ಮಕ್ಕಳಿಗೆ ಕಡ್ಡಾಯ ಶಿಕ್ಷಣ ಅಗತ್ಯಃ ನ್ಯಾ.ಬಡಿಗೇರ
ವಿಶ್ವ ಬಾಲ ಕಾರ್ಮಿಕರ ಪದ್ಧತಿ ವಿರೋಧಿ ದಿನಾಚರಣೆ
ಯಾದಗಿರಿಃ ಪ್ರತಿಯೊಬ್ಬ ಮನುಷ್ಯನಿಗೆ ಬದುಕು ಅರ್ಥೈಸಿಕೊಳ್ಳಲು ಕಾನೂನು ಅರಿವು ಅಗತ್ಯ ಇರುವಂತೆ, ಬಡತನ, ಮೂಲಭೂತ ಸಮಸ್ಯೆಗಳ ನಿರ್ಮೂಲನೆಗೆ ಮಕ್ಕಳಿಗೆ ಕಡ್ಡಾಯ ಶಿಕ್ಷಣ ಅವಶ್ಯ ಎಂದು ನಗರದ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರು ಹಾಗು ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷ ಪ್ರಭು ಎನ್.ಬಡಿಗೇರ ಹೇಳಿದರು.
ಜಿಲ್ಲೆಯ ಶಹಾಪುರ ನಗರದ ಆದರ್ಶ ವಿದ್ಯಾಲಯದಲ್ಲಿ ತಾಲೂಕು ಆಡಳಿತ, ತಾಲೂಕು ಕಾನೂನು ಸೇವಾ ಸಮಿತಿ, ಕಾರ್ಮಿಕ ಇಲಾಖೆ, ಜಿಲ್ಲಾ ಬಾಲ ಕಾರ್ಮಿಕರ ಯೋಜನಾ ಕಚೇರಿ, ತಾಪಂ ಹಾಗೂ ತಾಲೂಕು ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಕ್ಕಳ ರಕ್ಷಣೆಗಾಗಿ ಕಾನೂನು ಕಾಯ್ದೆ ಇದೆ. ಮಕ್ಕಳಿಗೆ ಅದರ ಅನ್ವಯ ಸಂಪೂರ್ಣ ರಕ್ಷಣೆ ನೀಡಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದು ಪಾಲಕರ ಕರ್ತವ್ಯ, ಮಕ್ಕಳ ರಕ್ಷಣ ಕಾಯ್ದೆ ಪ್ರಕಾರ ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಿದರೆ ಶಿಕ್ಷೆಗೆ ಗುರಿಯಾಗಬೇಕಾದಿತು ಎಂದರು.
ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಕಚೇರಿಯ ಯೋಜನಾ ನಿರ್ದೇಶಕ ರಘುವೀರಸಿಂಗ್ ಮಾತನಾಡಿ, ಬಾಲ ಕಾರ್ಮಿಕರನ್ನು ಕೆಲಸಕ್ಕೆ ಇಟ್ಟುಕೊಂಡಲ್ಲಿ ತಪ್ಪಿತಸ್ಥ ಮಾಲೀಕರುಗಳಿಗೆ 6 ತಿಂಗಳಿಂದ 2 ವರ್ಷ ಜೈಲು ಶಿಕ್ಷೆ ಅಥವಾ ರೂ.20ಸಾವಿರದಿಂದ ರೂ.50ಸಾವಿರ ವರೆಗೆ ದಂಡ ಅಥವಾ ಎರಡನ್ನೂ ಸಹ ನ್ಯಾಯಾಲಯವು ವಿಧಿಸಬಹುದಾಗಿದೆ ಎಂದು ಎಚ್ಚರಿಸಿದರು.
ಅಲ್ಲದೆ ಕಿಶೋರ ಕಾರ್ಮಿಕರನ್ನು ಕೆಲಸಕ್ಕೆ ಸೇರಿಸಲು ಹಾಗೂ ನೆರವು ನೀಡಿದ ಪಾಲಕರ ಮೇಲೆಯೂ ಸಹ ಮೊಕದ್ದಮೆ ದಾಖಲಿಸಲಾಗುವುದು.
