ಯಡಿಯೂರಪ್ಪ ಮತ್ತು ಎಂ.ಬಿ.ಪಾಟೀಲರಲ್ಲಿ ಯಾರು ಹೆಚ್ಚು ‘ಲಿಂಗಾಯತ’..?
ಲಿಂಗಾಯತ ದಂಡನಾಯಕರಾಗಲು ನಡೆದಿದೆಯಾ ಸಮಾಜದಲ್ಲಿ ಬೇಗುದಿ..!
ರಾಜ್ಯದ ತುಂಬ ‘ಲಿಂಗಾಯತ ಕಾವು’ ಕಾವು ಏರಿದೆ. ಈ ಅರಿವು-ಉರಿವಿನ ಸಮಯದಲ್ಲಿ ಯಾರು ಹೇಗೆ ಎನ್ನುವುದು ಬಯಲಿಗೆ ಬರುತ್ತಿದೆ. ಯಾರು ನಿಜ, ಯಾರು ಸುಳ್ಳು ಎನ್ನುವುದು ಬಸವಣ್ಣನವರ ‘ಹುಸಿಯನುಡಿಯಲು ಬೇಡ..’ ಎನ್ನುವ ಆಶಯವೇನೋ ಎನ್ನುವಂತೆ ಪರ, ವಿರೋಧದ ಮಂಥನ ಸಾಗಿದೆ.
ಹೊತ್ತೊಂಟರೇ ಎಲೆಕ್ಷನ್ನು. ಎಲ್ಲ ಪಾರ್ಟಿಗಳಲ್ಲಿ ಅದೇ ತಳಮಳ. ‘ಲಗ್ನಕ್ಕೆ ಬಟ್ಟೆ ಖರೀದಿ ಮಾಡಿ ಯಾರ್ಯಾರಿಗೆ ಕರೀಬೇಕು’ ಎನ್ನುವ ಧಾವಂತದ ವಾತಾವರಣ. ಸಫಾರಿ ರೆಡಿಯಾಗಿದೆ! ಇಂತಹ ಸಂದರ್ಭದಲ್ಲಿ ಈ ಧರ್ಮ ಕಾರಣದ ನಿಗಿ ನಗಿ ಕೆಂಡವನ್ನು ನುಂಗಲು ಯಾರಿಂದಲೂ ಆಗುತ್ತಿಲ್ಲ. ಇದನ್ನು ಯಾರು ಹ್ಯಾಗೆ ಬಳಸಿಕೊಳ್ಳಬೇಕೆಂಬ ತಾಕಲಾಟ, ಕೆಲವರ ದಡ್ಡತನ, ಮೊತ್ತಬ್ಬರ ಗೊಡ್ಡುತನದ ವಾದ.
ಮೊದಲು ಗುಡುಗು ಮಿಂಚು ಕಾಣಿಸಿ, ಸೊಯ್ಯನೇ ಗಾಳಿ ಬೀಸಿ, ಭರ್ರನೇ ಸುರಿದಂತೆ ಈ ಮಳೆ. ಮೊಟ್ಟ ಮೊದಲು ಬೀದರಿನಲ್ಲಿ ಕಾಣಿಸಿಕೊಂಡ ಮೋಡಗಳು ನಂತರ ತಿರು ತಿರುವಿ ಬೆಳಗಾವಿ ಹಾಗೂ ಲಾತೂರಿನಲ್ಲಿ ಮಳೆಯಾಗಿ ಜಡಿದವು. ವಾದ-ವಿವಾದ, ಅನ್ನಿಸಿಕೊಳ್ಳುವುದು-ಅನ್ನುವುದು, ಯಾರದೋ ಫೋಟೊವನ್ನು ತುಳಿಯುವುದು, ಟೀವಿಯೊಳಗೆ ಕುಂತು ವಿಷಯವಿಲ್ಲದೇ ಚೀರಾಡುವುದರಿಂದ ಹಿಡಿದು ಏನೇನೋ ಆಗಿ ಕೊನೆಗೀಗ ಬಿತ್ತನೆಯ ಸಮಯದಂತೆ ಒಂದಷ್ಟು ಶಾಂತ. ಮತ್ತೆ ನಾಡಿದ್ದು ಭಾನುವಾರದ ‘ಕಲಬುರಗಿ ರ್ಯಾಲಿ’.
