ಹಸಿದವರಿಗೆ ಅನ್ನ ನೀಡುವ ‘ಅಮ್ಮ’ ಕ್ಯಾಂಟೀನ್ ಜೂ.14 ರಂದು ಆರಂಭ
ದಿ.ಲಕ್ಷ್ಮಿದೇವಿ.ಬಿ.ಮಣಿಕಂಠ 34 ನೇ ಪುಣ್ಯಸ್ಮರಣೆ ಅಂಗವಾಗಿ
ಅಮ್ಮ ಕ್ಯಾಂಟೀನ್ ಆರಂಭ, 10.ರೂ.ಉಪಹಾರ, 10 ರೂ.ಊಟ
ಯಾದಗಿರಿಃ ಇದೇ ಜುಲೈ 14 ರಂದು ಜಿಲ್ಲೆಯ ಶಹಾಪುರ ನಗರದ ಚರಬಸವೇಶ್ವರ ಕಮಾನ ಹತ್ತಿರ ಅಮ್ಮ ಕ್ಯಾಂಟೀನ್ ಆರಂಭವಾಗಲಿದೆ. ಇದು ಹಸಿದು ಬಂದವರಿಗೆ ತುತ್ತು ಅನ್ನ ನೀಡು ಎನ್ನುವ ಘೋಷವಾಕ್ಯದಂತೆ, ಬಡ ಕೃಷಿ ಕೂಲಿಕಾರ್ಮಿಕರಿಗಾಗಿ ಗ್ರಾಮೀಣ ಭಾಗದಿಂದ ನಿತ್ಯ ಸಂಚರಿಸುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ, ಮಣಿಕಂಠಾಸ್ ಅಮ್ಮ ಚಾರಿಟೇಬಲ್ ಟ್ರಸ್ಟ್ (ರಿ) ವತಿಯಿಂದ ಕ್ಯಾಂಟೀನ್ ನಿರ್ಮಾಣ ಮಾಡಲಾಗುತ್ತಿದೆ ಎಂದು ಟ್ರಸ್ಟ್ ನ ಕಾರ್ಯದರ್ಶಿ ಗುರು ಮಣಿಕಂಠ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಕರೆದು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು,
ತಾಯಿಯ ಅನುಬಂಧದ ಮಹತ್ವಕಾಂಕ್ಷೆಯೊಂದಿಗೆ ಹೆತ್ತವಳ ನೆನಪು ಸರ್ವರ ಬದುಕಲ್ಲಿ ಸದಾ ಹಸಿರಾಗಿರಲಿ. ಮಗುವಿಗೆ ಹಸಿವಾಗಿದೆ ಎಂದು ಹೇಗೆ ತಾಯಿ ಹಾಲುಣಿಸುವಳು ಹಾಗೇ ಹಸಿದವರಿಗೆ ಈ ಕ್ಯಾಂಟೀನ್ ಹೊಟ್ಟೆ ತುಂಬಿಸುವದಲ್ಲದೆ ಅಮ್ಮನ ಪ್ರೀತಿ ನೆನಪು ಮಾಡಲಿದೆ ಎಂದರು.
ಮುಖಂಡ ಮಲ್ಲಿಕಾರ್ಜುನ ಆಲೂರ ಮಾತನಾಡಿ, ಸ್ವಂತಕ್ಕೆ ಸ್ವಲ್ಪ ಸಮಾಜಕ್ಕೆ ಹೆಚ್ಚು ಎನ್ನುವ ಸೇವಾ ಮನೋಭಾವನೆಯನ್ನು ಹೊಂದಿದ್ದ ನಾವುಗಳು ದಿವಂಗತ ಲಕ್ಷ್ಮಿದೇವಿ ಬಸವರಾಜ ಮಣಿಕಂಠರವರ 34 ನೇಯ ಪುಣ್ಯಸ್ಮರಣೆ ಅಂಗವಾಗಿ ಇದೇ ಜುಲೈ 14 ರಂದು ನಗರದ ಹೃದಯ ಭಾಗದಲ್ಲಿ ಸಿ.ಬಿ.ಕಮಾನ್ (ಎಸ್ಬಿಐ ಬ್ಯಾಂಕ್) ಸಮೀಪ ರಾಜ್ಯ ಹೆದ್ದಾರಿ ಬದಿ ಅಮ್ಮ ಕ್ಯಾಂಟೀನ್ ನಿರ್ಮಾಣವಾಗಿದ್ದು, ಅಂದು ವಿದ್ಯುಕ್ತವಾಗಿ ಚಾಲನೆ ನೀಡಲಾಗುವುದು.
