಉಪ ವಲಯ ಅರಣ್ಯ ಅಧಿಕಾರಿ ಕಾಶಪ್ಪ, ಹಣಮಂತರಾಯ ಬಿರಾದಾರ್, ಬೀಟ್ ಫಾರೆಸ್ಟ್, ಚಿದಾನಂದ ಸ್ವಾಮಿ, ರವೀಂದ್ರ ಪವಾರ್, ಸೇರಿದಂತೆ ಅರಣ್ಯ ಇಲಾಖೆಯ ವಾಚರಗಳು ಪಂಚರು ಹಾಗೂ ಸಂಸ್ಥೆಯ ಮುಖ್ಯಸ್ಥರು ಇದ್ದರು.