ರಾಜಕಾರಣದ ಮಾತಾಯಿತು, ಧರ್ಮ ಬೇಕೊ ಬೇಡವೋ ಎನ್ನುವ ಮಾತಾಯಿತು, ಅವರÀವರ ಇಷ್ಟಾನುಸಾರದ ಲಾಭದ ಲೆಕ್ಕದಲ್ಲಿ ಎಲ್ಲ ನಡೆಯುತ್ತ ಹೋದರು. ಮೊದಲು ಸ್ವಲ್ಪ, ಆಮೇಲೆ ತುಸು, ನಂತರ ಜರ ಎನ್ನುವಂತೆ ಒಂದಷ್ಟ್ಟನ್ನು ಸಾಮಾನ್ಯರಿಂದ ಹಿಡಿದು ಮಾಧ್ಯಮದವರೂ ‘ಬರೀ ಲಿಂಗಾಯತ’ ಎಂದರೆ ಏನೆಂದು ಅರಿಯಲು ನಿಜಕ್ಕೂ ಇದು ಒಳ್ಳೆಯದೇ ಮಾಡಿತು. ಜೊಳ್ಳು ಹಾರುತ್ತಿವೆ, ಕಾಳೀಗ ಉಳಿಯುತ್ತಿವೆ. ಈಗ ಎಂತಹ ವಾತಾವರಣ ಎಂದರೆ ಇನ್ನಷ್ಟು ಹಾಕಿದರೆ ತೂಕ ಹೆಚ್ಚಾಗುವ ಸಮಯ. ಲಿಂಗಾಯತ ಯಾಕೆ ಬೇಕು ಎಂದ ನಂತರ ‘ಆದರೆ ಆಗಲಿ.. ಬೇಕೇ ಬೇಕಾ, ಬಿಟ್ಟರೆ ನಡೆಯಲ್ಲವಾ’ ಎನ್ನುವ ಮನಸ್ಥಿತಿ ಎದುರಾಗಿದೆ. ಬಹುಶಃ ಇದು ಈಗ ಕೊನೆಯ ಹಂತ.
ಲಿಂಗಾಯತ ಯಾಕೆ ಬೇಕು, ಬಸವಣ್ಣ ಈ ಕಾಲಕ್ಕೆ ಯಾಕೆ ಪ್ರಸ್ತುತ ಎನ್ನುವ ಗಟ್ಟಿ ನಿಲುವಿನಲ್ಲಿ ಬಹುಸಂಖ್ಯಾತ ಹೋರಾಟಗಾರರಿದ್ದಾರೆ. ಇನ್ನೊಂದು ಕಡೆ ‘ಮಾಡಿದರೆ ನಾವು ಬಡವರಾದೇವು’ ಎನ್ನುವ ವೀರಶೈವ ವಾದದ ಜನ. ಇವರೇ ಈಗ ಮೊದಲ ಅಡ್ಡಿ! ಪರಿ ಪರಿಯಾಗಿ ತಿಳಿಸಿ ಹೇಳಿದರೂ ಅವರು ‘ಗೊತ್ತಾದರೂ’ ತಿಳಿದುಕೊಳ್ಳಲು ಸಾಧ್ಯವಿಲ್ಲದ ಜನ. ಇನ್ನು ಹಿಂದೂ ಧರ್ಮವನ್ನು ಒಡೆಯಬೇಡಿ, ಭಾರತವನ್ನು ಕಾಪಾಡಿ ಎನ್ನುವವರು ಮತ್ತೊಂದು ಕಡೆ. ಈಗ ಈ ವಿಷಯ ಇನ್ನೊಂದು ತಿಂಗಳಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯರ ಟೇಬಲ್ಲಿಗೆ ಬರಲಿದೆ. ಇದನ್ನು ಮಾಡಿಯೇ ಸಿದ್ಧ ಎಂದು ನಿಂತಿರುವ ಎಂ.ಬಿ. ಪಾಟೀಲ್ ಎಲ್ಲರ ಕೇಂದ್ರ ಬಿಂದು.