ಬಾಲ ಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆ ಮಾಡುವುದು ಕೇಂದ್ರ ಮತ್ತು ರಾಜ್ಯ ಸರ್ಕಾರದ ಜವಾಬ್ದಾರಿಯಾಗಿರುವ ಪ್ರಯುಕ್ತ ಈ ಯೋಜನೆಯಿಂದ ಸಾವಿರಾರು ಮಕ್ಕಳು ಜೀವನದಲ್ಲಿ ಆಶಾ ಕೀರಣ ಮೂಡಿಸಬಹುದಾಗಿದೆ. ಇದಕ್ಕೆ ಸರ್ವರೂ ಕೈಜೋಡಿಸುವ ಅಗತ್ಯವಿದೆ ಎಂದರು.
ವೇದಿಕೆಯಲ್ಲಿ ನಗರದ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿ ತಾಲೂಕು ಕಾನೂನು ಸೇವಾ ಸಮಿತಿಯ ಹಣಮಂತ್ರಾವ ಕುಲ್ಕರ್ಣಿ, ಉಪ ತಹಸೀಲ್ದಾರ ಶ್ರೀಧರಾಚಾರ್ಯ ಅಧ್ಯಕ್ಷತೆ ವಹಿಸಿದ್ದರು.
ತಾಪಂ ಇಓ ಡಾ.ಎಸ್.ಕೆ.ಟಕ್ಕಳಕಿ, ಬಿಇಓ ಹಣಮಂತಪ್ಪ ನಾಟೇಕಾರ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗಂಗಪ್ಪ, ಪೌರಾಯುಕ್ತ ಬಸವರಾಜ ಶಿವಪೂಜೆ, ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಾವುತಪ್ಪ ಹವಾಲ್ದಾರ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಡಾ.ಹಣಮಂತ್ರಾಯ ಕರಡಿ, ಸದಸ್ಯರಾದ ಪ್ರೋ.ಜಿ.ಹೆಚ್.ಗೀತಾ, ವಕೀಲ ಚಂದ್ರಶೇಖರ ಲಿಂಗದಳ್ಳಿ, ತಾಲೂಕು ವಕೀಲರ ಸಂಘದ ಅಧ್ಯಕ್ಷ ಸಾಲೋಮನ್ ಆಲ್ಫ್ರೆಡ್, ಆದರ್ಶ ವಿದ್ಯಾಲಯದ ಶಿಕ್ಷಕ ರವಿಚಂದ್ರ, ಕಾನೂನು ಮತ್ತು ಪರಿವೀಕ್ಷಣಾಧಿಕಾರಿ ರಾಜೇಂದ್ರ ಯಾದವ, ಜಿಲ್ಲಾ ಮ್ಯಾಕನಿಕ್ ಸೇವಾ ಸಂಘದ ಅಧ್ಯಕ್ಷ ಪ್ರಕಾಶ ಚವ್ಹಾಣ, ಕಾರ್ಯದರ್ಶಿ ಇಮ್ರಾನ್ ಖಾಜಿ ಡೈಮಂಡ್, ಸಲಹೆಗಾರ ಅಹ್ಮದ್ ಹುಸೇನ್, ತಾಲೂಕು ಕಾರ್ಮಿಕ ನಿರೀಕ್ಷಕ ಶಿವಶಂಕರ ತಳವಾರ ಇದ್ದರು.
ಸಂಪನ್ಮೂಲ ವ್ಯಕ್ತಿಗಳಾದ ವಕೀಲ ಎಂ.ಎನ್.ಪೂಜಾರಿ, ಸಮಾಜ ಕಾರ್ಯಕರ್ತ ದಶರಥ ನಾಯಕ ಅವರು ಬಾಲ ಕಾರ್ಮಿಕ ಪದ್ಧತಿ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಅನಿತಾ ಬಡಿಗೇರ ಹಾಗೂ ವಿದ್ಯಾಲಯದ ಮಕ್ಕಳು ಪ್ರಾರ್ಥಿಸಿದರು. ಕಾರ್ಯಕ್ರಮದಲ್ಲಿ ನಗರದ ಬಹುತೇಕ ಶಾಲೆಗಳ ಮುಖ್ಯಗುರುಗಳು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಶಿಕ್ಷಕ ವೃಂದದವರು ಭಾಗವಹಿಸಿದ್ದರು.