ದೇಶದ ಸಂವಿಧಾನ ಗೌರವಿಸಿ ಭಾರತದ ಐಕ್ಯತೆ ಕಾಪಾಡಿ –ಡಾ.ಖರ್ಗೆ
ಶಹಾಪುರಃ ನಮ್ಮ ದೇಶದಲ್ಲಿ ವಿವಿಧ ಧರ್ಮಿಯರು ವಾಸವಿದ್ದು, ಅನೇಕತೆಯಲ್ಲಿ ಏಕತೆಯನ್ನು ಹೊಂದಿದ ದೇಶ ನಮ್ಮದು. ದೇಶದಲ್ಲಿರುವ 130 ಕೋಟಿ ಜನರಿಗೂ ಒಂದೇ ಸಂವಿಧಾನವಿದ್ದು, ಸಂವಿಧಾನ ಯಾವುದೇ ಒಂದು ಜಾತಿ ಧರ್ಮಕ್ಕೆ ಸೀಮಿತವಾಗಿಲ್ಲ ಅದು ಸರ್ವ ಸಮಾಜದ ಮಹಾನ್ ಗ್ರಂಥ ಅದನ್ನು ಎಲ್ಲರೂ ಗೌರವಿಸಿ ಭಾರತದ ಏಕತೆಯನ್ನು ಎತ್ತಿ ಹಿಡಿಯಬೇಕಿದೆ ಎಂದು ಕೇಂದ್ರದ ಮಾಜಿ ಸಚಿವ ಕಾಂಗ್ರೆಸ್ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.
ತಾಲೂಕಿನ ಹತ್ತಿಗೂಡೂರ ಗ್ರಾಮದಲ್ಲಿ ಡಾ.ಅಂಬೇಡ್ಕರ ಪುತ್ಥಳಿ ಅನಾವರಣಗೊಳಿಸಿ ನಂತರ ನಡೆದ ಭಾರಿ ಬಹಿರಂಗ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಡಾ.ಬಾಬಾ ಸಾಹೇಬರು ದೇಶದ ಸರ್ವ ಜನಾಂಗ ಅಭಿವೃದ್ಧಿಗೆ ಸಮರ್ಪಕ ಮೀಸಲಾತಿಯನ್ನು ಕಲ್ಪಿಸಿದ್ದಾರೆ. ಮುಖ್ಯವಾಗಿ ಡಾ.ಅಂಬೇಡ್ಕರ ಅವರನ್ನು ಒಂದು ಜಾತಿಗೆ ಹೋಲಿಕೆ ಮಾಡಬಾರದು ಅವರೊಬ್ಬ ಜಾತ್ಯತೀತ ನಾಯಕರು. ಸರ್ವ ಜನಾಂಗದ ಹಿತ ಬಯಸಿದವರು, ದೇಶದ ಸರ್ವಾಂಗೀಣ ಅಭೀವೃದ್ಧಿಗೆ ಶ್ರಮಿಸಿದವರು, ದೇಶಕ್ಕೆ ಸಂವಿಧಾನ ಎಂಬ ಬಹುದೊಡ್ಡ ಕೊಡುಗೆಯನ್ನು ಅವರು ನೀಡಿದ್ದಾರೆ. ಪ್ರತಿಯೊಬ್ಬರು ಅವರನ್ನು ಸ್ಮರಿಸಬೇಕಿದೆ. ಸರ್ವರೂ ಸಂವಿಧಾನ ನಮ್ಮ ಅತ್ಯಮುಲ್ಯವಾದ ಗ್ರಂಥವೆಂದು ಹೆಮ್ಮೆಯಿಂದ ಹೇಳಬೇಕು ಆಗ ಮಾತ್ರ ಡಾ.ಅಂಬೇಡ್ಕರರು ನೀಡಿದ ಸಂವಿಧಾನ ಸಾರ್ಥಕತೆ ಪಡೆದುಕೊಳ್ಳಲಿದೆ.
ಅಲ್ಲದೆ ಕಲ್ಯಾಣ ಕರ್ನಾಟಕ ಪ್ರದೇಶ ತೀರ ಹಿಂದುಳಿದ ಕಾರಣ ಸಮರ್ಪಕ ಬೆಳವಣಿಗೆ ಬಯಸಿ 371(ಜೆ) ಜಾರಿಗೆ ತರಲಾಯಿತು. ಇದರಿಂದ ಸಮಾನತೆ ಈ ಭಾಗದ ಜನರ ಸರ್ವೋತೋಮುಖ ಅಭಿವೃದ್ಧಿಗೆ ಸಾಕಾರವಾಗಿದೆ ಎಂದರು. ಮೊಘಲರು ಮತ್ತು ಬ್ರಿಟಿಷರ ಕಪಿಮುಷ್ಟಿಯಿಂದ ದೇಶವನ್ನು ಮುನ್ನಡೆಸಲು ಡಾ.ಅಂಬೇಡ್ಕರವರು ಸಂವಿಧಾನವನ್ನು ಕೊಡುಗೆಯಾಗಿ ನೀಡಿದರು. ನಾನು ಜೀವತಾವಧಿವರೆಗೂ ದೇಶದ ಐಕ್ಯತೆಗಾಗಿ ಹೋರಾಡುತ್ತೇನೆ ಎಂದು ಡಾ.ಅಂಬೇಡ್ಕರರು ಅಂದು ವಾಗ್ದಾನ ಮಾಡಿದ್ದರು. ಅದರಂತೆ ನಡೆದುಕೊಂಡರು.
12 ನೇಯ ಶತಮಾನದಲ್ಲಿ ಬಸವಣ್ಣನವರು ವಚನ ಸಾಹಿತ್ಯದಿಂದ ಸಮಾಜದಲ್ಲಿ ಸಾಮರಸ್ಯ ಸಮಾನತೆ ಮೂಡಿಸುವಲ್ಲಿ ಅವಿರತ ಶ್ರಮವಹಿಸಿದ್ದರು. ಹೀಗಾಗಿ ಮಹಾನ್ ನಾಯಕರ ಸೇವೆ ಗುರುತಿಸಿ ನಾವೆಲ್ಲ ತತ್ವ ಸಿದ್ಧಾಂತವನ್ನು ಅಳವಡಿಸಿಕೊಂಡು ಸಮಾಜದ ಹಿತ ಬಯಸಿ ದೇಶ ಏಕತೆಗೆ ಶ್ರಮಿಸಬೇಕು ಎಂದು ಕರೆ ನೀಡಿದರು.
ಸಮಾರಂಭದ ದಿವ್ಯ ಸಾನಿಧ್ಯವನ್ನು ಪಂಚಶೀಲ ಪಟಣ ಪೂಜ್ಯ ಬಂತೆ ಮೆಂತಪಾಲ. ಬಹುಜನ ಪೀಠ ಮೈಸೂರಿನ ಜ್ಞಾನಪ್ರಕಾಶ ಸ್ವಾಮೀಜಿ, ಚಿಗರಳ್ಳಿಯ ಸಿದ್ದಬಸವ ಕಬೀರನಂದ ಸ್ವಾಮಿಗಳು, ತಪೋವನ ಮಠದ ಗಿರಿಮಲ್ಲೆಶ್ವರ ಸ್ವಾಮೀಗಳು ವಹಿಸಿದ್ದರು. ಶಾಸಕ ಶರಣಬಸಪ್ಪಗೌಡ ದರ್ಶನಾಪುರ, ಸಂಸದ ರಾಜಾ ಅಮರೇಶ ನಾಯಕ ಉಪಸ್ಥಿತರಿದ್ದರು.