ಹಿಂದೊಮ್ಮೆ ‘ನಮ್ಮವರೊಬ್ಬರು ಮುಖ್ಯಮಂತ್ರಿಯಾಗಲಿ’ ಎಂದು ನೋಡಿದ ಬಹುತೇಕ ಜನರು ಇವರ ಕಡೆಗೆ ನೋಡುತ್ತಿದ್ದಾರಾ ಎನ್ನುವುದು ಬೇಡವಾದವರ ‘ಮನದೊಳಗಿನ ಪ್ರಶ್ನೆ’. ಹಾಗೆ ಆಗಬಾರದೆಂದೇ ಮೊನ್ನೆ ಏನೇನೊ ನಡೆದೂ ಹೋದವು! ಇದು ರಾಜಕಾರಣ ಅನ್ನಿಸಿಕೊಂಡರೆ, ಇನ್ನೊಂದೆಡೆ ಒಂದು ಸಮುದಾಯದ ಹಿತ ಕಾಪಾಡಲು ನಿಂತ, ಅದಕ್ಕೂ ಹೆಚ್ಚಿಗೆ ಬಸವಣ್ಣರ ದಾರಿಯನ್ನು ವಿಶ್ವ ಮಾನ್ಯಗೊಳಿಸಲು ಹೊರಟಿದ್ದೀನಿ ಎನ್ನುವ ಒಬ್ಬ ನಾಯಕನನ್ನು ಅದೇ ಸಮುದಾಯದ ಜನರೇ ಸಂಶಯದಿಂದ ನೋಡುವುದು, ಅಪನಂಬಿಕೆ ತೋರುವುದು ಎಷ್ಟರ ಮಟ್ಟಿಗೆ ಸರಿ? ಇದು ಸದ್ಯದ ಪ್ರಶ್ನೆ. ಹಾಗಿದ್ದರೆ ಇದು ತಿಳಿಗೇಡಿತನವೇ ಸರಿ.
ಮೊದಲನೆಯದಾಗಿ ಬಿಜೆಪಿ ಅಂದರೆ ಲಿಂಗಾಯತರು, ಲಿಂಗಾಯತರೆಂದರೆ ಬಿಜೆಪಿ ಎನ್ನುವ ಮಾತಿತ್ತು. ಅವರು ಇಂತಹ ಸಂದರ್ಭದಲ್ಲಿ ಅದೆಷ್ಟು ಅಜ್ಞಾನದಿಂದ ಈ ಅರಿವಿನ, ಜನ ಸಮದಾಯದ ಬಹುತ್ವದ ಹೋರಾಟವನ್ನೇ ತಿಳಿಗೇಡಿತನ ಎಂಬಂತೆ ಬಿಂಬಿಸಲು ಹೊರಟರೆಂದರೆ ಅದಕ್ಕಾಗೇ ಆರಂಭದಲ್ಲೇ ಅವರು ಮುಗ್ಗರಿಸಿ ಬಿದ್ದರು. ಇದೇ ಯಡಿಯೂರಪ್ಪನವರು, ‘ಏ ಎಲ್ಲಾ ಒಂದೇ.. ವೀರಶೈವ ಲಿಂಗಾಯತ ಎರಡೂ ಒಂದೇ. ನಾವೆಲ್ಲ ಬಗೆಹರಿಸುತ್ತೇವೆ’ ಅಂತ ಇಡೀ ಲಿಂಗಾಯತರು ತಾವು ಹೇಳಿದಂತೇ ಕೇಳುತ್ತಾರೆ ಎನ್ನುವ ಧಾಟಿಯಲ್ಲಿ ಮಾತನಾಡಿ ‘ರಿಕ್ಕಲ್ಲಿ ಸಿಕ್ಕಿಹಾಕಿ’ಕೊಂಡರು.
