ಹಿರಿಯರು ಸಂಸ್ಕಾರ ಪಾಲಿಸಿ ಮಕ್ಕಳಿಗೂ ಕಲಿಸಿ : ಕಾಳಹಸ್ತೇಂದ್ರ ಶ್ರೀ
ಹಿರಿಯರು ಸಂಸ್ಕಾರ ಪಾಲಿಸಿ ಮಕ್ಕಳಿಗೂ ಕಲಿಸಿ : ಕಾಳಹಸ್ತೇಂದ್ರ ಶ್ರೀ
ನೂಲ ಹುಣ್ಣಿಮೆ ಪ್ರಯುಕ್ತ ಯಜ್ಞೋಪವಿತಧಾರಣೆ | ವಿಶ್ವಕರ್ಮ ಸಮಾಜದಿಂದ ಕಾರ್ಯಕ್ರಮ ಆಯೋಜನೆ | ಕಾಳಹಸ್ತೇಂದ್ರ ಸ್ವಾಮಿಜೀಗೆ ತುಲಾಭಾರ ಸೇವೆ
ವಿನಯವಾಣಿ ಸಮಾಚಾರ
ಶಹಾಪುರ: ಮಣ್ಣಿಗೆ ಸಂಸ್ಕಾರ ಕೊಟ್ಟರೆ ಪಣತೆ, ಮಡಿಕೆ, ಕುಡಿಕೆ ಸಿದ್ಧವಾಗುತ್ತದೆ. ಕಲ್ಲಿಗೆ ಮತ್ತು ಕಟ್ಟಿಗೆಗೆ ಸಂಸ್ಕಾರ ಕೊಟ್ಟರೆ ಮೂರ್ತಿ ಆಗುತ್ತದೆ, ಅದರಂತೆ ಮನುಷ್ಯನಿಗೆ ಸಂಸ್ಕಾರ ಕೊಟ್ಟರೆ ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಬದುಕುತ್ತಾನೆ ಎಂದು ಏಕದಂಡಗಿ ಮಠದ ಕಾಳಹಸ್ತೇಂದ್ರ ಸ್ವಾಮೀಜಿ ತಿಳಿಸಿದರು.
ತಾಲೂಕಿನ ದೋರನಹಳ್ಳಿ ಪಟ್ಟಣದ ಶ್ರೀಕಾಳಿಕಾದೇವಿ ದೇವಸ್ಥಾನದಲ್ಲಿ ನೂಲ ಹುಣ್ಣಿಯ ಅಂಗವಾಗಿ ಬುಧವಾರ ವಿಶ್ವಕರ್ಮ ಸಮಾಜ ಆಯೋಜಿಸಿದ್ದ ಯಜ್ಞೋಪವಿತಧಾರಣೆ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮತ್ತು ಭಕ್ತರಿಂದ ತುಲಾಭಾರ ಸ್ವೀಕರಿಸಿ ಅವರು ಆಶೀರ್ವಚನ ನೀಡಿದರು. ವೈದಿಕ ಪದ್ದತಿಯಲ್ಲಿ ಬದುಕುವ ಮನುಷ್ಯನ ಬದುಕಿಗೆ ಉಪನಯನದ ನಂತರ ಯಜ್ಞೋಪವಿತಧಾರಣೆ ಮಾಡಿಕೊಳ್ಳಲು ಯೋಗ್ಯನಾಗುತ್ತಾನೆ.

ಇದು ಬದುಕಿನ ಮೊದಲ ಬುನಾದಿ. ಯಜ್ಞೋಪವಿತಧಾರಣೆಗೆ ಜನಿವಾರ ಧಾರಣ ಎಂತಲೂ ಕರೆಯುತ್ತಾರೆ. ಜನಿವಾರವನ್ನು ಜ ಎಂದು ನಿವಾರ ಎಂದು ಉಚ್ಚರಿಸಬೇಕು. ಜ ಎಂದರೆ ಜನ್ಮ, ನಿವಾರ ಎಂದರೆ ಬದುಕಿನಲ್ಲಿ ಮಾಡಿದ, ಮಾಡುವ ತಪ್ಪುಗಳನ್ನು ನಿವಾರಿಸಿ ಸರಿ ದಾರಿಗೆ ತರುವ ಸತ್ಕಾರ್ಯ ಎಂದರ್ಥವಾಗಲಿದೆ. ಇದನ್ನು ಉಪಕರ್ಮ ಎಂದೂ ಕೂಡ ಕರೆಯುತ್ತಾರೆ.
