ಪ್ರಮುಖ ಸುದ್ದಿ
ಗಿರಿ ಜಾಕಾ ಮತ್ತು ಸಂತೋಷ ಮದ್ರಿಕಿ ಅಪಘಾತದಲ್ಲಿ ದುರ್ಮರಣ
ಬೈಕ್ಗೆ ಲಾರಿ ಡಿಕ್ಕಿ, ಸವಾರರಿಬ್ಬರು ಸಾವು
ಯಾದಗಿರಿಃ ಕಬ್ಬು ತುಂಬಿಕೊಂಡು ಹೊರಟ್ಟಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಎದುರುಗಡೆ ಬರುತ್ತಿರುವ ಬೈಕ್ವೊಂದಕ್ಕೆ ಡಿಕ್ಕಿಯಾಗಿದೆ. ಪರಿಣಾಮ ನಗರದ ಕಡೆಗೆ ಹೊರಟ್ಟಿದ್ದ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಜಿಲ್ಲೆಯ ಶಹಾಪುರ ನಗರದ ಕನ್ಯಾಕೋಳೂರ ಅಗಸಿ ಸಮೀಪ ಸುರಪುರದ ಮಾರ್ಗದಲ್ಲಿ ಬುಧವಾರ ರಾತ್ರಿ ನಡೆದಿದೆ.
ಶಹಾಪುರ ನಗರದ ನಿವಾಸಿ, ವೀರಶೈವ ಯುವ ಮುಖಂಡ ಗಿರಿ ಜಾಕಾ (40) ಮತ್ತು ಸಂತೋಷ ಮದ್ರಿಕಿ (34) ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟ ಬೈಕ್ ಸವಾರರು. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಲಾರಿ ಚಾಲಕ ಪರಾರಿಯಾಗಿದ್ದು, ಕ್ಲೀನರ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆಂದು ತಿಳಿದು ಬಂದಿದೆ.
ಮೃತದೇಹಗಳನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು ವೈದ್ಯಕೀಯ ತಪಾಸಣೆ ನಡೆದಿದೆ. ಘಟನಾ ಸ್ಥಳಕ್ಕೆ ಆಗಮಿಸಿದ ಬಂಧು, ಸ್ನೇಹಿತರ ರೋದನ ಮುಗಿಲು ಮುಟ್ಟಿದೆ. ಶಹಾಪುರ ಠಾಣೆಯಲ್ಲಿ ಅಪಘಾತದ ಬಗ್ಗೆ ಪ್ರಕರಣ ದಾಖಲಾಗಿದೆ.