ಇವರಿಗೆ ಯಾರು ಹೀಗೆ ಪಾಟೀಲರ ಕೈಗೆ ಮತ್ತು ಕಾಂಗ್ರೆಸ್ಸಿನ ಅಸ್ತ್ರವಾಗುವಂತೆ ಲಿಂಗಾಯತರ ಹೋರಾಟವನ್ನು ಒಯ್ದು ಅನಾಮತ್ತು ಕೊಡು ಎಂದು ಹೇಳಿದ್ದರು? ಆಯ್ತು, ಇವರ ಪ್ರಕಾರ ಸಿದ್ಧರಾಮಯ್ಯರೇ ಮುಂದೆ ನಿಂತು ಧರ್ಮ ಒಡೆದು ಓಟಿನ ವಿಭಜನೆ ಮಾಡಲೇ ಹೀಗೆಲ್ಲ ತಮ್ಮ ಸಂಪುಟದ ಸಚಿವರನ್ನೇ ಸರಕಾರಿ ಕಾರು ಕೊಟ್ಟು ತಿರುಗಾಡಿಸುತ್ತಿದ್ದಾರೆ ಎಂದೇ ಇಟ್ಟುಕೊಳ್ಳೋಣ.
ಆದರೆ, ನೀವೂ ಒಂದು ರಾಜಕೀಯ ಪಕ್ಷವಾಗಿ ಅದಕ್ಕೆ ಹೇಗೆ ಉತ್ತರ ಕೊಟ್ಟಿರಿ? ಹೀಗೆ ನಾವೆಲ್ಲ ಹೇಳಿದರೆ ಮಾತ್ರ ಇವರು ಕೇಳುತ್ತಾರೆ ಎಂದೋ? ಇವರು ನಾವು ಎಲ್ಲಿ ಇರು ಅಂತೀವಿ ಅಲ್ಲಿ ಇರ್ತಾರೆ, ಅಲ್ಲೇ ಬೀಳು ಅಂದ್ರೆ ಬೀಳ್ತಾರೆ ಎಂದೋ? ಒಂದು ಜಾಣತನದ, ಸಂಯಮದ ಹೋಗಲಿ ಕೊನೆಗೆ ಲಕ್ಷಗಟ್ಟಲೇ ಸೇರಿದ್ದ ಜನಗಳಿಗೆ ಗೌರವ ಕೊಟ್ಟಾದರೂ ಇವರು ಮಾತನಾಡಿದರಾ? ಅದೂ ಇಲ್ಲ.
ಬಸವಣ್ಣರ ಬಗ್ಗೆ, ಶರಣ ಧರ್ಮದ ಬಗ್ಗೆ ಒಂದಿಷ್ಟಾದರೂ ಕಾಳಜಿ ಇಟ್ಟುಕೊಂಡು ಮಾತಾಡಿದರಾ? ಸುಮ್ಮನೇ ಮೀಡಿಯಾದವರು ಮೈಕು ಹಿಡಿದಾಗ ಎಲ್ಲೆಂದರಲ್ಲಿ ಹೇಳಿ ಹೋಗುವ ವಿಷಯ ಅದಲ್ಲ ಎಂದು ತಿಳಿಯಲು ಇವರಿಗೆ ಇಷ್ಟು ದಿನಗಳೇ ಬೇಕಾದವಾ? ಹಾಗೆಲ್ಲ ತಾವು ಆಡಿದ್ದಕ್ಕೆ ರೊಟ್ಟಿ ಹೋಗಿ ಮತ್ತೆ ಎಲ್ಲಿ ಎಂ.ಬಿ. ಪಾಟೀಲರ ಜೋಳಿಗೆಗೇ ಬಿತ್ತೇನೊ ಎನ್ನುವ ಭಯದಲ್ಲೇ ಮೊನ್ನೆ ಅವರನ್ನು ಹಣಿಯಲು ನೋಡಿದ್ದು ಅಂತ ಜನಕ್ಕೇ ಗೊತ್ತಾಗಿದೆ. ಅಷ್ಟಕ್ಕೂ ಎಂ.ಬಿ. ಪಾಟೀಲ್ ಮಾಡಿದ ತಪ್ಪಾದರೂ ಏನು? ‘ನಾನು ಮೊದಲಿಂದಲೂ ಬಸವಾನುಯಾಯಿ, ನಾನೇನು ಈಗ ನಡು ರಾತ್ರಿ ಎದ್ದು ಬಂದು ಲಿಂಗಾಯತ ಅನ್ನುತ್ತಿಲ್ಲ’ ಅಂತ ಹೇಳಿದ್ದು ಅವರ ತಪ್ಪಾ?