ಕರ್ಮ ಎಂದರೆ ಹಲವು ಅರ್ಥ ಕೊಡುತ್ತದೆ ಅದರಲ್ಲಿ ಕೆಲಸವು ಕೂಡ ಒಂದಾಗಿದೆ. ವಿಶ್ವಕರ್ಮರು ಜನಿವಾರ ಇಲ್ಲದೆ ಗಾಯತ್ರಿ ಮಂತ್ರ ಹೇಳದೆ ಊಟ ಮಾಡಿದರೆ ಜನಿವಾರದ ಶಕ್ತಿ ಕುಂದುತ್ತದೆ. ಇಂದು ಈ ಸಂಸ್ಕಾರ ದಿನೇ ದಿನೇ ಕಡಿಮೆ ಆಗುತ್ತಿದೆ ಎಂದು ವಿಷಾಧಿಸಿದ ಅವರು, ಇದರ ಮಹತ್ವ ಅರಿತ ಹಿರಿಯರು ಮೊದಲು ಈ ಸಂಸ್ಕಾರ ಪಾಲಿಸಿ ಮಕ್ಕಳಿಗೂ ಕಲಿಸಿದರೆ ಮುಂದೆ ಇದು ತಾನಾಗೆ ಉತ್ತಮ ರೀತಿಯಲ್ಲಿ ಬೆಳೆಯಲಿದೆ.
ಜನಿವಾರದಲ್ಲಿ ಒಟ್ಟು ಒಂಭತ್ತು ಎಳೆಗಳು ಬರುತ್ತವೆ. ಅವುಗಳು ಬದುಕಿನ ಹಂತದಲ್ಲಿ ಸಂದೇಶವನ್ನು ಕಲ್ಪಿಸಿ ಕೊಡುತ್ತವೆ. ಉಪಕರ್ಮದ ನಂತರದ ಮೂರು ಎಳೆಗಳ ಜನಿವಾರ ಧರಿಸಬೇಕು ಅವು ಸತ್ವ, ರಜ, ತವ, ಮದುವೆಯ ನಂತರ ಆರು ಎಳೆ ಜನಿವಾರ ಧರಿಸಬೇಕು ಅವು ಕಾಯಾ, ವಾಚಾ, ಮನಸ ತಂದೆ ಮರಣ ನಂತರ ಒಂಭತ್ತು ಎಳೆ ಪಿತೃ ಋಣ, ದೇವ ಋಣ, ಗುರು ಋಣ ಹೀಗೆ ಜನಿವಾರ ಶಕ್ತಿಯನ್ನು ಹೊಂದಿದೆ. ಜನಿವಾರವು ಗಾಯತ್ರಿ, ಸಾವಿತ್ರಿ, ಸರಸ್ವತಿಯ ಸ್ವರೂಪವಿದ್ದು ವಾಚಿಕ ಜಪ, ಉಪಾಂಶು ಜಪ, ಮಾನಸಿಕ ಜಪ ಮೂರು ವಿಧಗಳಿಂದ ಧ್ಯಾನಿಸಿ ಸಂಸ್ಕಾರ ಪಾಲಿಸಬೇಕು ಎಂದರು. ನಂತರ ಪೂಜ್ಯರ ಮಾರ್ಗದರ್ಶನದಲ್ಲಿ ಜನಿವಾರ ಧಾರಣೆ ಜರುಗಿತು. ಇದೇ ಸಂದರ್ಭದಲ್ಲಿ ಕಾಳಹಸ್ತೇಂದ್ರ ಮಹಾಸ್ವಾಮೀಗಳ ತುಲಾಭಾರ ನಡೆಸಿ ನಂತರ ಮಹಾ ಪ್ರಸಾದ ಸೇವನೆ ಮಾಡಿದರು. ಈ ಸಂದರ್ಭದಲ್ಲಿ ಸಮಾಜದ ಅಧ್ಯಕ್ಷÀ ಚಂದ್ರಶೇಖರ ಪತ್ತಾರ, ಮಾನಪ್ಪ ಕಂಬಾರ, ಘಂಟೆಪ್ಪ ಪತ್ತಾರ, ಮನೋಹರ ಪತ್ತಾರ, ಕಾಳಪ್ಪ ಪತ್ತಾರ, ಇಂದ್ರಪ್ಪ ಕಂಚಗಾರ, ಪ್ರವೀಣ ಪತ್ತಾರ, ಕಾಳಪ್ಪ ಕಂಚಗಾರ, ಮೌನೇಶ ಕಂಚಗಾರ, ಗಂಗಾಧರ ಕಂಬಾರ, ಗಂಗಾಧರ ಪತ್ತಾರ, ಮಂಜುನಾಥ ಕಂಚಗಾರ, ವಿರೇಶ ಕಂಬಾರ, ಗುರುನಾಥ ಕಂಚಗಾರ, ಕಾಶಿನಾಥ, ಜಗನ್ನಾಥ ಶೃಂಗಾರ, ಮಹಾದೇವ ಶೃಂಗಾರ, ದೊಡಪ್ಪ ಕಂಬಾರ ಸೇರಿದಂತೆ ನೂರಾರು ಭಕ್ತರು, ವಿವಿಧ ಸಮಾಜದ ಮುಖಂಡರು ಇದ್ದರು.




