ಪ್ರಮುಖ ಸುದ್ದಿ
ಜಲಾಶಯದಲ್ಲಿ ಸಾಕಷ್ಟು ನೀರಿದೆ, ಕಾಲುವೆಗೆ ಹರಿಸಿ- ಯಾಳಗಿ
ಕಾಲುವೆಗೆ ನೀರು ಹರಿಸಲು ಅಮೀನರಡ್ಡಿ ಪಾಟೀಲ್ ಒತ್ತಾಯ

ಜಲಾಶಯದಲ್ಲಿ ಸಾಕಷ್ಟು ನೀರಿದೆ, ಕಾಲುವೆಗೆ ಹರಿಸಿ- ಯಾಳಗಿ
ವಿನಯವಾಣಿ ಸಮಾಚಾರ
ಶಹಾಪುರ: ಜಲಾಶಯದಲ್ಲಿ ನೀರು ತುಂಬಿದ್ದರೂ ಕಾಲುವೆಗಳಿಗೆ ಹರಿಯದೇ, ರೈತನ ಹೊಲ ಬರಡಾಗಿದ್ದರೆ ರಾಜ್ಯಕ್ಕೆ ಶೋಭೆ ತರುತಕ್ಕದಲ್ಲ ಎಂದು ಕ್ಷೇತ್ರದ ಬಿಜೆಪಿ ನಾಯಕ ಅಮೀನರಡ್ಡಿ ಪಾಟೀಲ್ ಯಾಳಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಹಾರಾಷ್ಟ್ರ ದಲ್ಲಿ ಅಧಿಕ ಮಳೆಯಾಗುತ್ತಿರುವ ಹಿನ್ನೆಲೆ ನಾರಾಯಣಪುರ ಜಲಾಶಯಕ್ಕೆ ಸಾಕಷ್ಟು ನೀರು ಹರಿದು ಬಂದಿದೆ. ಆ ನೀರನ್ನು ಸದುಪಯೋಗ ಪಡಿಸಿಕೊಳ್ಳಬೇಕು.
ರೈತರ ಹೊಲ ಹಸಿರಿನಿಂದ ಕಂಗೊಳಿಸಿದಾಗಲೇ ರಾಜ್ಯದ ಆಡಳಿತ ಸಮೃದ್ಧಿಯಿಂದ ಕೂಡಿದೆ ಎನ್ನಬಹುದು. ಆದ್ದರಿಂದ ನೀರನ್ನು ನದಿಗೆ ಮಾತ್ರವಲ್ಲ, ಕಾಲುವೆಗೂ ಹರಿಸಿದ್ದಲ್ಲಿ , ರೈತರಿಗೆ ಅನುಕೂಲ ವಾಗಲಿದೆ.
ರೈತರ ಹಿತದೃಷ್ಟಿಯಿಂದ ಯಾವುದೇ ವಿಳಂಬ ಮಾಡದೆ ನೀರಾವರಿ ಸಲಹಾ ಸಮಿತಿ ಸಭೆ ನಡೆಸಿ, ನಾರಾಯಣಪುರ ಜಲಾಶಯದಿಂದ ಎಡದಂಡೆ ಹಾಗೂ ಬಲದಂಡೆ ಕಾಲುವೆಗಳಿಗೆ ನೀರು ಹರಿಸುವ ಕುರಿತು ಶೀಘ್ರ ತೀರ್ಮಾನ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದರು.