ಬಸವಣ್ಣನಿಗೆ ಒಂಬೈನೂರು ವರ್ಷಗಳಿಂದ ಅನ್ಯಾಯ ಆಗಿದೆ ಮುಂದೆ ಹೀಗಾದರೆ ಯಾವ ಇತಿಹಾಸವೂ ನಮ್ಮನ್ನು ಕ್ಷಮಿಸಲ್ಲ ಅನ್ನುವುದು ‘ಕಾಂಗ್ರೆಸ್ಸಿನ ರಾಜಕಾರಣವಾ’? ‘ಅಧಿಕಾರ ಬರುತ್ತದೆ, ಹೋಗುತ್ತದೆ.. ನಾನು ಚುನಾವಣೆಯಲ್ಲಿ ಸೋತರೂ ಚಿಂತೆ ಇಲ್ಲ’ ಅಂತ ಅವರು ಹೇಳಿದ್ದು ಖರೆನೇ ರಾಜಕಾರಣವಾ? ಯಡಿಯೂರಪ್ಪ ಇವತ್ತೇ ಮುಂದೆ ಬಂದರೆ ಅವರೇ ಇದರ ನೇತೃತ್ವ ವಹಿಸಲಿ, ಜೆಡಿಎಸ್ಸಿನ ಹಿರಿಯ ಬಸವರಾಜ ಹೊರಟ್ಟಿಯವರೇ ಹೋರಾಟದ ಮುಂಚೂಣೀಯಲ್ಲಿರಲಿ ಅಂತ ಹೇಳಿದ್ದು ಏನು ಎನ್ನುವುದನ್ನು ಮೊದಲು ಯಡಿಯೂರಪ್ಪರಿಂದ ಹಿಡಿದು ಎಲ್ಲ ಪಕ್ಷಗಳ ಲಿಂಗಾಯತ ನಾಯಕರು ತಮ್ಮ ಎದೆಯಲ್ಲಿ ಬಸವಣ್ಣನ ಪರ ಬಡಿತವಿರುವ ಹೃದಯವಿಟ್ಟುಕೊಂಡಿದ್ದೇ ಆದರೆ ಅಲ್ಲಿ ಮುಟ್ಟಿಕೊಂಡು ಹೇಳಲಿ.
ನಿಜಕ್ಕೂ ಇವರಿಗೆ ಲಿಂಗಾಯತರ ಬಗ್ಗೆ ಕಾಳಜಿ ಇದ್ದಿದ್ದೇ ಆದರೆ ಮೊದಲು ಇವರೆಲ್ಲ ಒಂದು ಕಡೆ ಸೇರಿ ‘ತಪ್ಪಿತಸ್ಥ’ ಎಂ.ಬಿ. ಪಾಟೀಲರನ್ನೇ ಕೂಡಿಸಿಕೊಂಡು ನಮ್ಮ ಸಮುದಾಯಕ್ಕೆ ಆಗಬೇಕಾಗಿದ್ದು ಇದು ಅಂತ ಖರೆ ಇದ್ದದ್ದನ್ನು ವಿವರಿಸಲಿ. ಈ ನಾಯಕರು ಶರಣ ಧರ್ಮದ ವಿಚಾರ ಮೊದಲು ಅರಿಯಬೇಕಿದೆ. ಆಮೇಲೆ ರಾಜಕಾರಣದ ಮಾತು! ಪಾಟೀಲರು ರಾಜಕಾರಣಕ್ಕೇ ಇದನ್ನು ಮಾಡಿದ್ದರೆ ನಂತರ ಅವರೂ ಆ ನಷ್ಟ ಅನುಭವಿಸುತ್ತಾರೆ. ರಾಜಕಾರಣದ ಹೆಸರಲ್ಲೇ ರಾಜಕಾರಣದ ಆರೋಪ ಮಾಡುವುದು ಇವರಿಗೆಲ್ಲ ಸುಲಭವಾಗಿದೆ.
