ಯಾದಗಿರಿ : ಕ್ಷುಲ್ಲಕ ಕಾರಣಕ್ಕೆ ಗುಂಪು ಘರ್ಷಣೆ, 20 ಜನರ ಬಂಧನ
ಶಹಾಪುರಃ ಕಲ್ಲು ತೂರಾಟ, ಎಎಸ್ಐ, ಪಿಸಿ ಸೇರಿದಂತೆ ಹಲವರಿಗೆ ಗಾಯ
ಯಾದಗಿರಿಃ ಕ್ಷುಲ್ಲಕ ಕಾರಣವೊಂದಕ್ಕೆ ಜಿಲ್ಲೆಯ ಶಹಾಪುರ ತಾಲೂಕಿನ ಶಿರವಾಳ ಗ್ರಾಮದಲ್ಲಿ ಎರಡು ದಲಿತ ಸಮುದಾಯಗಳ ಮಧ್ಯೆ ಗಲಾಟೆ ಶುರುವಾಗಿದೆ. ನಂತರ ಎರಡು ಕಡೆಯಿಂದ ಕಲ್ಲು ತೂರಾಟ ನಡೆದ ಪರಿಣಾಮ ಹಲವರು ಗಾಯಗೊಂಡ ಘಟನೆ ಗುರುವಾರ ರಾತ್ರಿ ನಡೆದಿದೆ.
ವಿಷಯ ತಿಳಿದು ಸ್ಥಳಕ್ಕೆ ತೆರಳಿದ ಪೊಲೀಸರ ಮೇಲೂ ಕಲ್ಲು ತೂರಾಟ ನಡೆದಿದೆ. ಪರಿಣಾಮ ಭೀಮರಾಯನ ಗುಡಿ ಠಾಣೆಯ ಎಎಸ್ಐ ಭಾಗಪ್ಪ ಮತ್ತು ಪೇದೆ ಹುಸೇನ್ ಅವರಿಗೂ ಕಲ್ಲೇಟು ಬಿದ್ದಿದ್ದು ಗಾಯಗೊಂಡಿದ್ದಾರೆ. ಎಎಸ್ಐ ಬಾಗಪ್ಪ ಅವರ ತಲೆಗೆ ಬಲವಾದ ಪೆಟ್ಟು ಬಿದ್ದಿದೆ ಎಂದು ಎ.ಎಸ್.ಪಿ ಶಿವಪ್ರಕಾಶ ತಿಳಿಸಿದ್ದಾರೆ.
ಹಿನ್ನೆಲೆಃ ಶಿರವಾಳ ಗ್ರಾಮದ ಒಂದು ಜನಾಂಗದ ಬಡಾವಣೆಯಲ್ಲಿ ಪ್ರಮುಖರೊಬ್ಬರ ಮನೆ ಮುಂದೆ ಕಟ್ಟೆ ಕಟ್ಟಲಾಗಿದೆ. ಆ ಕಟ್ಟೆಯನ್ನು ತೆರವುಗೊಳಿಸಬೇಕೆಂದು ಇನ್ನೊಂದು ಜನಾಂಗದ ಗುಂಪು ಪಟ್ಟು ಹಿಡಿದಿದೆ ಎನ್ನಲಾಗಿದೆ. ಹೀಗಾಗಿ ಎರಡು ಜನಾಂಗದ ಮಧ್ಯೆ ಗಲಾಟೆ ಆರಂಭವಾಗಿ, ಕಲ್ಲು ತೂರಾಟ ನಡೆದಿದೆ. ಈ ಮೊದಲಿಂದಲೂ ಎರಡು ಜನಾಂಗದ ಮದ್ಯೆ ಮನೆಯೊಂದರ ರಸ್ತೆ ಬದಿ ಕಟ್ಟಿದ ಕಟ್ಟೆಗೆ ಸಂಬಂಧಿಸಿದಂತೆ ಸಣ್ಣ ಪುಟ್ಟ ಗಲಾಟೆ ನಡೆದಿದ್ದವು.
ಪ್ರಸ್ತುತ ಘಟನೆಗೆ ಸಂಬಂಧಿಸಿದಂತೆ ಎರಡೂ ಸಮುದಾಯದಿಂದ ದೂರು-ಪ್ರತಿದೂರುಗಳು ದಾಖಲಾಗಿವೆ. ಈ ಕುರಿತು ಈಗಾಗಲೇ 20 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ಘಟನೆಯಲ್ಲಿ ಗಾಯಗೊಂಡಿರುವವರು ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣದ ಬಗ್ಗೆ ಸೂಕ್ತ ವಿಚಾರಣೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಎಸ್ಪಿ ಶಿವಪ್ರಕಾಶ ಅವರು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಎರಡು ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ. ಅಲ್ಲದೆ ಪೊಲೀಸರಿಗೂ ಏಟು ಬಿದ್ದ ಕಾರಣ ಆ ಬಗ್ಗೆಯೂ ಪ್ರಕರಣ ದಾಖಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಗ್ರಾಮೀಣ ಸಿಪಿಐ ವೀರಣ್ಣ ದೊಡ್ಮನಿ ಇದ್ದರು.