ಸಮಾಜದಿಂದ ಪಡೆದುಕೊಳ್ಳುವುದಕ್ಕಿಂತ ಕೊಡುವುದರಲ್ಲಿಯೆ ಸಂತೃಪ್ತಿ ಕಾಣಬೇಕು ಎಂಬ ದಿಸೆಯಲ್ಲಿ ಸೇವೆ ಕೈಂಕರ್ಯಕ್ಕೆ ಕನಿಷ್ಟ ಬೇಕಾಗುವ ಮೊತ್ತ ಪರಿಗಣಿಸಿ ನಾವುಗಳು 10ರೂ. ಉಪಹಾರ ಮತ್ತು 10 ಊಟದ ವ್ಯವಸ್ಥೆ ಮಾಡಿದ್ದೇವೆ. ಅರ್ಹರೂ ಇದರ ಸದುಪಯೋಗ ಪಡೆದುಕೊಂಡಲ್ಲಿ ಸಾರ್ಥಕವಾಗುವುದೆಂಬ ಆಶಾಭಾವನೆ ಹೊಂದಿದ್ದೇವೆ ಎಂದರು.
ಅಂದಿನ ಕಾರ್ಯಕ್ರಮದ ಉದ್ಘಾಟಕರಾಗಿ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಆಗಮಿಸಲಿದ್ದು, ಮಾಜಿ ಶಾಸಕ ಗುರು ಪಾಟೀಲ್ ಜ್ಯೋತಿ ಬೆಳಗಲಿದ್ದಾರೆ. ಸುಕ್ಷೇತ್ರ ಗುಡದೂರಿನ ನೀಲಕಂಠಾರ್ಯ ತಾತ ಮತ್ತು ಸಜ್ಜಲಗುಡ್ಡದ ದೊಡ್ಡಬಸವಾರ್ಯ, ಚ.ಬ.ಸಂಸ್ಥಾನದ ಬಸವಯ್ಯ ಶರಣರು, ಫಕೀರೇಶ್ವರಮಠದ ಗುರುಪಾದ ಮಹಾಸ್ವಾಮಿಗಳು, ಏಕದಂಡಗಿ ಮಠದ ಕಾಳಹಸ್ತೇಂದ್ರ ಮಹಾಸ್ವಾಮೀಜಿ ಸಾನ್ನಿಧ್ಯವಹಿಸಲಿದ್ದಾರೆ. ಟ್ರಸ್ಟ್ ಅಧ್ಯಕ್ಷ ಬಸವರಾಜ ಮಣಿಕಂಠ ಅಧ್ಯಕ್ಷತೆವಹಿಸಲಿದ್ದಾರೆ. ಮತ್ತು ನಗರದ ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಾಜೂ ಆನೇಗುಂದಿ, ಅರವಿಂದ ಉಪ್ಪಿನ್, ರವಿ ಕಿರಣ, ಶಿವಾಜಿ ಪವಾರ, ನಾಗರಾಜ ಸಿರಿಗೇರಿ, ಪ್ರಕಾಶ ಸಾಹು, ಕಾಳು ದೊಡ್ಡಮನಿ ಸೇರಿದಂತೆ ಇತರರಿದ್ದರು.