ಖರೆ ಇದ್ದರೂ ರಾಜಕೀಯ ಅಂತಾರೆ, ಸುಳ್ಳಿದ್ದರೂ ರಾಜಕೀಯ ಅಂತಾರೆ! ರಾಜಕಾರಣ ಅಸ್ಪøಶ್ಯವೂ ಅನ್ಯಾವೂ ಆಗಿದ್ದರೆ ಅದನ್ನೇ ಮಾಡುತ್ತಿರುವ ನೀವೆಲ್ಲ ಮೊದಲು ಎಲ್ಲ ಬಿಟ್ಟು ಜನರ ಬಳಿ ಬನ್ನಿ. ಅವರು ಹೇಳಿದಂತೆ ಕೇಳಿ. ಒಳ್ಳೆದಾಗುವುದಿದ್ದರೆ, ಬಸವಣ್ಣರ ಧರ್ಮಕ್ಕೆ ಮಾನ್ಯತೆ ಸಿಕ್ಕು ವಿಶ್ವ ಮಾನ್ಯತೆ ದೊರೆಯುವುದೇ ಆದರೆ ಅದಕ್ಕೆ ರಾಜಕಾರಣ ಮಾಡಿದರೂ ತಪ್ಪೇನು ಅಂತ ಅಂತರಾತ್ಮವನ್ನು ಕೇಳಿಕೊಳ್ಳಿ. ರಾಜಕೀಯದಿಂದ ಬರುವ ಅಧಿಕಾರವಿಲ್ಲದೆ ಯಾವ ಬದಲಾವಣೆಯೂ ಸಾಧ್ಯವಿಲ್ಲ. ಅದನ್ನು ಸಂವಿಧಾನವೇ ನಮಗೆ ಕೊಟ್ಟಿದೆ. ಬಸವಣ್ಣನವರೂ ಮಂತ್ರಿಯಾಗಿದ್ದರು, ಅಧಿಕಾರವನ್ನೇ ಕೆಳ ವರ್ಗದವರ ಹಾಗೂ ಕಾಯಕ ವರ್ಗದವರ ಗುಡಿಸಲಿಗೆ ಒಯ್ದು, ‘ಅಪ್ಪನು ನಮ್ಮ ಮಾದಾರ ಚನ್ನಯ್ಯ.. ಬಪ್ಪನು ನಮ್ಮ ಡೋಹರ ಕಕ್ಕಯ್ಯ’ ಎಂದು ಅವರನ್ನು ಮನುಷ್ಯರಂತೆ ಕಂಡರು. ಇಂತಹ ಚಳವಳಿಯ ಹಿನ್ನೆಲೆ ಇರುವ ಶರಣರೆಲ್ಲರ ನಡೆಯ ಒಂದು ದಾರಿಯನ್ನು ಧರ್ಮ ಮಾನ್ಯತೆಯ ಚೌಕಟ್ಟಿಗೆ ತಂದು ಜಾತಿಗಳನ್ನು ಮೀರಿದ ಮನುಷ್ಯತ್ವವನ್ನು ಬಿತ್ತಲು ನೋಡುತ್ತಿರುವ ಹೋರಾಟವನ್ನೇ ಹತ್ತಿಕ್ಕುವ ಮಾತಾಡುವ ಜನರು ಯಾತರದ ಜನ ಕಲ್ಯಾಣದ ರಾಜಕಾರಣ ಮಾಡುತ್ತಿದ್ದಾರೆ? ಸಂವಿಧಾನವೆಂದರೇನೇ ಬಸವಣ್ಣ. ಆತ ಹೇಳಿದ ಎಲ್ಲ ಅಂಶಗಳು ಅದರಲ್ಲಿವೆ. ಜಗತ್ತೇ ಈ ಸತ್ಯ ಕಂಡರೂ ‘ನಾವಿನ್ನೂ ವೀರಶೈವ, ಎಲ್ಲ ಒಂದೇ..’ ಎನ್ನುತ್ತ ಅದೇ ಅಮಾನವೀಯ, ಅಜ್ಞಾನ ಮುಂದುವರೀಲಿ ಅಂತ ವಾಪಸು ಹೊರಡುವುದೇ ಇವರ ದೃಷ್ಟಿಯಲ್ಲಿ ಕಲ್ಯಾಣವಾಗಿದ್ದರೆ ಖಂಡಿತ ಅದು ಯಾರೀಗೂ ಬೇಡ.
ಲಿಂಗಾಯತರು ಕೂಡ ಯಾರು ನಮ್ಮ ಜತೆಗೆ ಇದ್ದಾರೆ, ಏನು ನಡೆಯುತ್ತಿದೆ ಎನ್ನುವುದನ್ನೂ ತಿಳಿಯದಷ್ಟು ಮೂರ್ಖರಾಗುವುದು ಬೇಡ. ನಮ್ಮ ಸಮುದಾಯಕ್ಕೆ ಏನು ಬೇಕು, ನಾವೆಲ್ಲಿ ಇರಬೇಕು ಮತ್ತು ಏನನ್ನು ಯೋಚಿಸಬೇಕು ಅಂತ ಅವರು ತಿಳಿದರೆ ಎಲ್ಲದಕ್ಕೂ ಉತ್ತರ ಸಿಕ್ಕೇ ಸಿಗುತ್ತದೆ. ಚುನಾವಣೆ ಘೋಷಣೆಯಾಗುವುದರೊಳಗೇ ಇದೆಲ್ಲ ಒಂದು ತಾರ್ಕಿಕ ಅಂತ್ಯ ಕಾಣಲಿದೆ. ಇದು ರಾಜಕಾರಣವಾ, ಅಥವಾ ನಿಜ ಕಾಳಜಿಯಾ ಅಂತ ಗೊತ್ತಾಗಲಿದೆ. ಏನೂ ಆಗದಿದ್ದರೆ ಕೊನೆಗೆ ಎಲ್ಲದಕ್ಕೂ ಸುಪ್ರೀಂ ಕೋರ್ಟ್ ಮದ್ದಾಗಲಿದೆ. ಆಗ ಲಿಂಗಾಯತರ ನಿಜ ನಾಯಕ ಯಾರಂತ ಖಂಡಿತ ಎಲ್ಲರಿಗೆ ಗೊತ್ತಾಗಲಿದೆ. ಆ ವಿಶ್ವಾಸ ನನಗಂತೂ ಇದೆ.
–ಶಿವಕುಮಾರ್ ಉಪ್ಪಿನ
ಪತ್ರಕರ್ತ–ಬರಹಗಾರ.
(88809 59555)
Nice article in right time
Thank u
Real fact is published.Thanq u shivakumar sir
ಇಂದಿನ ಪ್ರಸ್ತುತ ಲಿಂಗಾಯತಧರ್ಮದ ಹೋರಾಟದಲ್ಲಿ ಹೆಚ್ಚು ಕಾಳಜಿ ತೋರಿಸುತ್ತಿರುವ ಸನ್ಮಾನ್ಯ ಸಚಿವರಾದ ಎಮ್ . ಬಿ. ಪಾಟೀಲವರೆ ನಿಜವಾದ ಲಿಂಗಾಯತರು.
Very good article at the right time.
It was good article at this moment there is no dought in B S ಯಡಿಯೂರಪ್ಪ is mass leader all religious not only lingayath. When it comes to political issues every one elect only BSY. Regards Shrikanth swamy Manager Gudage Hospital Bidar
ಹೃದಯಸ್ಪರ್ಷಿ ಲೇಖನ. .ನಿಮ್ಮ ಲೇಖನಕ್ಕೆ ಪ್ರತಿಕ್ರಿಯಿಸಲು ಶಬ್ದಗಳೇ ಸಾಲುತ್ತಿಲ್ಲ ಸಹೋದರ. … ಅಧ್ಯಯನಯೋಗ್ಯ ಲೇಖನ ಬರೆದಿದ್ದೀರಿ ಶಿವಕುಮಾರ ಉಪ್ಪಿನ ಸಹೋದರ. …